ನವದೆಹಲಿ : ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ಮೂಲಕ ದೇಶಾದ್ಯಂತ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿ ಹೊರಹೊಮ್ಮಿರುವ ಬೀದಿಬದಿ ವ್ಯಾಪಾರಿ ಮೊಹಮ್ಮದ್ ಇರ್ಫಾನ್, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ದಿಟ್ಟ ಹಾಗೂ ನಿಸ್ಸಂಕೋಚದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
“ನೀವು ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತು ತಪ್ಪಿದರೆ, ನಿಮ್ಮ ವಿರುದ್ಧವೂ ಬೀದಿಗಿಳಿದು ಹೋರಾಟ ಮಾಡುತ್ತೇವೆ,” ಎಂದು ಇರ್ಫಾನ್ ಅವರು ರಾಹುಲ್ ಗಾಂಧಿಗೆ ನೇರವಾಗಿಯೇ ಎಚ್ಚರಿಸಿದ್ದಾರೆ. ದೆಹಲಿಯ ಸಾವ್ಡಾ ಜೆಜೆ ಕಾಲೋನಿಯ ನಿವಾಸಿಯಾಗಿರುವ ಇರ್ಫಾನ್, ರಾಹುಲ್ ಗಾಂಧಿ ಭೇಟಿಯ ವೇಳೆ ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ದಿನಗೂಲಿ ಕಾರ್ಮಿಕರ ಆತ್ಮಹತ್ಯೆ ಮತ್ತು ಅವರ ಆರ್ಥಿಕ ಸಂಕಷ್ಟಗಳ ಕುರಿತು ಧ್ವನಿ ಎತ್ತಿದ್ದಾರೆ.
ಸರ್ಕಾರದ ದಾಖಲೆಗಳಲ್ಲಿ ಕನಿಷ್ಠ ವೇತನ 18,000 ರೂ. ಎಂದಿದ್ದರೂ, ಕಾರ್ಮಿಕರಿಗೆ ದಿನಕ್ಕೆ 10-11 ಗಂಟೆ ದುಡಿದರೂ ಸಿಗುತ್ತಿರುವುದು ಕೇವಲ 13 ರಿಂದ 14 ಸಾವಿರ ರೂಪಾಯಿ ಮಾತ್ರ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಹಿತಾಸಕ್ತಿಯಿಲ್ಲದೆ, ದೇಶದ ಪ್ರತಿಯೊಬ್ಬ ದೀನದಲಿತರಿಗೂ ಮೂಲಭೂತ ಸೌಕರ್ಯಗಳು ಸಿಗಬೇಕು ಎಂಬುದು ತಮ್ಮ ನಿಲುವು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಕರೆ, ಕುತೂಹಲಕಾರಿ ಸಂಭಾಷಣೆ
ರಾಹುಲ್ ಗಾಂಧಿ ಅವರೊಂದಿಗಿನ ಸಂಭಾಷಣೆಯ ಮಧ್ಯೆ ಸಂಸದೆ ಪ್ರಿಯಾಂಕಾ ಗಾಂಧಿ ಕರೆ ಮಾಡಿದ್ದು, ಮತ್ತೊಂದು ಸ್ವಾರಸ್ಯಕರ ಘಟನೆಗೆ ಕಾರಣವಾಯಿತು. “ದಯವಿಟ್ಟು ರಾಹುಲ್ ಗಾಂಧಿಗೆ ಮದುವೆಯಾಗಲು ಹೇಳಿ, ಅವರು ನನ್ನ ಮಾತು ಕೇಳುತ್ತಿಲ್ಲ,” ಎಂದು ಪ್ರಿಯಾಂಕಾ ಅವರು ಇರ್ಫಾನ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ತಮಾಷೆಯಾಗಿ ಉತ್ತರಿಸಿರುವ ಇರ್ಫಾನ್, “ರಾಹುಲ್ ಗಾಂಧಿ ಮದುವೆಯಾಗದಿರುವುದೇ ಒಳಿತು. ಅವರು ತೀರಾ ಸರಳ ಹಾಗೂ ಒಳ್ಳೆಯ ಹೃದಯವುಳ್ಳ ವ್ಯಕ್ತಿ,” ಎಂದು ಚಟಾಕಿ ಹಾರಿಸಿದ್ದಾರೆ. ಭೇಟಿಯ ನಂತರ ‘ಎಕ್ಸ್’ನಲ್ಲಿ ಈ ಕುರಿತು ಬರೆದುಕೊಂಡ ರಾಹುಲ್, ಇರ್ಫಾನ್ ಅವರಂತಹ ಯುವಕರೇ ದೇಶದ ನಿಜವಾದ ಭರವಸೆ ಎಂದು ಶ್ಲಾಘಿಸಿದ್ದಾರೆ.
