ರಣವೀರ್ ಸಿಂಗ್, ಸಾರಾ ಅರ್ಜುನ್ ಅಭಿನಯದ ʻಧುರಂಧರ್: ದಿ ರಿವೆಂಜ್ʼ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಸುನಾಮಿಯಂತೆ ಅಬ್ಬರಿಸುತ್ತಿದೆ. ಸಾಕಷ್ಟು ಮಂದಿ ಈ ಸಿನಿಮಾವನ್ನು ಮನಸಾರೆ ಹೊಗಳುತ್ತಿದ್ದಾರೆ. ಜೊತೆಗೆ ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. ಸದ್ಯ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಕೂಡ ಈ ಸಿನಿಮಾವನ್ನು ವೀಕ್ಷಣೆ ಮಾಡಿದ್ದು, “ಧುರಂಧರ್ 2 ಎಂಬ ಭರವಸೆಯ ಚಿತ್ರವೊಂದು ಹೇಗೆ ಸಹನಾ ಶಕ್ತಿಯ ಪರೀಕ್ಷೆಯಾಗಿ ಬದಲಾಗಬಹುದು ಎಂಬುದಕ್ಕೆ ಇದೊಂದು ಮಾಸ್ಟರ್ಕ್ಲಾಸ್.. ಧುರಂಧರ್ 2 ಭಾರಿ ನಿರಾಶೆ ಮೂಡಿಸಿದೆ..” ಎಂದು ಟ್ವೀಟ್ ಮಾಡಿದ್ದಾರೆ.
ರಮ್ಯಾ ಟ್ವೀಟ್ನಲ್ಲಿ ಏನಿದೆ?
“ಅತ್ಯಂತ ನೀರಸವಾದ ವಿಷಯದ ಪಠ್ಯಪುಸ್ತಕವನ್ನು ಓದುತ್ತಿರುವಂತೆ ಭಾಸವಾಗುತ್ತದೆ. ಎಂದಿಗೂ ಮುಗಿಯದ ಅಧ್ಯಾಯಗಳು! ಒಂದು ಹಂತದಲ್ಲಿ ನಿಮ್ಮ ಮೆದುಳು ಸೋತುಹೋಗುತ್ತದೆ ಮತ್ತು ಪರದೆಯ ಮೇಲೆ ನಡೆಯುತ್ತಿರುವ ಅತಿರೇಕಗಳನ್ನು ನೋಡಿ ಹತಾಶೆಯಿಂದ ನಗು ಬರಲಾರಂಭಿಸುತ್ತದೆ. ಒಂದು ವೇಳೆ ನೀವು ಇದನ್ನು ನೋಡಲೇಬೇಕು ಅಂದುಕೊಂಡಿದ್ದರೆ, ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ಹಾಳು ಮಾಡಿಕೊಳ್ಳಬೇಡಿ. ಇದು ಕೇವಲ ಓಟಿಟಿಯಲ್ಲಿ ನೋಡಲು ಲಾಯಕ್ಕಾದ ಸಿನಿಮಾ. ಅಲ್ಲಿ ಕನಿಷ್ಠ ಪಕ್ಷ ಬೋರ್ ಆದಾಗ ಪಾಸ್ ಮಾಡಬಹುದು, ಫೋನ್ ಸ್ಕ್ರಾಲ್ ಮಾಡಬಹುದು ಅಥವಾ ಒಂದು ಕ್ಲಿಕ್ ಮೂಲಕ ಸಿನಿಮಾದಿಂದ ತಪ್ಪಿಸಿಕೊಳ್ಳಬಹುದು” ಎಂದು ರಮ್ಯಾ ಅವರು ಹೇಳಿಕೊಂಡಿದ್ದಾರೆ.
