ನವದೆಹಲಿ : ದೇಶಾದ್ಯಂತ ಮೇಘಾಲಯ ಹನಿಮೂನ್ ಮರ್ಡರ್ ಎಂದೇ ಕುಖ್ಯಾತಿ ಪಡೆದಿರುವ ಪ್ರಕರಣದ ಆರೋಪಿ ಸೋನಂ ರಘುವಂಶಿಗೆ ಮೇಘಾಲಯದ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಬಂಧನದ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಪೊಲೀಸರು ಮಾಡಿದ ಒಂದು ಬಹುದೊಡ್ಡ ಎಡವಟ್ಟು, ಪ್ರಮುಖ ಆರೋಪಿಗೆ ಸುಲಭವಾಗಿ ಜಾಮೀನು ಸಿಗುವಂತೆ ಮಾಡಿದೆ.
ಅಸ್ತಿತ್ವದಲ್ಲಿಯೇ ಇಲ್ಲದ ಕಾನೂನಿನ ಸೆಕ್ಷನ್ ಅನ್ನು ಪೊಲೀಸರು ಉಲ್ಲೇಖಿಸಿದ್ದು ಈ ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ. ಮೇಘಾಲಯಕ್ಕೆ ಹನಿಮೂನ್ಗೆ ತೆರಳಿದ್ದಾಗ ಪತಿಯನ್ನು ಬರ್ಬರವಾಗಿ ಹತ್ಯೆಗೈದ ಆರೋಪ ಎದುರಿಸುತ್ತಿರುವ ಸೋನಂ ಪೊಲೀಸರ ಎಡವಟ್ಟಿನಿಂದಾಗಿ ಈಗ ಜೈಲಿನಿಂದ ಹೊರಬರುವಂತಾಗಿದೆ.
ಹಳೆಯ ಭಾರತೀಯ ದಂಡ ಸಂಹಿತೆಯ (IPC) ಬದಲಿಗೆ ಜಾರಿಗೆ ಬಂದಿರುವ ನೂತನ ‘ಭಾರತೀಯ ನ್ಯಾಯ ಸಂಹಿತೆ’ಯ (BNS) ಅಡಿಯಲ್ಲಿ ಬಾರದ ‘ಸೆಕ್ಷನ್ 403(1)’ ಅನ್ನು ಪೊಲೀಸರು ಆಕೆಯ ಬಂಧನದ ಮೆಮೊ, ತಪಾಸಣಾ ಮೆಮೊ ಹಾಗೂ ಕೇಸ್ ಡೈರಿಯಲ್ಲಿ ದಾಖಲಿಸಿದ್ದರು. ವಾಸ್ತವದಲ್ಲಿ ಬಿಎನ್ಎಸ್ ಅಡಿಯಲ್ಲಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ ಸೆಕ್ಷನ್ 103(1) ಆಗಿದೆ. ಇದು ಕೇವಲ ಟೈಪಿಂಗ್ ಅಥವಾ ಗುಮಾಸ್ತರ ದೋಷ ಎಂದು ಪೊಲೀಸರು ನ್ಯಾಯಾಲಯದ ಮುಂದೆ ವಾದಿಸಿದ್ದರು. ಆದರೆ, ಪೊಲೀಸರ ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿದ ನ್ಯಾಯಾಲಯ, ಆರೋಪಿಗೆ ಬಂಧನದ ಹಿಂದಿನ ‘ಪರಿಣಾಮಕಾರಿ ಕಾರಣಗಳನ್ನು’ ಸ್ಪಷ್ಟವಾಗಿ ತಿಳಿಸಿಲ್ಲ. ಹಾಗಾಗಿ ಈ ಬಂಧನವೇ ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟು ಜಾಮೀನು ನೀಡಿದೆ.
ವಕೀಲರ ಸಂಪರ್ಕಕ್ಕೂ ಅವಕಾಶ ನೀಡದ ಆರೋಪ
ಕೇವಲ ಸೆಕ್ಷನ್ ಉಲ್ಲೇಖದಲ್ಲಿನ ದೋಷವಷ್ಟೇ ಅಲ್ಲದೆ, ಪೊಲೀಸರ ಮತ್ತೊಂದು ಪ್ರಮುಖ ಲೋಪವನ್ನು ಕೂಡ ನ್ಯಾಯಾಲಯವು ಬೊಟ್ಟು ಮಾಡಿದೆ. ಸೋನಂಳನ್ನು ಬಂಧಿಸಿದ ಬಳಿಕ ಉತ್ತರ ಪ್ರದೇಶದ ಗಾಜೀಪುರ ನ್ಯಾಯಾಲಯಕ್ಕೆ ಮೊದಲ ಬಾರಿಗೆ ಹಾಜರುಪಡಿಸಿದಾಗ, ಆಕೆಗೆ ವಕೀಲರ ಸಂಪರ್ಕ ಒದಗಿಸಿರುವ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ ಎಂದು ಕೋರ್ಟ್ ಹೇಳಿದೆ. ಈ ಕಾರಣದಿಂದಾಗಿ ಆಕೆ ತನ್ನ ಬಂಧನ ಪ್ರಕ್ರಿಯೆಯಲ್ಲಿದ್ದ ದೋಷಗಳನ್ನು ಆರಂಭಿಕ ಹಂತದಲ್ಲಿಯೇ ಪ್ರಶ್ನಿಸಲು ಸಾಧ್ಯವಾಗಲಿಲ್ಲ, ಇದು ಆಕೆಯ ಹಕ್ಕುಗಳ ಉಲ್ಲಂಘನೆ ಎಂದು ನ್ಯಾಯಾಲಯ ಹೇಳಿದೆ.
