ರಾಂಚಿ : ಬೀದಿಬದಿಯ ಪಾನಿಪುರಿ ಎಂದರೆ ಬಹುತೇಕರಿಗೆ ಅಚ್ಚುಮೆಚ್ಚು. ಅದರಲ್ಲೂ ಹೆಣ್ಣುಮಕ್ಕಳಿಗಂತೂ ಪಂಚಪ್ರಾಣ. ಆದರೆ, ಇದೇ ಪಾನಿಪುರಿ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರಬಲ್ಲದು ಎಂಬುದಕ್ಕೆ ಜಾರ್ಖಂಡ್ನಲ್ಲಿ ನಡೆದ ದುರಂತವೇ ಸಾಕ್ಷಿ.
ಗಿರಿದಿಹ್ ಜಿಲ್ಲೆಯ ಲೇಡಾ ಬಾಜ್ಟೋ ಗ್ರಾಮದಲ್ಲಿ ಇತ್ತೀಚೆಗೆ ರಸ್ತೆ ಬದಿಯ ವ್ಯಾಪಾರಿಯೊಬ್ಬನ ಬಳಿ ಪಾನಿಪುರಿ ತಿಂದ ಹಲವು ಗ್ರಾಮಸ್ಥರು ಹಾಗೂ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಬಹುತೇಕರಲ್ಲಿ ವಾಂತಿ ಮತ್ತು ಸುಸ್ತು ಕಾಣಿಸಿಕೊಂಡು, ಬೆಳಗಾಗುತ್ತಿದ್ದಂತೆ ಬರೋಬ್ಬರಿ 18 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದುರದೃಷ್ಟವಶಾತ್, ಏಳು ವರ್ಷದ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸಣ್ಣದೊಂದು ನಿರ್ಲಕ್ಷ್ಯ ಹೇಗೆ ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದನ್ನು ಈ ಘಟನೆ ಎಚ್ಚರಿಸಿದೆ.
ಪಾನಿಪುರಿ ವಿಷಕಾರಿಯಾಗಲು ಕಾರಣವೇನು?
ನೋಡುವಾಗ ಬಾಯಲ್ಲಿ ನೀರೂರಿಸುವ ಪಾನಿಪುರಿಯು, ಬೇಸಿಗೆಯ ಬಿಸಿಲಿನಲ್ಲಿ ಸೂಕ್ತ ನಿರ್ವಹಣೆ ಇಲ್ಲದಿದ್ದರೆ ಹೇಗೆ ಮಾರಣಾಂತಿಕವಾಗುತ್ತದೆ ಎಂಬುದನ್ನು ವೈದ್ಯಕೀಯ ತಜ್ಞೆ ಡಾ. ಅರ್ಚನಾ ಬಾತ್ರಾ ವಿವರಿಸಿದ್ದಾರೆ. ಅವರ ಪ್ರಕಾರ, ಕಲುಷಿತ ನೀರು, ಹಸಿ ಪದಾರ್ಥಗಳು ಹಾಗೂ ನೈರ್ಮಲ್ಯದ ಕೊರತೆಯಿಂದಾಗಿ ಪಾನಿಪುರಿಯು ಅಪಾಯಕಾರಿಯಾಗಿ ಮಾರ್ಪಡುತ್ತದೆ.
ಇದರಲ್ಲಿ ಬಳಸುವ ಪಾನಿಯೇ ಅತಿ ದೊಡ್ಡ ಸಮಸ್ಯೆಯಾಗಿದ್ದು, ಶುದ್ಧೀಕರಿಸದ ನೀರಿನಲ್ಲಿ ಇ-ಕೋಲೈ (E. coli) ಅಥವಾ ಸಾಲ್ಮೊನೆಲ್ಲಾದಂತಹ (Salmonella) ಹಾನಿಕಾರಕ ಬ್ಯಾಕ್ಟೀರಿಯಾಗಳು ಸುಲಭವಾಗಿ ಸೇರಿಕೊಳ್ಳುತ್ತವೆ. ಬೇಸಿಗೆಯ ಉಷ್ಣಾಂಶದಲ್ಲಿ ಈ ಬ್ಯಾಕ್ಟೀರಿಯಾಗಳು ಅತಿ ವೇಗವಾಗಿ ದ್ವಿಗುಣಗೊಳ್ಳುವುದರಿಂದ, ಸ್ವಲ್ಪಮಟ್ಟಿಗೆ ಕಲುಷಿತಗೊಂಡ ನೀರು ಕೂಡ ಕೆಲವೇ ಗಂಟೆಗಳಲ್ಲಿ ಮಾರಣಾಂತಿಕವಾಗಿ ಬದಲಾಗುತ್ತದೆ.
ಏನೇನು ಅಪಾಯ?
