ಲಕ್ನೋ : ಉತ್ತರ ಪ್ರದೇಶದ ಮಹತ್ವಾಕಾಂಕ್ಷಿ ‘ಗಂಗಾ ಎಕ್ಸ್ಪ್ರೆಸ್ವೇ‘ಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡ ಈ 594 ಕಿ.ಮೀ ಉದ್ದದ ಬೃಹತ್ ಹೆದ್ದಾರಿಯು ರಾಜ್ಯದ ಆರ್ಥಿಕತೆಗೆ ಹೊಸ ಮುನ್ನುಡಿ ಬರೆಯಲಿದೆ.
36,230 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಯೋಜನೆ, ಭಾರತದ ಅತಿದೊಡ್ಡ ಗ್ರೀನ್ಫೀಲ್ಡ್ ರಸ್ತೆ ಯೋಜನೆಗಳಲ್ಲಿ ಒಂದಾಗಿದೆ. ಮೀರತ್ನಿಂದ ಪ್ರಯಾಗ್ರಾಜ್ಗೆ ಸಂಪರ್ಕ ಕಲ್ಪಿಸುವ ಈ 6 ಪಥಗಳ ರಸ್ತೆಯಲ್ಲಿ (8 ಪಥಗಳಿಗೆ ವಿಸ್ತರಿಸಲು ಅವಕಾಶವಿದೆ) ವಾಹನಗಳು ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸಬಹುದಾಗಿದೆ. ಇದರಿಂದಾಗಿ ಈ ಹಿಂದೆ 10-12 ಗಂಟೆಗಳಾಗುತ್ತಿದ್ದ ಪ್ರಯಾಣದ ಅವಧಿ ಇದೀಗ ಕೇವಲ 6-8 ಗಂಟೆಗಳಿಗೆ ಇಳಿಕೆಯಾಗಿದೆ.
ಕೇವಲ ಹೆದ್ದಾರಿಯಲ್ಲ, ಬೃಹತ್ ಕೈಗಾರಿಕಾ ಕಾರಿಡಾರ್
ಉತ್ತರ ಪ್ರದೇಶ ಸರ್ಕಾರವು ಈ ಎಕ್ಸ್ಪ್ರೆಸ್ವೇಯನ್ನು ಕೇವಲ ಸಾರಿಗೆ ಸಂಚಾರಕ್ಕೆ ಸೀಮಿತಗೊಳಿಸದೆ, ಒಂದು ಬೃಹತ್ ಕೈಗಾರಿಕಾ, ಲಾಜಿಸ್ಟಿಕ್ಸ್ ಮತ್ತು ಅಭಿವೃದ್ಧಿ ಕಾರಿಡಾರ್ ಆಗಿ ರೂಪಿಸುತ್ತಿದೆ. ಹೆದ್ದಾರಿಯ ಉದ್ದಕ್ಕೂ 12 ಸಮಗ್ರ ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಕ್ಲಸ್ಟರ್ಗಳನ್ನು (IMLC) ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಈಗಾಗಲೇ 6,507 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಬರೋಬ್ಬರಿ 47,000 ಕೋಟಿ ರೂ. ಮೌಲ್ಯದ 987 ಹೂಡಿಕೆ ಪ್ರಸ್ತಾವನೆಗಳು ಈಗಾಗಲೇ ಸರ್ಕಾರದ ಕೈಸೇರಿವೆ. ಜಿಲ್ಲೆಗಳ ಸ್ಥಳೀಯ ಸಾಮರ್ಥ್ಯದ ಆಧಾರದ ಮೇಲೆ ಉತ್ಪಾದನೆ, ಇ-ಕಾಮರ್ಸ್, ಆಹಾರ ಸಂಸ್ಕರಣೆ ಮತ್ತು ಉಗ್ರಾಣಗಳ ನಿರ್ಮಾಣಕ್ಕೆ ಇದು ಹೇಳಿ ಮಾಡಿಸಿದ ತಾಣವಾಗಲಿದೆ.