ಷರತ್ತುಬದ್ಧ ಜಾಮೀನಿಗೆ ಸಹೋದರನ ಅಸಮಾಧಾನ
ಸೋನಂಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದ್ದು, ಪೂರ್ವಾನುಮತಿ ಇಲ್ಲದೆ ಶಿಲ್ಲಾಂಗ್ ಜಿಲ್ಲೆಯನ್ನು ಬಿಟ್ಟು ಹೋಗುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇತ್ತ ಸಹೋದರಿಗೆ ಜಾಮೀನು ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ಆಕೆಯ ಅಣ್ಣ ಗೋವಿಂದ್ ರಘುವಂಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಆಕೆಗೆ ಜಾಮೀನು ಸಿಕ್ಕಿರುವ ವಿಚಾರವಷ್ಟೇ ನಮಗೆ ತಿಳಿದಿದೆ, ಆದರೆ ಆಕೆ ಸದ್ಯ ಎಲ್ಲಿ ಇರುತ್ತಾಳೆಂಬುದು ಗೊತ್ತಿಲ್ಲ. ನಾವು ಸದ್ಯಕ್ಕೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿಯಲ್ಲಿಲ್ಲ. ಒಂದು ವೇಳೆ ನನ್ನ ಪೋಷಕರು ಆಕೆಯನ್ನು ಮನೆಗೆ ಕರೆತಂದರೆ, ನಾನು ಮನೆಯಲ್ಲಿ ಇರುವುದಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.
ಏನಿದು ಪ್ರಕರಣ?
ಕಳೆದ ವರ್ಷ, 2025ರ ಮೇ ತಿಂಗಳಲ್ಲಿ ರಾಜಾ ರಘುವಂಶಿ ಹಾಗೂ ಸೋನಂ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಈ ನವದಂಪತಿ ಮಧ್ಯಪ್ರದೇಶದ ಇಂದೋರ್ನಿಂದ ಮೇಘಾಲಯದ ಶಿಲ್ಲಾಂಗ್ಗೆ ಹನಿಮೂನ್ಗಾಗಿ ತೆರಳಿದ್ದರು. ಆದರೆ, ಪ್ರವಾಸಕ್ಕೆ ಹೋದ ಕೆಲವೇ ದಿನಗಳಲ್ಲಿ ಪತಿ ರಾಜಾ ನಾಪತ್ತೆಯಾಗಿದ್ದ. ಬಳಿಕ ಜೂನ್ 2ರಂದು ಆತನ ಮೃತದೇಹ ಪ್ರಪಾತವೊಂದರಲ್ಲಿ ಪತ್ತೆಯಾಗಿತ್ತು. ತನ್ನ ಪತಿಯನ್ನು ಕೊಲೆ ಮಾಡಲು ಸೋನಂ ಹಲವರೊಂದಿಗೆ ಸೇರಿ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಳು ಎಂದು ಪೊಲೀಸರು ತನಿಖೆ ವೇಳೆ ಆರೋಪಿಸಿದ್ದರು. ಈ ಹೈ-ಪ್ರೊಫೈಲ್ ಪ್ರಕರಣದಲ್ಲಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಈ ಹಿಂದೆ ಮೂವರಿಗೆ ಜಾಮೀನು ಸಿಕ್ಕಿತ್ತು. ಇದೀಗ ಬಂಧನ ಪ್ರಕ್ರಿಯೆಯಲ್ಲಿನ ಗಂಭೀರ ಲೋಪದಿಂದಾಗಿ ಪ್ರಮುಖ ಆರೋಪಿಯೂ ಜಾಮೀನು ಪಡೆದು ಹೊರಬಂದಿರುವುದು ಪ್ರಕರಣದ ಮುಂದಿನ ದಿಕ್ಕನ್ನು ಬದಲಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಬೆಂಗಳೂರಿನ ಡಯಾಗ್ನೋಸ್ಟಿಕ್ ಲ್ಯಾಬ್ನಲ್ಲಿ ಮಹಿಳೆಗೆ ಕಿರುಕುಳ, ಜೀವ ಬೆದರಿಕೆ ಆರೋಪ – ಇಬ್ಬರ ವಿರುದ್ಧ FIR


















