ಅಜ್ಮೀರ್ : ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಭೀಕರ ಕೌಟುಂಬಿಕ ಕಲಹವೊಂದು ನಾಲ್ವರ ನರಮೇಧದಲ್ಲಿ ಅಂತ್ಯವಾಗಿದೆ. ಮಾಜಿ ಸರಪಂಚ್, ಅವರ ವೃದ್ಧ ತಾಯಿ, ಎರಡನೇ ಪತ್ನಿ ಮತ್ತು ಅಪ್ರಾಪ್ತ ಸೋದರಸೊಸೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಅಪರಾಧವನ್ನು ಮುಚ್ಚಿಹಾಕಲು ಶವಗಳನ್ನು ಕಾರಿನೊಳಗೆ ಹಾಕಿ ಸುಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಜಿಲ್ಲೆಯ ಶ್ರೀರಾಮಪುರ ಗ್ರಾಮದಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಮೊದಲ ಪತ್ನಿ, ಆಕೆಯ ಮಗಳು ಮತ್ತು ಅಪ್ರಾಪ್ತ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪಘಾತದಂತೆ ಬಿಂಬಿಸಲು ಯತ್ನ, ಸಿಕ್ಕಿಬಿದ್ದ ಆರೋಪಿಗಳು
ಅಜ್ಮೀರ್ ನಗರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಹೆದ್ದಾರಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರೊಂದು ಹೊತ್ತಿ ಉರಿಯುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆಕಸ್ಮಿಕ ಅಗ್ನಿ ದುರಂತದಂತೆ ಕಂಡಿದ್ದರೂ, ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ವ್ಯವಸ್ಥಿತ ಕೊಲೆ ಸಂಚು ಬಯಲಾಗಿದೆ.

ಮಾಜಿ ಸರಪಂಚ್ ರಾಮ್ ಸಿಂಗ್ ಚೌಧರಿ, ಅವರ ತಾಯಿ ಪೂಸಿ ದೇವಿ ಮತ್ತು ಸೋದರಸೊಸೆ ಮಹಿಮಾ ಚೌಧರಿ ಅವರ ಸುಟ್ಟ ದೇಹಗಳು ಕಾರಿನೊಳಗೆ ಪತ್ತೆಯಾಗಿದ್ದರೆ, ಎರಡನೇ ಪತ್ನಿ ಸೂರ್ಯಗ್ಯಾನ್ ದೇವಿ ಅವರ ಮೃತದೇಹ ಗಂಟಲು ಸೀಳಿದ ಸ್ಥಿತಿಯಲ್ಲಿ ಹತ್ತಿರದ ಜಮೀನಿನಲ್ಲಿ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಮೊದಲ ಪತ್ನಿ ಸುನಿತಾ, ಪತಿ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಸುಳ್ಳು ಹೇಳಿ ದಾರಿ ತಪ್ಪಿಸಲು ಯತ್ನಿಸಿದ್ದಳು. ಆದರೆ ವೈಜ್ಞಾನಿಕ ತನಿಖೆ ಮತ್ತು ತೀವ್ರ ವಿಚಾರಣೆಯ ನಂತರ ಇಡೀ ಕುಟುಂಬವೇ ಈ ಹತ್ಯಾಕಾಂಡ ನಡೆಸಿರುವುದು ದೃಢಪಟ್ಟಿದೆ.
2 ಮದುವೆ ಮತ್ತು ಮಗನ ಆಕ್ರೋಶವೇ ಕೊಲೆಗೆ ಕಾರಣ
ರಾಮ್ ಸಿಂಗ್ ತನ್ನ ಇಬ್ಬರು ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಇದು ನಿರಂತರ ಜಗಳಕ್ಕೆ ಕಾರಣವಾಗಿತ್ತು. 2005ರಲ್ಲಿ ಸುನಿತಾಳನ್ನು ಮದುವೆಯಾಗಿದ್ದ ರಾಮ್ ಸಿಂಗ್, ಆಕೆಯ ವಿರೋಧದ ನಡುವೆಯೂ 2019 ರಲ್ಲಿ ಜಿಲ್ಲಾ ಕೌನ್ಸಿಲ್ ಸದಸ್ಯೆಯಾಗಿದ್ದ ಸೂರ್ಯಗ್ಯಾನ್ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ವಿಚಾರಣೆಯ ವೇಳೆ ಅಪ್ರಾಪ್ತ ಮಗ ತನಗಾಗುತ್ತಿದ್ದ ಕೌಟುಂಬಿಕ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ತಂದೆ ಪ್ರತಿದಿನ ಮದ್ಯಪಾನ ಮಾಡಿ ತಾಯಿ, ಅಕ್ಕ ಮತ್ತು ನನ್ನ ಮೇಲೆ ತೀವ್ರ ಹಲ್ಲೆ ನಡೆಸುತ್ತಿದ್ದ. ತಾಯಿಯನ್ನು ಮನೆಯಿಂದ ಹೊರಗೆ ಹೋಗಲು ಬಿಡದೆ ಕೇವಲ ಕೆಲಸದಾಕೆಯಂತೆ ನಡೆಸಿಕೊಳ್ಳಲಾಗುತ್ತಿತ್ತು. ಈ ನಿರಂತರ ದೌರ್ಜನ್ಯದಿಂದ ಬೇಸತ್ತಿದ್ದ ಮಗ, ತಂದೆಯನ್ನು ಕೊಲ್ಲಲು ಮೊದಲೇ ಸಂಚು ರೂಪಿಸಿ ಆನ್ಲೈನ್ ಮೂಲಕ ಚಾಕುವನ್ನು ತರಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರವಾಲ್ ಹೇಳಿದ್ದಾರೆ.