ಈ ಯೋಜನೆಯು ಉತ್ತರ ಪ್ರದೇಶದ ರಿಯಲ್ ಎಸ್ಟೇಟ್ ಮತ್ತು ವಾಣಿಜ್ಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಮೀರತ್, ಪ್ರಯಾಗ್ರಾಜ್ ಮತ್ತು ಕಾನ್ಪುರದಂತಹ ನಗರಗಳಲ್ಲಿ ಭೂಮಿಯ ಬೆಲೆ ಗಣನೀಯವಾಗಿ ಏರಿಕೆಯಾಗುವ ನಿರೀಕ್ಷೆಯಿದೆ. ತಜ್ಞರ ಪ್ರಕಾರ, ಹೆದ್ದಾರಿಯ 5 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಭೂಮಿಯ ಮೌಲ್ಯವು ಶೇಕಡಾ 30-50 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಟೈಯರ್-2 ಮತ್ತು ಟೈಯರ್-3 ನಗರಗಳಲ್ಲಿ ಇದು ಹೊಸ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಲಿದೆ. ಅಷ್ಟೇ ಅಲ್ಲದೆ, ಲಾಜಿಸ್ಟಿಕ್ಸ್ ಮತ್ತು ಸಾಗಾಟ ವೆಚ್ಚದಲ್ಲಿ ಶೇ.15-20ರಷ್ಟು ಉಳಿತಾಯವಾಗಲಿದ್ದು, ಸರಕು ಸಾಗಣೆ ಸಮಯ ಕಡಿತಗೊಳ್ಳಲಿದೆ. ಎಫ್ಎಂಸಿಜಿ (FMCG), ಜವಳಿ, ಪೀಠೋಪಕರಣ ಹಾಗೂ ಇ-ಕಾಮರ್ಸ್ ವಲಯಗಳಿಗೆ ಇದು ಭಾರೀ ಲಾಭ ತಂದುಕೊಡಲಿದೆ. ಕೃಷಿ ಉತ್ಪನ್ನಗಳು ಮತ್ತು ಕಾರ್ಖಾನೆಗಳ ಸರಕುಗಳನ್ನು ವೇಗವಾಗಿ ಮಾರುಕಟ್ಟೆಗೆ ತಲುಪಿಸಲು ಇದು ಸೇತುವೆಯಾಗಲಿದೆ.
ಪೂರ್ವ-ಪಶ್ಚಿಮ ಬೆಸೆಯುವ ಕೊಂಡಿ ಹಾಗೂ ರಕ್ಷಣಾ ಪ್ರಾಮುಖ್ಯತೆ
ಕೈಗಾರಿಕಾ ದೃಷ್ಟಿಯಿಂದ ಮುಂದುವರಿದಿರುವ ಪಶ್ಚಿಮ ಉತ್ತರ ಪ್ರದೇಶ ಹಾಗೂ ಕೃಷಿ ಪ್ರಧಾನವಾದ ಮತ್ತು ತುಸು ಹಿಂದುಳಿದಿರುವ ಪೂರ್ವ ಉತ್ತರ ಪ್ರದೇಶವನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿ ಈ ಗಂಗಾ ಎಕ್ಸ್ಪ್ರೆಸ್ವೇ ಕಾರ್ಯನಿರ್ವಹಿಸಲಿದೆ. ಮೀರತ್, ಹಾಪುರ್, ಬುಲಂದ್ಶಹರ್, ಅಮ್ರೋಹಾ, ಸಂಭಾಲ್, ಬುದೌನ್, ಶಹಜಹಾನ್ಪುರ, ಹರ್ದೋಯಿ, ಉನ್ನಾವ್, ರಾಯ್ಬರೇಲಿ, ಪ್ರತಾಪ್ಗಢ ಮತ್ತು ಪ್ರಯಾಗ್ರಾಜ್ ಸೇರಿದಂತೆ ಒಟ್ಟು 12 ಜಿಲ್ಲೆಗಳ ಮೇಲೆ ಇದು ಹಾದುಹೋಗುತ್ತದೆ.
ಯಮುನಾ, ಆಗ್ರಾ-ಲಕ್ನೋ ಹಾಗೂ ಜೇವಾರ್ ಎಕ್ಸ್ಪ್ರೆಸ್ವೇಗಳೊಂದಿಗೂ ಇದು ಸಂಪರ್ಕ ಸಾಧಿಸಲಿದೆ. ಮತ್ತೊಂದು ವಿಶೇಷವೆಂದರೆ, ತುರ್ತು ಸಂದರ್ಭಗಳಲ್ಲಿ ಯುದ್ಧ ವಿಮಾನಗಳನ್ನು ಇಳಿಸಲು ಅನುಕೂಲವಾಗುವಂತೆ ಶಹಜಹಾನ್ಪುರದ ಬಳಿ 3.5 ಕಿ.ಮೀ ಉದ್ದದ ಏರ್ಸ್ಟ್ರಿಪ್ ಅನ್ನು ಸಹ ಈ ಹೆದ್ದಾರಿಯಲ್ಲಿ ನಿರ್ಮಿಸಲಾಗಿದೆ. ವಾರಣಾಸಿ, ಪ್ರಯಾಗ್ರಾಜ್ನ ತ್ರಿವೇಣಿ ಸಂಗಮ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸೋದ್ಯಮದ ಹರಿವು ಕೂಡ ಹೆಚ್ಚಾಗಲಿದೆ. ಒಟ್ಟಾರೆಯಾಗಿ, ಗಂಗಾ ಎಕ್ಸ್ಪ್ರೆಸ್ವೇ ಉತ್ತರ ಪ್ರದೇಶದ ಆರ್ಥಿಕ ಮತ್ತು ಪ್ರಾದೇಶಿಕ ಅಭಿವೃದ್ಧಿಯ ನಕ್ಷೆಯನ್ನೇ ಮರುರೂಪಿಸಲಿದೆ.
ಇದನ್ನೂ ಓದಿ : ಕೊಡಗು ಕೇಸ್ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು.. ಉಡುಪಿಯ 32 ಅಕ್ರಮ ಹೋಂ ಸ್ಟೇಗಳ ಮೇಲೆ ದಾಳಿ!



















