ಡೆಹ್ರಾಡೂನ್ : ಉತ್ತರಾಖಂಡದ ಪ್ರಸಿದ್ಧ ಪ್ರವಾಸಿ ತಾಣ ಮುಸ್ಸೋರಿ-ಧನೌಲ್ತಿ ರಸ್ತೆಯ ಹೋಂಸ್ಟೇಯೊಂದರಲ್ಲಿ ದೆಹಲಿ ಮೂಲದ ಸಾಫ್ಟ್ವೇರ್ ಉದ್ಯೋಗಿ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ದ ಘಟನೆಗೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಆಕೆಯ ಪತಿಯನ್ನು ಪೊಲೀಸರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೀಗ ಬಂಧಿಸಿದ್ದಾರೆ.
ಮುಸ್ಸೋರಿ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಪಡೆದ ಡೆಹ್ರಾಡೂನ್ ಪೊಲೀಸರು, ಪೂರ್ವ ದೆಹಲಿಯ ಮಧು ವಿಹಾರ್ ಪ್ರದೇಶದಲ್ಲಿ ಆರೋಪಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಹುಟ್ಟುಹಬ್ಬದ ಸಂಭ್ರಮದ ನಡುವೆ ದುರಂತ
ಮೃತರನ್ನು ದೆಹಲಿಯಲ್ಲಿ ಐಟಿ ಉದ್ಯೋಗಿಯಾಗಿದ್ದ ಪಿ. ರಾಧಾ ಗಾಯತ್ರಿ (27) ಎಂದು ಗುರುತಿಸಲಾಗಿದೆ. ರಾಧಾ ಗಾಯತ್ರಿ ಮತ್ತು ಅವರ ಪತಿ ಇಬ್ಬರೂ ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣಂನವರಾಗಿದ್ದು, ನವೆಂಬರ್ 8, 2025ರಂದು ವಿವಾಹವಾಗಿದ್ದರು. ಪತಿಯ ಹುಟ್ಟುಹಬ್ಬವನ್ನು ಆಚರಿಸಲು ದಂಪತಿ ಮುಸ್ಸೋರಿಗೆ ಪ್ರವಾಸ ಬಂದಿದ್ದರು. ಜೂನ್ 15ರಂದು ಮುಂಜಾನೆ ಹೋಂಸ್ಟೇ ಕೋಣೆಯ ನೆಲದ ಮೇಲೆ ರಾಧಾ ಗಾಯತ್ರಿ ಅವರ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಪೊಲೀಸರಿಗೆ ಹೇಳಿಕೆ ನೀಡಿದ್ದ ಪತಿ, ಜೂನ್ 15 ರ ಮುಂಜಾನೆ 3:30 ರವರೆಗೆ ಇಬ್ಬರೂ ಮದ್ಯ ಸೇವಿಸಿ ಮಲಗಿದ್ದೆವು, ಬೆಳಿಗ್ಗೆ ಎದ್ದು ನೋಡಿದಾಗ ಪತ್ನಿ ಮೃತಪಟ್ಟಿದ್ದರು ಎಂದು ಕಥೆ ಕಟ್ಟಿದ್ದ.
ಕೊಠಡಿಯಲ್ಲಿ ರಕ್ತದ ಕಲೆಗಳು, ಪೋಷಕರ ದೂರು
ಆದರೆ, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಪರಿಸ್ಥಿತಿ ಬೇರೆಯದೇ ಆಗಿತ್ತು. ರಾಧಾ ಗಾಯತ್ರಿ ಅವರ ಮೃತದೇಹ ಕೊಠಡಿಯ ನೆಲದ ಮೇಲೆ ಬಟ್ಟೆಗಳಿಲ್ಲದ ಸ್ಥಿತಿಯಲ್ಲಿ ಬಿದ್ದಿತ್ತು ಮತ್ತು ಹಾಸಿಗೆಯ ಮೇಲೆ ರಕ್ತದ ಕಲೆಗಳಾಗಿದ್ದವು. ಅಲ್ಲದೆ ರೂಮ್ನಲ್ಲಿ ಎರಡು ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದವು. ಮಗಳ ನಿಗೂಢ ಸಾವಿನಿಂದ ದಿಗ್ಭ್ರಮೆಗೊಂಡ ತಂದೆ ಪಿ. ಸುಧಾಕರ್, ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಮಗಳ ಸಾವಿನ ಸತ್ಯಾಸತ್ಯತೆ ಹೊರಬರಬೇಕೆಂದು ಅವರು ತನಿಖೆಗೆ ಒತ್ತಾಯಿಸಿದ್ದರು.
ತಂದೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಒಂದು ತಿಂಗಳ ಕಾಲ ನಡೆದ ಸುದೀರ್ಘ ತನಿಖೆಯ ವೇಳೆ ಪತ್ನಿಯ ಸಾವಿನಲ್ಲಿ ಪತಿಯ ಕೈವಾಡ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಈ ಟೆಕ್ಕಿಯನ್ನು ಹಿಡಿಯಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ವಾರಂಟ್ ಪಡೆದ ಪೊಲೀಸರು ಯಶಸ್ವಿಯಾಗಿ ಆತನನ್ನು ಸೆರೆಹಿಡಿದಿದ್ದಾರೆ. ಸದ್ಯ ಆರೋಪಿ ಜೈಲು ಪಾಲಾಗಿದ್ದು, ಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಮತ್ತೋರ್ವ BLO ಹೃದಯಾಘಾತಕ್ಕೆ ಬಲಿ!



















