ಚೆನ್ನೈ : ಕಾವೇರಿ ನೀರು ಹಂಚಿಕೆ ಹಾಗೂ ಮೇಕೆದಾಟು ಅಣೆಕಟ್ಟು ನಿರ್ಮಾಣ ವಿವಾದವು ತಮಿಳುನಾಡು ವಿಧಾನಸಭೆಯಲ್ಲಿ ಕಾವೇರಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಕಲಾಪದಲ್ಲಿ ಮೇಕೆದಾಟು ಯೋಜನೆ ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ನೇರವಾಗಿ ಪ್ರಶ್ನಿಸಿದರು. ನೆರೆಯ ಕರ್ನಾಟಕ ಸರ್ಕಾರವು ಮೇಕೆದಾಟು ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆದು ಒಗ್ಗಟ್ಟು ಪ್ರದರ್ಶಿಸಿದೆ. ಆದರೆ ತಮಿಳುನಾಡಿನ ಟಿವಿಕೆ (TVK) ಸರ್ಕಾರ ಸರ್ವಪಕ್ಷ ಸಭೆ ಕರೆಯಲು ಏಕೆ ಹಿಂಜರಿಯುತ್ತಿದೆ ಎಂದು ಉದಯನಿಧಿ ಕಿಡಿಕಾರಿದರು.
ಉದಯನಿಧಿ ಅವರ ಆರೋಪಗಳಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ವಿಜಯ್, ಮೇಕೆದಾಟು ಯೋಜನೆ ವಿರುದ್ಧ ವಿಧಾನಸಭೆಯಲ್ಲಿ ಈಗಾಗಲೇ ನಿರ್ಣಯ ಅಂಗೀಕರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ತಮಿಳುನಾಡು ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದ ಅವರು, 1969ರಲ್ಲೇ ಕರ್ನಾಟಕದ ಯೋಜನೆಗಳಿಗೆ ಅನುಮತಿ ನೀಡಿದ್ದು ಇದೇ ಡಿಎಂಕೆ ಸರ್ಕಾರ ಎಂದು ಹಳೆಯ ಇತಿಹಾಸವನ್ನು ನೆನಪಿಸಿ ತಿರುಗೇಟು ನೀಡಿದರು.
ಬೆಂಗಳೂರು ಪ್ರವಾಸ ಪ್ರಸ್ತಾಪಿಸಿ ಆಕ್ರೋಶ
ಚರ್ಚೆಯ ವೇಳೆ ವಿಜಯ್ ಅವರ ಬೆಂಗಳೂರು ಪ್ರವಾಸದ ಪ್ರಸ್ತಾಪವನ್ನು ಉದಯನಿಧಿ ಎತ್ತಿದರು. ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಭೇಟಿ ನೀಡಿ ಮಾತುಕತೆ ನಡೆಸಲು ಯೋಜಿಸಿದ್ದರು, ಆದರೆ ವಿರೋಧ ವ್ಯಕ್ತವಾದ ತಕ್ಷಣ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಉದಯನಿಧಿ ಆರೋಪಿಸಿದರು. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತುತ ವಾತಾವರಣ ಸರಿಯಿಲ್ಲದ ಕಾರಣ ಪ್ರವಾಸವನ್ನು ಮುಂದೂಡುವಂತೆ ವಿಜಯ್ ಅವರಿಗೆ ಇತ್ತೀಚೆಗೆ ಮನವಿ ಮಾಡಿದ್ದರು.
ಕರ್ನಾಟಕದೊಂದಿಗಿನ ಮಾತುಕತೆಯ ಪ್ರಸ್ತಾಪವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ವಿಜಯ್, “ವೈರಿ ದೇಶಗಳೇ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಯತ್ನಿಸುತ್ತಿರುವಾಗ, ನೆರೆಯ ರಾಜ್ಯದೊಂದಿಗೆ ಮಾತುಕತೆ ನಡೆಸುವುದು ತಪ್ಪೇ?” ಎಂದು ಪ್ರಶ್ನಿಸಿದರು. “ಇಂತಹ ಪ್ರಯತ್ನದಿಂದ ನಮಗೆ ಅವಮಾನವಾದರೆ ಏನು ಮಾಡುವುದು ಎಂದು ಕೆಲವರು ಕೇಳುತ್ತಿದ್ದಾರೆ. ತಮಿಳುನಾಡಿನ ಜನರ ಹಿತಕ್ಕಾಗಿ ನಾನು ಎಂತಹ ಅವಮಾನವನ್ನು ಅನುಭವಿಸಲೂ ಸಿದ್ಧ” ಎಂದು ಸದನದಲ್ಲಿ ಖಡಕ್ ಆಗಿ ಉತ್ತರಿಸಿದರು.
ರಾಮನಗರ ಜಿಲ್ಲೆಯಲ್ಲಿ (ಬೆಂಗಳೂರು ದಕ್ಷಿಣ) ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಜಲಾಶಯ ಯೋಜನೆಯು ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಹಾಗೂ 400 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಿದೆ. ತಮಿಳುನಾಡಿಗೆ ನಿಗದಿಯಾಗಿರುವ ಕಾವೇರಿ ನೀರಿನ ಪಾಲಿನಲ್ಲಿ ಯಾವುದೇ ಕೊರತೆಯಾಗುವುದಿಲ್ಲ ಎಂದು ಕರ್ನಾಟಕ ಭರವಸೆ ನೀಡುತ್ತಿದೆ.
ಆದರೆ, ತಮಿಳುನಾಡು ಸರ್ಕಾರ ಇದನ್ನು ತೀವ್ರವಾಗಿ ವಿರೋಧಿಸುತ್ತಿದೆ. ಕರ್ನಾಟಕ ಸರ್ಕಾರ ಪರಿಷ್ಕೃತ ವಿಸ್ತೃತ ಯೋಜನಾ ವರದಿ (DPR) ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದು, ಕೇಂದ್ರ ಜಲ ಶಕ್ತಿ ಸಚಿವಾಲಯ ಹಾಗೂ ಕೇಂದ್ರ ಜಲ ಆಯೋಗವು ತಮಿಳುನಾಡಿನ ಆಕ್ಷೇಪಗಳ ನಡುವೆಯೂ ಕರ್ನಾಟಕದ ಪ್ರಸ್ತಾಪವನ್ನು ಪರಿಗಣಿಸುತ್ತಿರುವುದಕ್ಕೆ ಸಿಎಂ ವಿಜಯ್ ಕೇಂದ್ರ ಸರ್ಕಾರಕ್ಕೂ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ : ಸಚಿವ ಸ್ಥಾನ ಕೈತಪ್ಪಿದ ಬೇಸರ ; ರಾಹುಲ್ ಕರೆಗೂ ಪಟ್ಟು ಸಡಿಲಿಸದ ಕೃಷ್ಣಪ್ಪ.. ಮುಂದೇನು?



















