ಬಿಹಾರ | ಬಿಹಾರ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯ ರಾಜಕಾರಣವನ್ನು ‘ಪುತ್ರವ್ಯಾಮೋಹ’ಕ್ಕೆ ಬಿಟ್ಟು ರಾಷ್ಟ್ರರಾಜಕಾರಣದತ್ತ ಮತ್ತೆ ಮುಖ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ನಿತೀಶ್ ಕುಮಾರ್ ಅವರಿಗೆ ರಾಷ್ಟ್ರ ರಾಜಕಾರಣ ಹೊಸದೇನಲ್ಲ. ಅವರ ರಾಜಕೀಯ ಆರಂಭ ರಾಷ್ಟ್ರರಾಜಕಾರಣದಿಂದಲೇ ಆರಂಭವಾಗಿತ್ತು. ಈಗ ಬಹುಶಃ ರಾಜಕೀಯ ಅಂತ್ಯದಲ್ಲಿ ಮತ್ತೆ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿರುವುದು ಮಾತ್ರ ಹಲವು ಅನುಮಾನ, ಆಶ್ಚರ್ಯಕ್ಕೆ ಕಾರಣವಾಗುತ್ತಿದೆ.
ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿತರಾಗಿ ಹೊರಟಿದ್ದಾರಾ?, ಪುತ್ರತ್ಯಾಗದಿಂದ ಹೊರಟಿದ್ದಾರಾ? ಅಥವಾ ರಾಜ್ಯಸಭಾ ಪ್ರವೇಶಿಸಬೇಕೆಂಬ ಅವರ ಹಳೆಯ ಕನಸು ಹೊತ್ತು ಹೊರಟಿದ್ದಾರಾ? ಗೊತ್ತಿಲ್ಲ. ಇದರ ಮಧ್ಯೆ ನಿತೀಶ್ ಕುಮಾರ್ ಎಂಬ ಸಮಾಜವಾದಿ ನಾಯಕ, ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿರುವುದು ಮಾತ್ರ ಬಿಹಾರಿಗಳಿಗೆ ನೋವಿನ ವಿಷಯವಾಗಿ ಪರಿಣಮಿಸಿದ್ದಂತು ಸತ್ಯ.

ಕರ್ನಾಟಕ ಮೂಲದ ಜಾರ್ಜ್ ಫರ್ನಾಂಡೀಸ್, ಲಾಲು ಪ್ರಸಾದ್ ಯಾದಾವ್ ಮತ್ತು ನಿತೀಶ್ ಕುಮಾರ್ ಮೂವರೂ ಜಯಪ್ರಕಾಶ ನಾರಾಯಣ ಅವರ ಶಿಷ್ಯರಾಗಿ ಗುರುತಿಸಿಕೊಂಡಿದ್ದವರು. ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾದಾಗಿನಿಂದಲೇ ನಿತೀಶ್ ಕುಮಾರ್ ಹಾಗೂ ಲಾಲು ಪ್ರಸಾದ್ ಯಾದವ್ ಹೋರಾಟಕ್ಕೆ ಧುಮುಕಿದ್ದರು. ಜಯಪ್ರಕಾಶ್ ನಾರಾಯಣ ಅವರ ನವ ನಿರ್ಮಾಣದಲ್ಲಿ ಭಾಗವಹಿಸಿ ಅವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ್ದರು. ಆನಂತರ 1980ರಲ್ಲೇ ಲಾಲು ಪ್ರಸಾದ್ ಯಾದವ್ ರಾಜ್ಯ ರಾಜಕಾರಣ ಹಾಗೂ ನಿತೀಶ್ ಕುಮಾರ್ ರಾಷ್ಟ್ರ ರಾಜಕಾರಣದತ್ತ ತಮ್ಮ ಛಾಪು ಮೂಡಿಸಿದ್ದರು. ಇಬ್ಬರು ಸಮಾಜವಾದಿ ನಾಯಕರಾಗಿ ಹೊರಹೊಮ್ಮಿದರು.
