ಡೆಹ್ರಾಡೂನ್ : ಉತ್ತರಾಖಂಡ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎದ್ದಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ಅವರ ಆಪ್ತ ಸಹಾಯಕ (ಪಿಎ) ಚಂದನ್ ಸಿಂಗ್ ಜೀನಾ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ಮೌಲ್ಯದ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡ ಬೆನ್ನಲ್ಲೇ ರಾವತ್ ಅವರು ಪಕ್ಷದ ಎಲ್ಲಾ ಪ್ರಮುಖ ಸಂಘಟನಾತ್ಮಕ ಹುದ್ದೆಗಳಿಗೆ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ.
2016ರಲ್ಲಿ ನಡೆದ ಉತ್ತರಾಖಂಡ ಅಧೀನ ಸೇವೆಗಳ ಆಯ್ಕೆ ಆಯೋಗದ (UKSSSC) ಗ್ರಾಮ ಪಂಚಾಯತ್ ವಿಕಾಸ್ ಅಧಿಕಾರಿ ನೇಮಕಾತಿ ಪರೀಕ್ಷೆಯ ಅಕ್ರಮ ಮತ್ತು ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡೆಹ್ರಾಡೂನ್ನಲ್ಲಿರುವ ಜೀನಾ ಅವರ ಮನೆ ಸೇರಿದಂತೆ ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ದಾಳಿಯ ವೇಳೆ ಜೀನಾ ಅವರ ನಿವಾಸದಲ್ಲಿ ಬಗೆದಷ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ. ಅಧಿಕಾರಿಗಳು 32 ಲಕ್ಷ ರೂಪಾಯಿ ನಗದು, 200.5 ಗ್ರಾಂ ತೂಕದ 13 ಚಿನ್ನದ ನಾಣ್ಯಗಳು ಮತ್ತು 7 ಚಿನ್ನದ ಚೈನ್ಗಳು ಹಾಗೂ ರೋಲೆಕ್ಸ್, ರಾಡೋದಂತಹ ಪ್ರಸಿದ್ಧ ಬ್ರ್ಯಾಂಡ್ಗಳ 12 ದುಬಾರಿ ಐಷಾರಾಮಿ ವಾಚ್ಗಳನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಜೀನಾ ಹಾಗೂ ಅವರ ಕುಟುಂಬದ ಬ್ಯಾಂಕ್ ಖಾತೆಗಳಲ್ಲಿದ್ದ 52.16 ಲಕ್ಷ ರೂಪಾಯಿ ಹಣವನ್ನು ಫ್ರೀಜ್ ಮಾಡಿದ್ದಾರೆ.
ಒಎಂಆರ್ (OMR) ಉತ್ತರ ಪತ್ರಿಕೆಗಳನ್ನು ಅಕ್ರಮವಾಗಿ ತಿದ್ದಿ, ಖಾಲಿ ಬಿಟ್ಟಿದ್ದ ಜಾಗಗಳನ್ನು ಖಾಸಗಿ ಕಂಪನಿಯ ಸಿಬ್ಬಂದಿ ಮೂಲಕ ಭರ್ತಿ ಮಾಡಿಸಿ ಕೋಟ್ಯಂತರ ರೂಪಾಯಿ ಲಂಚ ಪಡೆಯಲಾಗಿತ್ತು ಎಂಬ ಗಂಭೀರ ಆರೋಪ ಈ ಪ್ರಕರಣದಲ್ಲಿದೆ. 2014 ರಿಂದ 2017 ರವರೆಗೆ ರಾವತ್ ಸಿಎಂ ಆಗಿದ್ದಾಗ ಜೀನಾ ಅವರು ಓಎಸ್ಡಿ (OSD) ಆಗಿ ಕಾರ್ಯನಿರ್ವಹಿಸಿದ್ದರು.
ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನಿರ್ಧಾರ
ಆಪ್ತನ ಮೇಲಿನ ಈ ದಾಳಿಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗಬಾರದು ಮತ್ತು ಭ್ರಷ್ಟಾಚಾರದ ವಿರುದ್ಧ ಪಕ್ಷ ನಡೆಸುತ್ತಿರುವ ಹೋರಾಟಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಹರೀಶ್ ರಾವತ್ ಈ ನಿರ್ಧಾರ ಕೈಗೊಂಡಿದ್ದಾರೆ. ತಾವು ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ (UPCC) ಕಾರ್ಯಕಾರಿ ಸಮಿತಿ ಸದಸ್ಯತ್ವ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಶಾಶ್ವತ ಆಹ್ವಾನಿತ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ
ಈ ಬೆಳವಣಿಗೆಯ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ರಾವತ್, ಜೀನಾ ತಮ್ಮ ಸುದೀರ್ಘ ಅವಧಿಯ ಸಹೋದ್ಯೋಗಿ ಹಾಗೂ ಶ್ರಮಜೀವಿ ಎಂದು ಬಣ್ಣಿಸಿದ್ದಾರೆ. ಜೀನಾ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ ಎಂದು ಹೇಳಿರುವ ಅವರು, “ಒಂದು ವೇಳೆ ತನಿಖೆಯಲ್ಲಿ ಅವರ ಮೇಲಿನ ಆರೋಪ ಸಾಬೀತಾದರೆ ನನಗೆ ನಿಜಕ್ಕೂ ನಾಚಿಕೆಯಾಗುತ್ತದೆ,” ಎಂದಿದ್ದಾರೆ. ಆದರೆ ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿರುವಾಗ ತಮ್ಮ ವಿರುದ್ಧ ರಾಜಕೀಯ ಸಂಚು ರೂಪಿಸಲು ಈ ದಾಳಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಅವರು, ರಾಹುಲ್ ಗಾಂಧಿ ಅವರ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ತಮ್ಮಿಂದ ಯಾವುದೇ ಅಡೆತಡೆಯಾಗಬಾರದು ಎಂಬ ಕಾರಣಕ್ಕೆ ಹುದ್ದೆ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : ವಾಹನ ಮಾಲೀಕರಿಗೆ ಗುಡ್ ನ್ಯೂಸ್ ; ಫಾಸ್ಟ್ಯಾಗ್ ಬ್ಯಾಂಕ್ ಬದಲಾವಣೆ ಈಗ ಸುಲಭ.. ಏನಿದು ಒನ್ ಟ್ಯಾಗ್?



















