ನವದೆಹಲಿ : ಭಾರತದ ಹೆಮ್ಮೆಯ ಪ್ರೀಮಿಯಂ ತಳಿಯ ಮಾವಿನ ಹಣ್ಣುಗಳ ರಫ್ತು ಮಾರುಕಟ್ಟೆಗೆ ಭಾರಿ ಆಘಾತ ಎಂಬಂತೆ, ಭಾರತೀಯ ಸಂಸ್ಕರಣಾ ಘಟಕಗಳಲ್ಲಿ ಕೀಟ ನಿಯಂತ್ರಣ ಪ್ರಕ್ರಿಯೆಯಲ್ಲಿ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರವು ಭಾರತದಿಂದ ಮಾವು ಆಮದು ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಪ್ರಸಕ್ತ ಸಾಲಿನ ಬೇಸಿಗೆಯ ಪ್ರಮುಖ ವ್ಯಾಪಾರದ ಅವಧಿಯಲ್ಲೇ ಜಪಾನ್ ಈ ನಿರ್ಧಾರ ಕೈಗೊಂಡಿರುವುದರಿಂದ ಅಲ್ಫಾನ್ಸೋ, ಕೇಸರ್, ಲಂಗ್ಡಾ ಮತ್ತು ಬಂಗನಪಲ್ಲಿಯಂತಹ ಪ್ರಮುಖ ತಳಿಗಳ ರಫ್ತಿಗೆ ಭಾರಿ ಹೊಡೆತ ಬಿದ್ದಿದೆ.
ಎರಡು ದಶಕಗಳ ಬಳಿಕ ಕಠಿಣ ಕ್ರಮ
ಜಪಾನ್ ಸರ್ಕಾರವು ಕಳೆದ ಎರಡು ದಶಕಗಳಲ್ಲಿ ಭಾರತೀಯ ಮಾವಿನ ಮೇಲೆ ಇಂತಹ ಕಠಿಣ ನಿರ್ಬಂಧ ಹೇರಿರುವುದು ಇದೇ ಮೊದಲು. ಈ ಹಿಂದೆ ಹಣ್ಣು ನೊಣಗಳ (ಫ್ರೂಟ್ ಫ್ಲೈಸ್) ಭೀತಿಯಿಂದಾಗಿ ಜಪಾನ್ ಭಾರತದ ಮಾವನ್ನು ನಿಷೇಧಿಸಿತ್ತು. ಆದರೆ ಭಾರತವು ತನ್ನ ಕೀಟನಾಶಕ ಮತ್ತು ಸಂಸ್ಕರಣಾ ನಿಯಮಗಳನ್ನು ಕಟ್ಟುನಿಟ್ಟಾಗಿಸಿದ ನಂತರ, 2006ರಲ್ಲಿ ಜಪಾನ್ ಈ ನಿಷೇಧವನ್ನು ಹಿಂತೆಗೆದುಕೊಂಡಿತ್ತು. ಇದೀಗ ಜಪಾನ್ನ ಕಟ್ಟುನಿಟ್ಟಾದ ಸಸ್ಯ ಆರೋಗ್ಯ ಮಾನದಂಡಗಳನ್ನು ಪಾಲಿಸುವಲ್ಲಿ ಭಾರತೀಯ ರಫ್ತುದಾರರು ವಿಫಲರಾಗಿದ್ದಾರೆ ಎಂಬ ಆತಂಕ ಮತ್ತೆ ಎದುರಾಗಿದೆ. ಜಪಾನ್ ದೇಶವು ಕೃಷಿ ವಲಯಕ್ಕೆ ಮಾರಕವಾಗಬಲ್ಲ ಕೀಟಗಳ ವಿರುದ್ಧ ‘ಶೂನ್ಯ ಸಹಿಷ್ಣುತೆ’ (ಜೀರೋ ಟಾಲರೆನ್ಸ್) ನೀತಿಯನ್ನು ಅನುಸರಿಸುತ್ತದೆ.