“ನಿರ್ದೇಶನ, ಸಂಭಾಷಣೆ, ಸಂಕಲನ, ಹಿನ್ನೆಲೆ ಸಂಗೀತ ಮತ್ತು ನಟನೆ.. ಎಲ್ಲವೂ ಅತ್ಯಂತ ಸಾಧಾರಣ ಮಟ್ಟದಲ್ಲಿವೆ. ಮಾರ್ಚ್ 19ರ ಡೆಡ್ಲೈನ್ ಹತ್ತಿರ ಬರುತ್ತಿದೆ ಎಂದು ಯಾರೂ ಚಿತ್ರತಂಡಕ್ಕೆ ಹೇಳಿದಂತೆಯೇ ಇಲ್ಲ. ಅಥವಾ ಅವರಿಗೆ ಗೊತ್ತಿದ್ದರೂ, ʻಹೌದು, ಪರ್ಫೆಕ್ಟ್ ಆಗಿದೆ, ರಿಲೀಸ್ ಮಾಡಿಬಿಡಿʼ ಎಂದು ಸುಮ್ಮನಾದಂತೆ ಕಾಣುತ್ತದೆ. ‘ಧುರಂಧರ್’ ಮೊದಲ ಭಾಗದಲ್ಲಿ ಜನರು ಸೀಟಿ ಹೊಡೆಯುತ್ತಿದ್ದರು, ಚಪ್ಪಾಳೆ ತಟ್ಟುತ್ತಿದ್ದರು. ಅಲ್ಲಿ ಒಂದು ಎನರ್ಜಿ ಇತ್ತು. ಆದರೆ ಈ ಎರಡನೇ ಭಾಗದಲ್ಲಿ ಪ್ರೇಕ್ಷಕರು ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ. ಇಡೀ ಚಿತ್ರಮಂದಿರದಲ್ಲಿ ನಿರಾಸೆಯ ವಾತಾವರಣ ಮನೆ ಮಾಡಿತ್ತು” ಎಂದು ರಮ್ಯಾ ಬರೆದುಕೊಂಡಿದ್ದಾರೆ.
“ರಣವೀರ್ ಸಿಂಗ್ ಈ ಸಿನಿಮಾವನ್ನು ಹೆಗಲ ಮೇಲೆ ಹೊತ್ತಿದ್ದಾರೆ ಎನ್ನುವವರಿಗೆ ನನ್ನದೊಂದು ಪ್ರಶ್ನೆ. ಅವರು ಸಿನಿಮಾದಲ್ಲಿ ಏನನ್ನು ಹೊತ್ತಿದ್ದಾರೆ? ನನಗಂತೂ ಅಲ್ಲಿ ಅವರ ‘ಕೂದಲು’ ಮಾತ್ರ ಕಾಣಿಸುತ್ತಿತ್ತು. ಮೊದಲ ಭಾಗದಲ್ಲಿ ಅವರ ಹೇರ್ಸ್ಟೈಲ್ಗೆ ಒಂದು ವ್ಯಕ್ತಿತ್ವ ಇತ್ತು, ಅದಕ್ಕೊಂದು ತೂಕ ಇತ್ತು. ಆದರೆ ಇದರಲ್ಲಿ ಅದು ಸುಮ್ಮನೆ ಅಡ್ಡಬರುತ್ತಿದೆ ಅಷ್ಟೇ. ಬಹುಶಃ ಆ ಕೂದಲಿಗೆ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಕೊಟ್ಟರೂ ಆಶ್ಚರ್ಯವಿಲ್ಲ. ಸಿನಿಮಾದಲ್ಲಿನ ಹಿಂಸಾಚಾರವಂತೂ ಮಿತಿಮೀರಿದೆ! ಇದೊಂದು ಸಿನಿಮಾವಲ್ಲ, ಬದಲಿಗೆ ಸಿಕ್ಕಸಿಕ್ಕ ವಸ್ತುಗಳನ್ನು ಬಳಸಿ ಹೇಗೆಲ್ಲಾ ಕ್ರೂರವಾಗಿ ಹಿಂಸೆ ನೀಡಬಹುದು ಎನ್ನುವ ಹ್ಯಾಂಡ್ಬುಕ್ನಂತಿದೆ. ಸಿರಿಂಜ್, ಸ್ಪ್ಯಾನರ್, ಚಾಕುಗಳು, ಮೊಳೆ ಇರುವ ಬಾಲ್ಗಳು, ಕೊಡಲಿ, ಚೈನ್, ಗನ್, ಬಾಂಬ್.. ಹೀಗೆ ಪ್ರತಿಯೊಂದನ್ನೂ ಆಯುಧವಾಗಿ ಬಳಸಿದ್ದಾರೆ” ಎಂದು ರಮ್ಯಾ ಹೇಳಿದ್ದಾರೆ.