1985ರಿಂದ ಬಿಹಾರದಲ್ಲಿ ತಮ್ಮ ರಾಜಕೀಯ ಪಟ್ಟು ಆರಂಭಿಸಿದ್ದವರು. ಬಿಹಾರ ರಾಜ್ಯ ಜಾರ್ಖಂಡ್ ರಾಜ್ಯವಾಗಿ ಇಬ್ಭಾಗವಾದರೂ ಇನ್ನೂ 243 ಸೀಟ್ ಗಳು ಬಿಹಾರದಲ್ಲಿವೆ. 1989ರಿಂದ 91ರ ವೇಳೆಗೆ ಬಿಹಾರ ರಾಜಕಾರಣ ಕೆಲವು ಸ್ಥಿತ್ಯಂತರಕ್ಕೆ ಸಾಕ್ಷಿಯಾಗಿತ್ತು. ಬಿಜೆಪಿಯ ಪುನಶ್ಚೇತನಕ್ಕಾಗಿ ಬಿಜೆಪಿಯ ನಾಯಕ ಲಾಲಕೃಷ್ಣ ಅಡ್ವಾಣಿ ಸೋಮನಾಥದಿಂದ ರಥಯಾತ್ರೆ ಆರಂಭಿಸಿದ್ದರು. ಅದು ಬಿಹಾರ ರಾಜ್ಯಕ್ಕೆ ಆಗಮಿಸಿದ್ದಾಗ ಅಂದಿನ ಬಿಹಾರ ಸಿಎಂ ಲಾಲು ಪ್ರಸಾದ್ ಯಾದವ್ ಅದನ್ನು ತಡೆ ಹಿಡಿದಿದ್ದರು. ಅವರ ಬಂಧನವೂ ಆಗಿತ್ತು.

ಆ ವೇಳೆಗೆ ಅಂದಿನ ಪ್ರಧಾನಿ ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ದೇಶದಲ್ಲಿನ ಇನ್ನಿಂತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮಂಡಲ್ ಆಯೋಗ ವರದಿ ಜಾರಿ ಮಾಡಿದರು. ಆ ಮಂಡಲ್, ಕಮಂಡಲ್ ವಿವಾದದಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.ಗಾಂಧಿ ಕುಟುಂಬವೂ ಅಧಿಕಾರದಿಂದ ದೂರ ಸರಿಯಿತು. ಆದರೂ ಸಮ್ಮಿಶ್ರ ಸರ್ಕಾರವನ್ನು ರಚಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದರು. ಮನಮೋಹನ್ ಸಿಂಗ್ ಆದಿಯಾಗಿ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಒತ್ತು ನೀಡಿದರು.
ಆ ವೇಳೆ ಭಾರತದ ಯುವ ಜನತೆ ಜ್ಞಾನಾಧಾರಿತ ಆರ್ಥಿಕ ವ್ಯವಸ್ಥೆಯತ್ತ ಒಲವು ತೋರಿದರು. ಹೀಗಾಗಿ ಖಾಸಗಿ ಕಾರ್ಪೋರೇಟ್ ವಲಯದತ್ತ ಯುವ ಪೀಳಿಗೆ ಒಲವು ತೋರಿತು. ಇಷ್ಟೆಲ್ಲ ಬೆಳವಣಿಗೆಯ ಮಧ್ಯೆಯೂ ರಾಜಕೀಯ ಸ್ಥಿತ್ಯಂತರಗಳ ಮಧ್ಯೆಯೂ ನಿತೀಶ್ ಕುಮಾರ್ ತಮ್ಮ ರಾಜಕೀಯ ವರ್ಚಸ್ಸು ಕಳೆದುಕೊಂಡಿರಲಿಲ್ಲ. ಅವರೊಂದಿಗೆ ಅವರ ಒಡನಾಡಿಗಳಾದ ಲಾಲು ಪ್ರಸಾದ್ ಯಾದವ್, ಕರ್ನಾಟಕ ಮೂಲದ ಜಾರ್ಜ್ ಫರ್ನಾಂಡೀಸ್ ಕೂಡ ರಾಜಕೀಯ ವರ್ಚಸ್ಸು ಕಳೆದುಕೊಂಡಿರಲಿಲ್ಲ.