ತಪಾಸಣೆ ವೇಳೆ ಬಯಲಾದ ದೋಷಗಳು
ಪ್ರತಿ ವರ್ಷ ಮಾವು ರಫ್ತು ಋತು ಆರಂಭವಾಗುವ ಮುನ್ನ ಜಪಾನ್ನ ಕ್ವಾರಂಟೈನ್ ಅಧಿಕಾರಿಗಳು ಭಾರತದ ‘ವೇಪರ್ ಹೀಟ್ ಟ್ರೀಟ್ಮೆಂಟ್’ (VHT) ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಯಾವುದೇ ರಾಸಾಯನಿಕ ಬಳಸದೆ, ನಿಯಂತ್ರಿತ ಬಿಸಿ ಮತ್ತು ಆರ್ದ್ರ ಗಾಳಿಯ ಮೂಲಕ ಮಾವಿನ ಹಣ್ಣಿನಲ್ಲಿರುವ ಕೀಟ ಹಾಗೂ ಹಣ್ಣು ನೊಣಗಳ ಲಾರ್ವಾಗಳನ್ನು ನಾಶಪಡಿಸುವ ಈ ಪ್ರಕ್ರಿಯೆ ಕಡ್ಡಾಯವಾಗಿದೆ. ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶದ ರೆಹಮಾನ್ಪುರದಲ್ಲಿರುವ ವಿಎಚ್ಟಿ ಘಟಕದಲ್ಲಿ ಜಪಾನ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಅಲ್ಲಿನ ಧೂಪನ (ಫ್ಯುಮಿಗೇಷನ್) ಮತ್ತು ಸೋಂಕು ನಿವಾರಣಾ ಪ್ರಕ್ರಿಯೆಗಳಲ್ಲಿ ಗಂಭೀರ ನ್ಯೂನತೆಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮಾರ್ಚ್ 25ರ ನಂತರ ನೀಡಲಾದ ತಪಾಸಣಾ ಪ್ರಮಾಣಪತ್ರಗಳನ್ನು ಹೊಂದಿರುವ ಯಾವುದೇ ಮಾವಿನ ರಫ್ತು ಪೆಟ್ಟಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಜಪಾನ್ನ ಯೊಕೊಹಾಮಾ ಪ್ಲಾಂಟ್ ಪ್ರೊಟೆಕ್ಷನ್ ಅಸೋಸಿಯೇಷನ್ ಘೋಷಿಸಿದೆ.
ರಫ್ತುದಾರರಿಗೆ ಮತ್ತು ಬೆಳೆಗಾರರಿಗೆ ಆಘಾತ
ಭಾರತಕ್ಕೆ ಜಪಾನ್ ಅತಿ ದೊಡ್ಡ ಮಾವಿನ ಮಾರುಕಟ್ಟೆಯಲ್ಲದಿದ್ದರೂ, ಅಲ್ಲಿ ಭಾರತೀಯ ಮಾವಿಗೆ ಸಿಗುವ ಪ್ರೀಮಿಯಂ ಬೆಲೆಯಿಂದಾಗಿ ರಫ್ತುದಾರರಿಗೆ ಇದು ಭಾರಿ ಆರ್ಥಿಕ ನಷ್ಟವನ್ನು ಉಂಟುಮಾಡಲಿದೆ. ಭಾರತವು ವಾರ್ಷಿಕವಾಗಿ ಸುಮಾರು 28 ಮಿಲಿಯನ್ ಮೆಟ್ರಿಕ್ ಟನ್ ಮಾವು ಉತ್ಪಾದಿಸುವ ಮೂಲಕ ವಿಶ್ವದಲ್ಲೇ ಅತಿ ದೊಡ್ಡ ಮಾವು ಉತ್ಪಾದಕ ದೇಶವಾಗಿದೆ. ಈ ನಿಷೇಧದಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಕೃಷಿ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯ ಮೇಲಿರುವ ವಿಶ್ವಾಸಕ್ಕೆ ಧಕ್ಕೆ ಬರಬಹುದು ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಎಲ್ ನಿನೋ ಹವಾಮಾನ ವೈಪರೀತ್ಯ ಹಾಗೂ ಅತಿಯಾದ ಉಷ್ಣಾಂಶದಿಂದಾಗಿ ಮಹಾರಾಷ್ಟ್ರದ ಅಲ್ಫಾನ್ಸೋ ವಲಯ ಸೇರಿದಂತೆ ದೇಶದ ಹಲವೆಡೆ ಈಗಾಗಲೇ ಶೇ.85 ರಿಂದ 90 ರಷ್ಟು ಮಾವು ಬೆಳೆ ನಾಶವಾಗಿದೆ. ನಷ್ಟದಲ್ಲಿರುವ ಮಾವು ಬೆಳೆಗಾರರಿಗೆ ಜಪಾನ್ನ ಈ ಹಠಾತ್ ನಿಷೇಧ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ : ಭೀಕರ ಕೌಟುಂಬಿಕ ಹತ್ಯಾಕಾಂಡ | ಮಾಜಿ ಸರಪಂಚ್ ಸೇರಿ ನಾಲ್ವರ ಕೊಲೆ.. ಮೊದಲ ಪತ್ನಿ-ಮಕ್ಕಳ ಬಂಧನ!



















