ನವದೆಹಲಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವಂತೆಯೇ, ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ಇತ್ತೀಚೆಗೆ ಪ್ರಕಟಿಸಿದ 12ನೇ ತರಗತಿಯ ಫಲಿತಾಂಶದ ಮರುಮೌಲ್ಯಮಾಪನ ಪ್ರಕ್ರಿಯೆಯು ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಭಾರಿ ಆಕ್ರೋಶ ಹಾಗೂ ಗೊಂದಲಕ್ಕೆ ಕಾರಣವಾಗಿದೆ. ಈ ವರ್ಷ ಡಿಜಿಟಲ್ ಸುಧಾರಣೆಯ ಭಾಗವಾಗಿ ಮಂಡಳಿಯು ಜಾರಿಗೆ ತಂದ ಹೊಸ ವ್ಯವಸ್ಥೆಯು ಸಂಪೂರ್ಣವಾಗಿ ಹಳಿ ತಪ್ಪಿದ್ದು, ಇದರ ಹಿಂದೆ ಇರುವ ಹೈದರಾಬಾದ್ ಮೂಲದ ಸಂಸ್ಥೆಯ ಹಳೆಯ ಇತಿಹಾಸ ಈಗ ಮುನ್ನೆಲೆಗೆ ಬಂದಿದೆ. ಸಿಬಿಎಸ್ಇ ಸಂಸ್ಥೆಯ ಈ ಡಿಜಿಟಲ್ ಮೌಲ್ಯಮಾಪನದ ಹೊಣೆ ಹೊತ್ತಿದ್ದ ಕಂಪನಿಯು 2019ರ ತೆಲಂಗಾಣ ಪರೀಕ್ಷಾ ಹಗರಣದಲ್ಲೂ ಭಾಗಿಯಾಗಿತ್ತು ಎಂಬ ಆಘಾತಕಾರಿ ಸತ್ಯ ಬಹಿರಂಗವಾಗಿದೆ.
ಏನಿದು ಓಎಸ್ಎಂ ತಂತ್ರಜ್ಞಾನ ಮತ್ತು ಎಡವಟ್ಟು?
ಸಿಬಿಎಸ್ಇ ಈ ವರ್ಷ ಮೊದಲ ಬಾರಿಗೆ ‘ಆನ್-ಸ್ಕ್ರೀನ್ ಮಾರ್ಕಿಂಗ್’ (OSM) ಎಂಬ ಹೊಸ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿತ್ತು. ಇದರ ಅಡಿಯಲ್ಲಿ 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಸುಮಾರು 98 ಲಕ್ಷ ಭೌತಿಕ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ, ಶಿಕ್ಷಕರು ಕಂಪ್ಯೂಟರ್ ಪರದೆಯ ಮೇಲೆ ಮೌಲ್ಯಮಾಪನ ಮಾಡಲು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು.
ಆದರೆ, ಮೌಲ್ಯಮಾಪನದಲ್ಲಿ ತೀವ್ರ ಬೇಜವಾಬ್ದಾರಿತನ ತೋರಲಾಗಿದ್ದು, ಉತ್ತರ ಪತ್ರಿಕೆಗಳು ಅದಲುಬದಲಾಗಿರುವುದು, ಮಸುಕಾದ ಸ್ಕ್ಯಾನ್ ಪ್ರತಿಗಳು, ವೆಬ್ಸೈಟ್ ಪೋರ್ಟಲ್ ಕ್ರ್ಯಾಶ್ ಆಗುವುದು ಮತ್ತು ಮರುಮೌಲ್ಯಮಾಪನಕ್ಕೆ ಭಾರಿ ಶುಲ್ಕ ವಿಧಿಸಿರುವುದು ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಹುಸಿಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ತಮ್ಮ ಅದಲುಬದಲಾದ ಹಾಗೂ ಅಸ್ಪಷ್ಟ ಉತ್ತರ ಪತ್ರಿಕೆಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳಪೆ ಸ್ಕ್ಯಾನಿಂಗ್ ವಿರುದ್ಧ ಶಿಕ್ಷಕರ ಆಕ್ಷೇಪ
ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಶಿಕ್ಷಕರು ಕೂಡ ಈ ತಂತ್ರಜ್ಞಾನದ ಗುಣಮಟ್ಟದ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಅಸ್ಪಷ್ಟ ಚಿತ್ರಗಳು ಮತ್ತು ಒಂದೇ ಪುಟ ಎರಡು ಬಾರಿ ದಾಖಲಾಗಿರುವ ಕಾರಣಗಳಿಂದಾಗಿ ಕೇವಲ ಒಬ್ಬರೇ ಶಿಕ್ಷಕರು ಸುಮಾರು 30 ಉತ್ತರ ಪತ್ರಿಕೆಗಳನ್ನು ತಿರಸ್ಕರಿಸಬೇಕಾಗಿ ಬಂದಿತ್ತು ಎಂದು ವರದಿಯಾಗಿದೆ. ಪರೀಕ್ಷೆಗೆ ಮುನ್ನ ನಡೆದ ಪ್ರಾಯೋಗಿಕ ಪರೀಕ್ಷೆಯ ವೇಳೆಯೂ ಶಿಕ್ಷಕರು ಈ ಡಿಜಿಟಲ್ ಲೋಪದೋಷಗಳ ಬಗ್ಗೆ ಮಂಡಳಿಗೆ ಮಾಹಿತಿ ನೀಡಿದ್ದರು ಮತ್ತು ಹಳೆಯ ಸಾಂಪ್ರದಾಯಿಕ ಪೇಪರ್ ಮೌಲ್ಯಮಾಪನ ಪದ್ಧತಿಯೇ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದರು ಎನ್ನಲಾಗಿದೆ.