ಆ ವೇಳೆಯೇ ಲಾಲು ಪ್ರಸಾದ್ ಕುಟುಂಬಕ್ಕೆ ರಾಜಕೀಯ ಹಪಾಹಪಿ ಶುರುವಾಯಿತು. ಅದು ಎಷ್ಟರ ಮಟ್ಟಿಗೆ ಅಂದರೆ ಇಡೀ ಬಿಹಾರ ರಾಜ್ಯವೇ ಗೂಂಡಾ ರಾಜ್ಯ ಎಂಬ ಅಪಖ್ಯಾತಿ ಗಳಿಸಿತು. ಲಾಲು ಪ್ರಸಾದ್ ಯಾದವ್ 1990 ರಿಂದ 2005ರ ವರೆಗೆ 15 ವರ್ಷಗಳ ಕಾಲ ರಾಜ್ಯದಲ್ಲಿ ತಮ್ಮ ಕುಟುಂಬದ ಏಕಾಧಿಪತ್ಯ ಸ್ಥಾಪಿಸಿದರು. ಮೇವು ಹಗರಣ ಎಂಬ ಅಪವಾದಕ್ಕೆ ಸಿಲುಕಿ ಸಿಬಿಐ ತನಿಖೆಯಿಂದ ಜೈಲುಪಾಲಾದರು.
ಆ ಸಂದರ್ಭದಲ್ಲಿ ತಮ್ಮ ಪತ್ನಿ ರಾಬ್ರಿದೇವಿಗೆ ಅಧಿಕಾರ ಹಸ್ತಾಂತರಿಸಿದರು. ಆನಂತರ ರಾಬ್ರಿದೇವಿ ನೇತೃತ್ವದಲ್ಲಿಯೂ ಆರ್ ಜೆಡಿ ಸರ್ಕಾರ, ಕೌಟುಂಬಿಕ ಯಜಮಾನಿಕೆ ಸ್ಥಾಪಿಸಿತು. ಆ 15 ವರ್ಷಗಳಲ್ಲಿ ಬಿಹಾರ ಅನಾಗರಿಕ ಸಂಘರ್ಷ ಅರಾಜಕತೆ, ಅಶಿಸ್ತು, ಗೂಂಡಾಗಿರಿಯಿಂದ ಸಾಮಾನ್ಯರು ಬದುಕುವುದು ಕಷ್ಟ ಎನ್ನುವಂತಹ ಸ್ಥಿತಿಗೆ ಬಂದು ನಿಂತಿತು. ಬಲಿಷ್ಠ ಜಾತಿಗಳ ದಬ್ಬಾಳಿಕೆ ಮಿತಿ ಮೀರಿತು. ವಿವಿಧ ಜಾತಿಗಳು ರಣತಾಂಡವಾಡಿದವು. ಯಾದವ್ ಸೇನೆ, ರಣವೀರ್ ಸೇನೆ, ಠಾಕೂರು ಸೇನೆ ಎಂಬ ಬಲಿಷ್ಠ ಜಾತಿಗಳು ಸೇನೆ ಕಟ್ಟಿಕೊಂಡು ಸಶಸ್ತ್ರ ಸಂಘರ್ಷ ನಡೆಸಿದವು.
ಇಂತಹ ಅರಾಜಕತೆಯ ರಾಜ್ಯ, ಸರ್ಕಾರದಲ್ಲಿ ಜನ ನಲುಗುವುದನ್ನು ಕಂಡ ನಿತೀಶ್ ಕುಮಾರ್ ಅನಿವಾರ್ಯವಾಗಿ ಜಾರ್ಜ್ ಫರ್ನಾಂಡೀಸ್ ಜೊತೆಗೆ ಜನತಾದಳದಿಂದ ದೂರ ಸರಿದರು. ಆ ವೇಳೆಯೇ ಲಾಲು ಪ್ರಸಾದ್ ನಾಯಕತ್ವಕ್ಕೆ ಪ್ರಭಲ ಸವಾಲು ಹಾಕಿ ತೊಡೆ ತಟ್ಟಿ ನಿಂತರು. ಅಷ್ಟರಲ್ಲಿ ನಿತೀಶ್ ಕುಮಾರ್ ರಾಷ್ಟ್ರ ರಾಜಕಾರಣದಲ್ಲಿನ ಪ್ರಭಲ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.