ಮೋದಿಗಿಂತ ಮುನ್ನ ಅಮಿತ್ ಶಾ ಭೇಟಿಗೆ ಇರ್ಫಾನ್ ಇಚ್ಛೆ
ಯಾವುದೇ ಶಾಲೆಗೆ ಹೋಗದೆ, ಓದು-ಬರಹ ಬಾರದಿದ್ದರೂ ‘ಯೂಟ್ಯೂಬ್ ಯೂನಿವರ್ಸಿಟಿ’ ಮತ್ತು ಗೂಗಲ್ ವಾಯ್ಸ್ ಸರ್ಚ್ ಮೂಲಕ ಜ್ಞಾನಾರ್ಜನೆ ಮಾಡಿಕೊಂಡಿರುವ ಇರ್ಫಾನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮುನ್ನ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಬಯಸಿದ್ದಾರೆ. ತಮ್ಮ ಕೊಳಚೆ ಪ್ರದೇಶಗಳಲ್ಲಿ 12 ವರ್ಷದ ಮಗುವಿಗೂ ಗಾಂಜಾ ಮತ್ತು ಮಾದಕ ದ್ರವ್ಯಗಳು ಎಲ್ಲಿ ಸಿಗುತ್ತವೆ ಎಂಬುದು ಗೊತ್ತಿದ್ದರೂ, ಪೊಲೀಸರಿಗೆ ಏಕೆ ಏನೂ ಮಾಡುತ್ತಿಲ್ಲ ಎಂಬ ಪ್ರಶ್ನೆಯನ್ನು ಅಮಿತ್ ಶಾ ಅವರ ಮುಂದೆ ಇಡಲು ಕಾಯುತ್ತಿರುವುದಾಗಿ ಇರ್ಫಾನ್ ಹೇಳಿದ್ದಾರೆ. ಸಂವಿಧಾನದ ಪೀಠಿಕೆಯನ್ನು ಉಲ್ಲೇಖಿಸಿ ಮಾತನಾಡಿದ್ದ ಇರ್ಫಾನ್, ಸಮಾನತೆಯ ತತ್ವಗಳಿದ್ದರೂ ದೇಶದಲ್ಲಿ ಇಷ್ಟೊಂದು ಜನ ಬಡತನದಲ್ಲಿ ಉಳಿದಿದ್ದೇಕೆ ಎಂದು ಪ್ರಶ್ನಿಸುವ ಮೂಲಕ ಭಾರೀ ಸುದ್ದಿಯಾಗಿದ್ದರು.
ಇದನ್ನೂ ಓದಿ : ಪ್ರಧಾನಿ ಮೋದಿ ವಿಡಿಯೋ ಡಿಲೀಟ್ ಮಾಡಿ ಕ್ಷಮೆಯಾಚಿಸಿದ ಮೆಟಾ : ಸಂಸ್ಥೆ ಮುಖ್ಯಸ್ಥರಿಗೆ ಸರ್ಕಾರ ಸಮನ್ಸ್!



