ತೆಲಂಗಾಣದ ಹಳೇ ಹಗರಣ ಕೊಂಡಿ
ಈ ಇಡೀ ವಿವಾದದ ಕೇಂದ್ರಬಿಂದುವಾಗಿರುವುದು ಹೈದರಾಬಾದ್ ಮೂಲದ ‘ಕೋಯಂಪ್ಟ್ ಎಡು ಟೆಕ್’ (Coempt Edu Teck) ಎಂಬ ಸಂಸ್ಥೆ. ಈ ಕಂಪನಿಯು ಈ ಹಿಂದೆ ‘ಗ್ಲೋಬರೇನಾ ಟೆಕ್ನಾಲಜೀಸ್’ (Globarena Technologies) ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೇ ಸಂಸ್ಥೆ 2019ರ ತೆಲಂಗಾಣ ಇಂಟರ್ಮಿಡಿಯೆಟ್ (ಪ್ಲಸ್ 2) ಪರೀಕ್ಷೆಯ ಮೌಲ್ಯಮಾಪನದಲ್ಲೂ ಭಾರಿ ಅಕ್ರಮ ಎಸಗಿ ಸುದ್ದಿಯಾಗಿತ್ತು. ಅಂದು ತೆಲಂಗಾಣದ ವಿರೋಧ ಪಕ್ಷಗಳು ಈ ಕಂಪನಿಗೆ ರಾಜಕೀಯ ಪ್ರಭಾವ ಬಳಸಿ ಟೆಂಡರ್ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದವು. ಆದರೆ ಕೋಯಂಪ್ಟ್ ಸಂಸ್ಥೆಯ ಮುಖ್ಯಸ್ಥ ವಿ.ಎಸ್.ಎನ್. ರಾಜು ಈ ಆರೋಪಗಳನ್ನು ತಳ್ಳಿಹಾಕಿದ್ದು, ತಾವು ತಾಂತ್ರಿಕ ಮತ್ತು ಆರ್ಥಿಕ ಬಿಡ್ಗಳನ್ನು ಜಯಿಸಿಯೇ ಈ ಗುತ್ತಿಗೆ ಪಡೆದಿರುವುದಾಗಿ ಸಮರ್ಥಿಸಿಕೊಂಡಿದ್ದರು.
ಸಿಬಿಎಸ್ಇ ಹೇಳಿದ್ದೇನು?
ಪೋರ್ಟಲ್ನಲ್ಲಿ ತಾಂತ್ರಿಕ ದೋಷಗಳು ಎದುರಾಗಿರುವುದನ್ನು ಒಪ್ಪಿಕೊಂಡಿರುವ ಸಿಬಿಎಸ್ಇ, ಸದ್ಯ ಮರುಮೌಲ್ಯಮಾಪನ ಪೋರ್ಟಲ್ ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ತಾಂತ್ರಿಕ ಗ್ಲಿಚ್ಗಳಿಂದಾಗಿ ಪಾವತಿಯಾಗಿದ್ದ ಹಣವನ್ನು ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಲಾಗುವುದು ಮತ್ತು ಉತ್ತರ ಪತ್ರಿಕೆಗಳ ಪ್ರತಿಗಳಿಗಾಗಿ ವಿದ್ಯಾರ್ಥಿಗಳು ಹೊಸದಾಗಿ ಯಾವುದೇ ವಿನಂತಿಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ. ಆದಾಗ್ಯೂ, ದೇಶದ ಅತ್ಯಂತ ಪ್ರತಿಷ್ಠಿತ ಮಂಡಳಿಯೊಂದು ಇಂತಹ ವಿವಾದಾತ್ಮಕ ಇತಿಹಾಸವಿರುವ ಸಂಸ್ಥೆಗೆ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಜವಾಬ್ದಾರಿ ನೀಡಿದ್ದು ಹೇಗೆ ಎಂಬ ಪ್ರಶ್ನೆ ಈಗ ಜೋರಾಗಿ ಕೇಳಿಬರುತ್ತಿದೆ.
ಇದನ್ನೂ ಓದಿ : SIR ಪರ ಸುಪ್ರೀಂ ತೀರ್ಪು : ‘ಇದು ಸಂವಿಧಾನಕ್ಕೆ ಜೀವ ತುಂಬುವ ಪ್ರಕ್ರಿಯೆ’ ಎಂದ ನ್ಯಾಯಪೀಠ!



















