ಟೆಹ್ರಾನ್ : ಯಾವುದೇ ಮಾತುಕತೆ ನಡೆಸದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಅನಿರ್ದಿಷ್ಟಾವಧಿ ಕದನ ವಿರಾಮದ ನಿರ್ಧಾರವನ್ನು ಇರಾನ್ ಲೇವಡಿ ಮಾಡಿದೆ. ಇದು ಯುದ್ಧವನ್ನು ನಿಲ್ಲಿಸುವ ಪ್ರಾಮಾಣಿಕ ಪ್ರಯತ್ನವಲ್ಲ, ಬದಲಿಗೆ ಅನಿರೀಕ್ಷಿತ ದಾಳಿ ನಡೆಸಲು ಬೇಕಾದ ಸಮಯಾವಕಾಶ ಪಡೆಯಲು ಟ್ರಂಪ್ ಹೂಡಿರುವ ವ್ಯವಸ್ಥಿತ ತಂತ್ರ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಗಲಿಬಾಫ್ ಅವರ ಹಿರಿಯ ಸಲಹೆಗಾರ ಮಹದಿ ಮೊಹಮ್ಮದಿ ಕಿಡಿಕಾರಿದ್ದಾರೆ.
ಅಮೆರಿಕದ ನಡೆಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪ್ರತಿಕ್ರಿಯಿಸಿರುವ ಮೊಹಮ್ಮದಿ, ಸೋಲುತ್ತಿರುವ ಕಡೆಯವರು ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. “ಟ್ರಂಪ್ ಘೋಷಿಸಿರುವ ಕದನ ವಿರಾಮಕ್ಕೆ ಯಾವುದೇ ಅರ್ಥವಿಲ್ಲ. ಒಂದು ದೇಶದ ಮೇಲೆ ಆಕ್ರಮಣ ಮಾಡುವುದು ಮತ್ತು ಬಾಂಬ್ ದಾಳಿ ಮಾಡುವುದು ಎರಡೂ ಒಂದೇ. ಇರಾನ್ ಮೇಲಿನ ದಿಗ್ಬಂಧನ ಮುಂದುವರಿಯುತ್ತಿರುವುದು ಯುದ್ಧಕ್ಕೆ ಸಮಾನವಾಗಿದ್ದು, ಇದಕ್ಕೆ ಮಿಲಿಟರಿ ಮೂಲಕವೇ ಉತ್ತರ ನೀಡಬೇಕಿದೆ. ಇರಾನ್ ಈಗ ತನ್ನ ಮುಂದಿನ ಹೆಜ್ಜೆಯನ್ನು ಇರಿಸುವ ಸಮಯ ಬಂದಿದೆ,” ಎಂದು ಅವರು ಎಚ್ಚರಿಸಿದ್ದಾರೆ.
ಪಾಕಿಸ್ತಾನದ ಮನವಿಗೆ ಓಗೊಟ್ಟ ಟ್ರಂಪ್
ಇದಕ್ಕೂ ಮುನ್ನ ಟ್ರಂಪ್ ಅವರು ಇರಾನ್ ಜೊತೆಗಿನ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುವುದಾಗಿ ಘೋಷಿಸಿದ್ದರು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರ ಮನವಿಯ ಮೇರೆಗೆ ಶಾಂತಿ ಮಾತುಕತೆಗೆ ಹೆಚ್ಚಿನ ಅವಕಾಶ ನೀಡಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಇರಾನ್ ನಾಯಕತ್ವವು ಪ್ರಸ್ತುತ ವಿಭಜನೆಯಾಗಿದ್ದು, ಅವರು ಒಂದು ಒಮ್ಮತದ ಪ್ರಸ್ತಾವನೆಯೊಂದಿಗೆ ಬರುವವರೆಗೆ ಅಮೆರಿಕ ತನ್ನ ದಾಳಿಯನ್ನು ತಡೆಹಿಡಿಯಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯ ದಿಗ್ಬಂಧನ ಮುಂದುವರಿಕೆ
ಕದನ ವಿರಾಮ ಘೋಷಿಸಿದರೂ, ಇರಾನ್ನ ಆರ್ಥಿಕ ಬೆನ್ನೆಲುಬಾಗಿರುವ ಹೊರ್ಮುಜ್ ಜಲಸಂಧಿಯ ಮೇಲಿನ ಅಮೆರಿಕದ ದಿಗ್ಬಂಧನ ಮುಂದುವರಿಯಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. “ಇರಾನ್ ಆರ್ಥಿಕವಾಗಿ ಕುಸಿಯುತ್ತಿದೆ. ಹಣಕ್ಕಾಗಿ ಅವರು ಹಪಹಪಿಸುತ್ತಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸಬೇಕೆಂದು ಅವರು ಬಯಸುತ್ತಿದ್ದಾರೆ. ಅಮೆರಿಕದ ದಿಗ್ಬಂಧನದಿಂದಾಗಿ ಇರಾನ್ ಪ್ರತಿದಿನ 500 ಮಿಲಿಯನ್ ಡಾಲರ್ ನಷ್ಟ ಅನುಭವಿಸುತ್ತಿದೆ,” ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಪ್ಲಾಟ್ಫಾರ್ಮ್ನಲ್ಲಿ ಬರೆದುಕೊಂಡಿದ್ದಾರೆ.
ಇಸ್ಲಾಮಾಬಾದ್ ಮಾತುಕತೆ ಅನಿಶ್ಚಿತ
ಈ ಬೆಳವಣಿಗೆಗಳ ನಡುವೆ, ಇಸ್ಲಾಮಾಬಾದ್ನಲ್ಲಿ ಇಂದು ನಡೆಯಬೇಕಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆಗಳು ಅನಿಶ್ಚಿತಗೊಂಡಿವೆ. ಇರಾನ್ ಕಡೆಯಿಂದ ಯಾವುದೇ ಸ್ಪಷ್ಟ ಪ್ರಸ್ತಾವನೆ ಬರದ ಹಿನ್ನೆಲೆಯಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಶ್ವೇತಭವನದ ಮೂಲಗಳು ಖಚಿತಪಡಿಸಿವೆ. ಒಂದು ಕಡೆ ಶಾಂತಿ ಮಾತುಕತೆಯ ಪ್ರಸ್ತಾಪ, ಮತ್ತೊಂದೆಡೆ ಆರ್ಥಿಕ ದಿಗ್ಬಂಧನದ ಬಿಗಿ ಹಿಡಿತ – ಈ ಎರಡರ ನಡುವೆ ಇರಾನ್ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಹದಗೆಡುವ ಲಕ್ಷಣಗಳು ಕಾಣಿಸುತ್ತಿವೆ.
ಇದನ್ನೂ ಓದಿ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ!



