ತಾವು ನಿರ್ವಹಿಸಿದ ಭಾರತ ಸರ್ಕಾರದ ಸಚಿವಾಲಯಗಳಲ್ಲಿ ಗುಣಾತ್ಮಕ ಕಾರ್ಯಗಳನ್ನು ನಿತೀಶ್ ತಂದಿದ್ದರು. ಕುಟುಂಬ ರಾಜಕಾರಣದ ಕಳಂಕದಿಂದ ದೂರ ಸರಿದಿದ್ದರು. ಅವರ ವಿರುದ್ಧ ಯಾವ ಗುರುತರ ಆರೋಪಗಳೂ ಇರಲಿಲ್ಲ. ಹೀಗಾಗಿ 2005ರಲ್ಲಿ ಲಾಲು ವಿರುದ್ಧ ಏಕಚಕ್ರಾಧಿಪತ್ಯ ಸ್ಥಾಪಿಸಿದರು.
ಅಲ್ಲಿಯವರೆಗೂ ಸೆಕ್ಯೂಲರ್ ವಾದಿಗಳ ವ್ಯಾಮೋಹಕ್ಕೊಳಗಾಗಿ ಬಿಜೆಪಿಯಿಂದ ದೂರವಿದ್ದ ಅವರು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಎಂಬ ಬಿಹಾರ್ ನಾಯಕರೊಂದಿಗೆ ಕೈ ಜೋಡಿಸಿ ಅಧಿಕಾರಕ್ಕೇರಿದರು. 2005 ರಿಂದ 15ರ ವರೆಗೆ 10 ವರ್ಷಗಳ ಕಾಲ ಜೊತೆಯಾಗಿ ಸರ್ಕಾರ ನಡೆಸಿದರು.
ಆ ವೇಳೆ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸುತ್ತಿದ್ದಂತೆ ನಿತೀಶ್ ಬಿಜೆಪಿಯ ಸಖ್ಯ ದೂರ ಮಾಡಿದರು.
ಆಗ ಮತ್ತೆ ಬಿಜೆಪಿ ಸಹವಾಸ ತೊರೆದು ತಾವೇ ಸವಾಲು ಹಾಕಿ, ಹುಟ್ಟಡಗಿಸಿ ಗೆದ್ದಿದ್ದ ಆರ್ ಜೆಡಿ ಜೊತೆ ಅನಿವಾರ್ಯವಾಗಿ ಮಹಾಘಟಬಂಧನ್ ರಚಿಸಿಕೊಂಡರು. ಆ ವೇಳೆ ಎರಡೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದರು. ಆದರೆ ಲಾಲುಪ್ರಸಾದ್ ಯಾದವ್ ಅವರ ಮಕ್ಕಳ ರಾಜಕೀಯ ಕಿರುಕುಳದಿಂದಾಗಿ ಆರ್ ಜೆಡಿಯಿಂದ ದೂರ ಸರಿದರು. 2020ರ ನಂತರ ಮತ್ತೊಮ್ಮೆ ಆರ್ ಜೆಡಿ ಜೊತೆ ಕೈ ಜೋಡಿಸಿ 2022ರ ವೇಳೆಗೆ ಲಾಲು ಪ್ರಸಾದ್ ಕುಟುಂಬದ ಸಹವಾಸವೇ ಬೇಡ ಅಂತಾ ಆ ಕುಟುಂಬವನ್ನು ದೂರ ತಳ್ಳಿದರು. ಆನಂತರ ಮತ್ತೆ ಬಿಜೆಪಿಯತ್ತ ಮುಖ ಮಾಡಿದರು. 2024ರ ವೇಳೆಗೆ ಪ್ರಧಾನಿ ಮೋದಿ ಅವರೊಂದಿಗೆ ಕೈ ಜೋಡಿಸಿದರು. ಲೋಕಸಭೆ ಚುನಾವಣೆಯ ಹಿನ್ನೆಡೆಯ ನೋವಿನಲ್ಲಿದ್ದ ಪ್ರಧಾನಿ ಮೋದಿ ಅವರಿಗೂ ನಿತೀಶ್ ಕುಮಾರ್ ಬಿಹಾರದಲ್ಲಿ ಅಭೂತಪೂರ್ವ ಜಯ ಸಿಗುವಂತೆ ಮಾಡಿ ಬಿಜೆಪಿ ಮತ್ತೆ ಕಿಲಕಿಲ ನಗುವಂತೆ ಮಾಡಿದರು.