ಪಾನಿಪುರಿಯಲ್ಲಿ ಬಳಸುವ ಬೇಯಿಸಿದ ಆಲೂಗಡ್ಡೆ ಮತ್ತು ಕಡಲೆಕಾಳುಗಳು ತಾಜಾವಾಗಿದ್ದಾಗ ಸುರಕ್ಷಿತವಾಗಿರುತ್ತವೆ. ಆದರೆ, ಅವುಗಳನ್ನು ಬೇಸಿಗೆಯ ಸೆಕೆಯಲ್ಲಿ ದೀರ್ಘಕಾಲದವರೆಗೆ ವಾತಾವರಣದ ಉಷ್ಣಾಂಶದಲ್ಲೇ ತೆರೆದಿಟ್ಟರೆ, ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಹೇಳಿಮಾಡಿಸಿದ ವಾತಾವರಣ ನಿರ್ಮಾಣವಾಗುತ್ತದೆ. ಇದರ ಜೊತೆಗೆ, ವ್ಯಾಪಾರಿಯ ವೈಯಕ್ತಿಕ ನೈರ್ಮಲ್ಯ, ತೊಳೆಯದ ಕೈಗಳು, ಮರುಬಳಕೆ ಮಾಡುವ ಪಾತ್ರೆಗಳು, ಧೂಳು ಹಾಗೂ ನೊಣಗಳು ಕುಳಿತುಕೊಳ್ಳುವುದು ಆಹಾರವನ್ನು ಮತ್ತಷ್ಟು ಕಲುಷಿತಗೊಳಿಸುತ್ತವೆ ಎನ್ನುತ್ತಾರೆ ವೈದ್ಯರು. ಬ್ಯಾಕ್ಟೀರಿಯಾಗಳಿಗಿಂತಲೂ ಅವು ಉತ್ಪಾದಿಸುವ ವಿಷಕಾರಿ ಅಂಶಗಳು ದೇಹ ಸೇರುವುದರಿಂದ ಅತಿ ವೇಗವಾಗಿ ನಿರ್ಜಲೀಕರಣ ಉಂಟಾಗಿ, ಆಂತರಿಕ ಅಂಗಾಂಗಗಳ ಮೇಲೆ ತೀವ್ರ ಒತ್ತಡ ಬೀಳುತ್ತದೆ. ಈ ಸಂದರ್ಭದಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ.
ಚಾಟ್ಸ್ ಸವಿಯುವಾಗ ಇರಲಿ ಎಚ್ಚರಿಕೆ
ನೆಚ್ಚಿನ ಬೀದಿಬದಿ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲದಿದ್ದರೂ, ಜಾಗರೂಕತೆಯಿಂದ ಇರುವುದು ಬಚಾಟ್ಸ್ ಸವಿಯುವಾಗ ಇರಲಿ ಎಚ್ಚರಿಕೆಹಳ ಮುಖ್ಯ ಎನ್ನುತ್ತಾರೆ ತಜ್ಞರು. ಆಹಾರ ಪದಾರ್ಥಗಳ ತಾಜಾತನವನ್ನು ಪ್ರತಿ ಬಾರಿಯೂ ಪರೀಕ್ಷಿಸಲು ಸಾಧ್ಯವಾಗದಿದ್ದರೂ, ಕಣ್ಣೆದುರೇ ತಯಾರಿಸುವ ಚಾಟ್ಸ್ ಸೇವಿಸುವುದು ಉತ್ತಮ. ಅಪರಿಚಿತ ಮೂಲಗಳ ನೀರನ್ನು ಬಳಸುವವರ ಬಳಿ ಹೊಸದಾಗಿ ರುಚಿ ನೋಡುವ ಸಾಹಸಕ್ಕೆ ಕೈಹಾಕದಿರುವುದು ಒಳಿತು.
ವ್ಯಾಪಾರಿಯ ಕೈಗಳು ಸ್ವಚ್ಛವಾಗಿವೆಯೇ ಮತ್ತು ಪದಾರ್ಥಗಳನ್ನು ಮುಚ್ಚಿಡಲಾಗಿದೆಯೇ ಎಂಬುದನ್ನು ಗಮನಿಸಬೇಕು. ದೀರ್ಘಕಾಲದವರೆಗೆ ತೆರೆದಿಟ್ಟ ಚಟ್ನಿ ಮತ್ತು ಸ್ಟಫಿಂಗ್ಗಳು ಹಾಳಾಗುವ ಸಾಧ್ಯತೆಗಳೇ ಹೆಚ್ಚು. ಅಲ್ಲದೆ, ಗ್ರಾಹಕರು ಹೆಚ್ಚಿರುವ ಸ್ಟಾಲ್ಗಳಲ್ಲಿ ಆಹಾರ ಬೇಗನೆ ಖಾಲಿಯಾಗುವುದರಿಂದ ಅಲ್ಲಿ ತಾಜಾ ಆಹಾರ ಸಿಗುವ ಸಾಧ್ಯತೆಗಳಿರುತ್ತವೆ. ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪಿನಂತಹ ಪದಾರ್ಥಗಳನ್ನು ಸರಿಯಾಗಿ ತೊಳೆದು ಬಳಸದಿದ್ದರೂ ರೋಗಾಣುಗಳು ಹರಡುವ ಅಪಾಯವಿರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಗಂಗಾ ಎಕ್ಸ್ಪ್ರೆಸ್ವೇ ಲೋಕಾರ್ಪಣೆ : ಉ.ಪ್ರದೇಶದ ಆರ್ಥಿಕತೆಗೆ ಹೊಸ ವೇಗ!



