“ನಿರ್ದೇಶಕರು ತಮ್ಮೊಂದಿಗೆ ತಾವೇ ಸ್ಪರ್ಧೆಗೆ ಇಳಿದಂತಿದೆ. ʻಮುಂದಿನ ದೃಶ್ಯವನ್ನು ಇದಕ್ಕಿಂತ ಹೆಚ್ಚು ಹಿಂಸಾತ್ಮಕವಾಗಿ ಅಥವಾ ಹಾಸ್ಯಾಸ್ಪದವಾಗಿ ಮಾಡುವುದು ಹೇಗೆʼ ಎಂಬ ಹಠ ಅವರದು. ಆ ಹಿಂಸೆ ಎಷ್ಟು ಅತಿರೇಕಕ್ಕೆ ಹೋಗುತ್ತದೆ ಎಂದರೆ, ಅದು ನೋಡುಗರಿಗೆ ಶಾಕ್ ಕೊಡುವ ಬದಲು ನಗು ತರಿಸುತ್ತದೆ. ಒಬ್ಬ ವ್ಯಕ್ತಿಯ ಎರಡು ಕಾಲುಗಳನ್ನು ಕತ್ತರಿಸಿ, ಮೈಮೇಲೆ ಸೀಮೆಎಣ್ಣೆ ಸುರಿದಿದ್ದರೂ, ಆತ ಯಾವುದೋ ‘ಟೆಡ್ ಟಾಕ್’ ನೀಡುವಂತೆ ಆರಾಮವಾಗಿ ಸಂಭಾಷಣೆ ಹೊಡೆಯುತ್ತಿರುತ್ತಾನೆ! ವೈದ್ಯಕೀಯ ವಿಜ್ಞಾನಕ್ಕೆ ಜೈ ಅನ್ಬೇಕು. ಇವರಿಗೆ ಆಸ್ಕರ್ ಅಲ್ಲ, ನೋಬೆಲ್ ಪ್ರಶಸ್ತಿಯೇ ಸಿಗಬೇಕು” ಎಂದು ರಮ್ಯಾ ಹೇಳಿದ್ದಾರೆ.
“ಒಟ್ಟಾರೆಯಾಗಿ ಹೇಳುವುದಾದರೆ, ಧುರಂಧರ್ 2 ಒಂದು ದೊಡ್ಡ ನಿರಾಸೆ. ಇದೊಂದು ‘ಸ್ನೂಜ್ಫೆಸ್ಟ್’ ಅಥವಾ ಒಂದು ಕಾಮಿಡಿ ಎನ್ನಬಹುದು. ಮೊದಲ ಭಾಗ ನಿಮ್ಮನ್ನು ರಂಜಿಸಿದ್ದರೆ, ಈ ಎರಡನೇ ಭಾಗವು, ʻನಾನು ಯಾಕೆ ಇದನ್ನು ನೋಡಿದೆʼ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ರಣವೀರ್, ನೀವು ಇದಕ್ಕಿಂತ ಉತ್ತಮ ಸಿನಿಮಾಗಳನ್ನು ಮಾಡಬಲ್ಲಿರಿ. ಆದಿತ್ಯ ಧರ್ ಅವರೇ ಅತೀಯಾದ ದೇಶಭಕ್ತಿ ಮತ್ತು ಪ್ರೊಪಗಾಂಡಾಗಳು ಈಗ ಹಳೆಯದಾಗಿವೆ. ಇದರಿಂದ ಹೊರಬನ್ನಿ” ಎಂದು ರಮ್ಯಾ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಬಿಸಿಲಿಗೆ ಗುಡ್-ಬೈ ಹೇಳಿ.. ಬೆಂಗಳೂರಿನ ಈ ತಂಪಾದ ತಾಣಗಳಲ್ಲಿ ಎಂಜಾಯ್ ಮಾಡಿ!



