ಇಷ್ಟಾದರೂ 20 ವರ್ಷದ ಆಳ್ವಿಕೆ ನಂತರವೂ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಇಂದಿಗೂ ಪ್ರಶ್ನಾತೀತ ನಾಯಕರಾಗಿಯೇ ಉಳಿದಿದ್ದಾರೆ ಅನ್ನೋದಕ್ಕೆ ಆ ಚುನಾವಣೆಯ ಸಾಕ್ಷಿಯಾಗಿ ನಿಂತಿತು. ಕಳೆದ ನವೆಂಬರ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 243 ಸೀಟ್ ಗಳಲ್ಲಿ ಬರೋಬ್ಬರಿ 207 ಕ್ಷೇತ್ರಗಳನ್ನು ಎನ್ ಡಿಎ ಗೆಲ್ಲುವಂತೆ ಮಾಡುವಲ್ಲಿ ನಿತೀಶ್ ಪಾತ್ರ ಅಗ್ರಗಣ್ಯವಾಗಿದೆ. ಈ ಚುನಾವಣೆಯ ಗೆಲುವೇ ನಿತೀಶ್ ಅವರ ಮೇಲಿನ ಬಿಹಾರ ಜನಸಾಮಾನ್ಯರ ನಂಬಿಕೆ ಒಂಚೂರು ಕಡಿಮೆಯಾಗಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಒಬ್ಬ ನಾಯಕ 20 ವರ್ಷಗಳಿಂದ ಇಡೀ ರಾಜ್ಯವೆಂಬ ಸಮೂಹದ ವಿಶ್ವಾಸ ಗಳಿಸುವುದು ಅಷ್ಟು ಸಾಮಾನ್ಯದ ವಿಷಯವಲ್ಲ. ಅಂಥದರಲ್ಲಿ ನಿತೀಶ್ ಕುಮಾರ್ 20 ವರ್ಷಗಳಲ್ಲಿ ಒಂದು ವರ್ಷ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದ್ದು ಬಿಟ್ಟರೆ ಇನ್ನುಳಿದ 19 ವರ್ಷ ಪ್ರಶ್ನಾತೀತ ನಾಯಕರಾಗಿಯೇ ಹೊರ ಹೊಮ್ಮಿದ್ದಾರೆ.
ಈಗ ಬಿ.ಟೆಕ್ ಪದವಿಧರರಾಗಿರುವ ಅವರ ಮಗ ನಿಶಾಂತ್ ಕುಮಾರ್ ರಾಜಕಾರಣಕ್ಕೆ ಮರಳುತ್ತಿರುವ ಸುದ್ದಿ ದಟ್ಟವಾಗಿದ್ದು, ನಿತೇಶ್ ಕುಮಾರ್ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ. ನಿತೀಶ್ ಕುಮಾರ್ ಸಾಕಷ್ಟು ಸವಾಲುಗಳನ್ನು ಮೆಟ್ಟಿ ನಿಂತ ನಾಯಕ. ಒಂದು ಕಾಲದಲ್ಲಿ ಉದಾರವಾದಿ ಎಡಪಂಥೀಯ ನಾಯಕರು ನಿತೀಶ್ ಕುಮಾರ್ ರನ್ನು ಮುಟ್ಟಿಸಿಕೊಳ್ಳಲಿಲ್ಲ. ಗೂಂಡಾ ರಾಜ್ಯ ಎಂಬ ಅಪಖ್ಯಾತಿ ಗಳಿಸಿದ್ದ ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದರು. ಮುಸ್ಲಿಂ ವ್ಯಕ್ತಿಯೊಬ್ಬರನ್ನು ಡಿಜಿಪಿಯಾಗಿ ನೇಮಕ ಮಾಡಿ, ಬರೋಬ್ಬರಿ 59 ಸಾವಿರ ರೌಡಿಶೀಟರ್ ಗಳನ್ನು ಒದ್ದು ಒಳಗೆ ಹಾಕಿಸಿದ್ದರು. ಆಗ ವಿಶೇಷ ನ್ಯಾಯಾಲಯ ಸ್ಥಾಪಿಸಿ ರೌಡಿಗಳಿಗೆ ತ್ವರಿತ ಜೈಲು ಶಿಕ್ಷೆಯಾಗುವಂತೆ ನೋಡಿಕೊಂಡರು. ಇದರಿಂದಾಗಿ ಬಲಿಷ್ಠ ಸುಮುದಾಯದ ಸೇನೆಗಳು ಕೂಡ ಮನೆ ಸೇರುವಂತಾಯಿತು. ರಾಜ್ಯದಲ್ಲಿ ಈ ಮೂಲಕ ದಿಟ್ಟತನದಿಂದ ಶಾಂತಿ ನೆಲೆಸುವಂತೆ ಮಾಡಿ ಪೂರ್ತಿ ಹದಗೆಟ್ಟಿದ್ದ ಬಿಹಾರ ಆಡಳಿತವನ್ನು ಬೇರು ಸಮೇತ ಸರಿ ಮಾಡಿದ್ದರು.
ಬಿಹಾರದಲ್ಲಿ ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಹಾಗೂ ನಿತೀಶ್ ಕುಮಾರ್ ಜೋಡಿ ಅಪರೂಪದ ಜೋಡಿಯಾಗಿಯೇ ಗುರುತಿಸಿಕೊಂಡಿದೆ. ಈ ಜೋಡಿ ಬಿಹಾರದಲ್ಲಿ ಅಭಿವೃದ್ಧಿ ಕೇಂದ್ರೀತ ರಾಜಕಾರಣ ನೀಡಿದೆ. ಜನಪರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಮೂಲಸೌಕರ್ಯ, ಶಿಕ್ಷಣ, ಆರ್ಥಿಕ ವ್ಯವಸ್ಥೆಯಲ್ಲಿ ದೇಶದ ಗಮನ ಸಳೆಯುವಲ್ಲಿ ಈ ಜೋಡಿಯ ಮೋಡಿ ಬಹಳಷ್ಟಿದೆ.
ಬಿಹಾರ್ನಲ್ಲಿ 2020ರ ಹಿಂದೆಯೇ ಪಾನ ನಿಷೇಧ ಜಾರಿಗೆ ತಂದ ಹೆಗ್ಗಳಿಕೆ ನಿತೀಶ್ ಕುಮಾರ್ ಅವರದ್ದು. ಈ ಮೂಲಕ ಬಿಹಾರದ ಹೆಣ್ಣು ಮಕ್ಕಳ ಮನ ಗೆದ್ದಿದ್ದಾರೆ. 21ನೇ ಶತಮಾನದಲ್ಲಿ ಪಾನ ನಿಷೇಧ ತಂದು ರಾಜಕೀಯ ಹಣಕಾಸು ವ್ಯವಸ್ಥೆ ನಿರ್ವಹಿಸುತ್ತಿದ್ದಾರೆಂದರೆ ಅದು ಸಾಮಾನ್ಯದ ಮಾತಲ್ಲ. ಇಂದಿಗೂ ಬಿಹಾರದಲ್ಲಿ ಎಡಂಪಂಥೀಯ ಹಾಗೂ ಬಲಪಂಥೀಯ ನಾಯಕರಿಗೆ ನಿತೀಶ್ ಇಲ್ಲದೆ ಜನರ ವಿಶ್ವಾಸ ಗಳಿಸುವುದು ಸಾಧ್ಯವೇ ಆಗುತ್ತಿಲ್ಲ. ಎಡಪಂಥೀಯ ಹಾಗೂ ಬಲಪಂಥೀಯ ಪಕ್ಷಗಳಿಗೆ ನಿತೀಶ್ ಅನಿವಾರ್ಯವೇ ಹೊರತು, ಆ ಪಕ್ಷಗಳು ಅವರಿಗೆ ಎಂದಿಗೂ ಅನಿವಾರ್ಯವಾಗಿಲ್ಲ. 2024ರಲ್ಲೇ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಮಾಡಿ ಯಶಸ್ಸು ಕಂಡ ನಾಯಕ ನಿತೀಶ್, ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಯಶಸ್ಸು ಸಾಧಿಸಿದ್ದಾರೆ.