ಮಧ್ಯರಾತ್ರಿ ನಡೆಯಿತು ಹತ್ಯಾಕಾಂಡ
ಮೇ 27ರಂದು ರಾಮ್ ಸಿಂಗ್ ಮತ್ತು ಸುನಿತಾ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಅಂದು ಮಧ್ಯರಾತ್ರಿ ತಂದೆ ಮಲಗಿದ್ದಾಗ ಅಪ್ರಾಪ್ತ ಮಗ ಚಾಕುವಿನಿಂದ ಆತನ ಗಂಟಲು ಸೀಳಿ ಕೊಲೆ ಮಾಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಮಲಗಿದ್ದ ಎರಡನೇ ಪತ್ನಿ ಸೂರ್ಯಗ್ಯಾನ್ ಎಚ್ಚರಗೊಂಡು ಕಿರುಚಾಡಿದ್ದರಿಂದ, ವಿಷಯ ಹೊರಬೀಳುವ ಭಯದಿಂದ ಆಕೆಯನ್ನೂ ಕಂಠ ಸೀಳಿ ಹತ್ಯೆ ಮಾಡಲಾಗಿದೆ. ಈ ಗದ್ದಲ ಕೇಳಿ ಓಡಿಬಂದ ಅಜ್ಜಿ ಪೂಸಿ ದೇವಿ ಮತ್ತು ಸೋದರಸೊಸೆ ಮಹಿಮಾ ಅವರ ಮೇಲೆಯೂ ಮಗ, ತಾಯಿ ಹಾಗೂ ಮಗಳು ಸೇರಿ ಮಾರಕಾಸ್ತ್ರ ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿ ಸಾಕ್ಷಿ ನಾಶಕ್ಕಾಗಿ ಕೊಲೆ ಮಾಡಿದ್ದಾರೆ.
ಸಾಕ್ಷ್ಯ ನಾಶಕ್ಕೆ ಕೆಮಿಕಲ್ ಬಳಕೆ
ಹತ್ಯೆಯ ನಂತರ ಮನೆಯಲ್ಲಿದ್ದ ಟ್ರ್ಯಾಕ್ಟರ್ನಿಂದ ಡೀಸೆಲ್ ಕದ್ದು ತಂದ ಆರೋಪಿಗಳು, ಶವಗಳನ್ನು ಎಳೆದುಕೊಂಡು ಹೋಗಿ ಸ್ಕಾರ್ಪಿಯೋ ಕಾರಿನೊಳಗೆ ತುಂಬಿಸಿ, ಮನೆಯಿಂದ 500 ಮೀಟರ್ ದೂರದಲ್ಲಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ತದನಂತರ ಮನೆಯ ಗೋಡೆ ಮತ್ತು ನೆಲದ ಮೇಲಿದ್ದ ರಕ್ತದ ಕಲೆಗಳನ್ನು ನೀರು ಮತ್ತು ರಾಸಾಯನಿಕಗಳನ್ನು ಬಳಸಿ ತೊಳೆಯಲಾಗಿತ್ತು. ಆದರೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ತಪಾಸಣೆ ನಡೆಸಿದಾಗ ಮನೆಯಲ್ಲಿ ಸೂಕ್ಷ್ಮ ರಕ್ತದ ಕಲೆಗಳು, ರಕ್ತಸಿಕ್ತ ಇಟ್ಟಿಗೆಗಳು ಮತ್ತು ಬೆಂಕಿಕಡ್ಡಿ ಪೆಟ್ಟಿಗೆ ಪತ್ತೆಯಾಗಿವೆ. ಮೊಬೈಲ್ ಟವರ್ ಡೇಟಾ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಈ ಹಿಂದೆ ತಂದೆಗೆ ವಿಷ ಉಣಿಸಿ ಮತ್ತು ಗಣಿಗಾರಿಕೆ ಪ್ರದೇಶದ ಬೆಟ್ಟದಿಂದ ತಳ್ಳಿ ಕೊಲ್ಲಲು ಯತ್ನಿಸಿ ವಿಫಲವಾಗಿದ್ದಾಗಿಯೂ ಅಪ್ರಾಪ್ತ ಹುಡುಗ ಪೊಲೀಸರೆದುರು ಒಪ್ಪಿಕೊಂಡಿದ್ದಾನೆ. ಒಟ್ಟಾರೆ ಕೌಟುಂಬಿಕ ಕಿರುಕುಳ ಮತ್ತು ದ್ವೇಷದ ಹಿನ್ನೆಲೆಯಲ್ಲಿ ನಡೆದ ಈ ಭೀಕರ ಕೊಲೆ ಪ್ರಕರಣ ಅಜ್ಮೀರ್ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಇದನ್ನೂ ಓದಿ : ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಭಾವುಕ ಪೋಸ್ಟ್.. ಹೇಳಿದ್ದೇನು?



