2024ರ ಪೂರ್ವಭಾವಿಯಾಗಿ ಬಿಜೆಪಿಗೆ ಪರ್ಯಾಯವಾಗಿ ಸವಾಲು ಒಡ್ಡಲು ರಚಿತವಾದ ಇಂಡಿಯಾ ಮೈತ್ರಿಕೂಟದ ಆರಂಭದಲ್ಲಿ ಮುಂಚೂಣಿಯಲ್ಲಿದ್ದವರು ಈ ನಿತೀಶ್ ಕುಮಾರ್. ಆ ಸಭೆ ಮೊದಲು ಪಾಟ್ನಾದಲ್ಲೇ ನಡೆದಿತ್ತು. ಆ ವೇಳೆ ಅಂದಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಮಮತಾ ಬ್ಯಾನರ್ಜಿ, ನಿತೀಶ್ ಅವರ ನಾಯಕತ್ವಕ್ಕೆ ಒಪ್ಪಿದ್ದರು. ಆ ವೇಳೆ ಕಾಂಗ್ರೆಸ್ ಮೌನವಹಿಸಿತ್ತು. ಆನಂತರ ಹಲವು ಬೆಳವಣಿಗೆಗಳು ನಡೆದು, ನಿತೀಶ್ ಆ ಮೈತ್ರಿಕೂಟದಿಂದ ದೂರ ಸರಿದರು. ಇಂತಹ ನಾಯಕ ಈಗ ವಯೋಸಹಜವಾಗಿ ಡಿಮೆನ್ಶಿಯಾ ಕಾಯಿಲೆಗೆ ಒಳಗಾಗಿದ್ದಾರೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
ನಿತೀಶ್ ಕುಮಾರ್ ಸಮಾಜವಾದಿ ವ್ಯಕ್ತಿತ್ವ ರೂಢಿಸಿಕೊಂಡಿದ್ದ ನಾಯಕ. ಎಡಪಂಥೀಯ ಹಾಗೂ ಬಲಪಂಥೀಯ ಪಕ್ಷಗಳೆರಡರಲ್ಲೂ ಸಖ್ಯ ಗಳಿಸಿದ್ದರ ಪರಿಣಾಮ ಅವರಿಗೆ ‘ಪಲ್ಟು ರಾಮ್’ ಅಂತಲೂ ಲೇವಡಿ ಮಾಡಿದರು. ಅವುಗಳನ್ನೆಲ್ಲ ಮೀರಿ ಒಂದು ರಾಜ್ಯದ ಅರಾಜಕತೆಯ ಕಸವನ್ನೆಲ್ಲ ಗೂಡಿಸಿ, ನಶೆ ಮುಕ್ತ ಮಾಡಿ, ಅಭಿವೃದ್ಧಿಯತ್ತ ಕೊಂಡೊಯ್ಯುವುದು ಅಷ್ಟು ಸಾಮಾನ್ಯದ ಕೆಲಸವಲ್ಲ. ನಿತೀಶ್ ಕುಮಾರ್ ರಾಷ್ಟ್ರ ರಾಜಕಾರಣದತ್ತ ಏಕೆ ಮುಖ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಅವರ ವ್ಯಕ್ತಿತ್ವ ಬಿಹಾರದ ಜನರ ಮೇಲೆ ಮಾತ್ರ ತುಂಬಾ ಗಾಢವಾಗಿರುವುದಂತೂ ಸತ್ಯ.
ಇದನ್ನೂ ಓದಿ : ‘ಕಡಲ್ ಕೋಟೆ’ ಹತ್ತಿದ ವಸಿಷ್ಠ ಸಿಂಹ..!



















