ಢಾಕಾ: ರಾಜಕೀಯ ಅಸ್ಥಿರತೆ, ಅರಾಜಕತೆ ತಾಂಡವವಾಡುತ್ತಿರುವ ಬಾಂಗ್ಲಾದೇಶದಲ್ಲಿ ಕಲಾವಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲಿನ ದಾಳಿಗಳು ಮುಂದುವರಿದಿದೆ. ಇದೀಗ ಖ್ಯಾತ ಗಾಯಕ ಜೇಮ್ಸ್ ಅವರ ಸಂಗೀತ ಕಚೇರಿಯ ಮೇಲೂ ಉದ್ರಿಕ್ತ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ಘಟನೆಯಲ್ಲಿ ಕನಿಷ್ಠ 25 ಮಂದಿ ಗಾಯಗೊಂಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ರಾಜಧಾನಿ ಢಾಕಾದಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ಫರಿದ್ಪುರದಲ್ಲಿ ಶುಕ್ರವಾರ ರಾತ್ರಿ 9 ಗಂಟೆಗೆ ಸ್ಥಳೀಯ ಶಾಲೆಯೊಂದರ ವಾರ್ಷಿಕೋತ್ಸವದ ಅಂಗವಾಗಿ ಈ ಸಂಗೀತ ಕಚೇರಿಯನ್ನು ಆಯೋಜಿಸಲಾಗಿತ್ತು. ಬಾಂಗ್ಲಾದೇಶದ ಪ್ರಸಿದ್ಧ ರಾಕ್ ಬ್ಯಾಂಡ್ ‘ನಾಗರ್ ಬೌಲ್’ನ ಪ್ರಮುಖ ಗಾಯಕ ಹಾಗೂ ಬಾಲಿವುಡ್ನ ‘ಗ್ಯಾಂಗ್ಸ್ಟರ್’ ಚಿತ್ರದ “ಭೀಗಿ ಭೀಗಿ” ಮತ್ತು ‘ಲೈಫ್ ಇನ್ ಎ ಮೆಟ್ರೋ’ ಚಿತ್ರದ “ಅಲ್ವಿದಾ” ಹಾಡುಗಳಿಂದ ಜನಪ್ರಿಯರಾಗಿರುವ ಜೇಮ್ಸ್ ಅವರು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಬೇಕಿತ್ತು.
ಇಟ್ಟಿಗೆ, ಕಲ್ಲು ತೂರಾಟ:
ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಉದ್ರಿಕ್ತರ ಗುಂಪೊಂದು ಸ್ಥಳಕ್ಕೆ ನುಗ್ಗಿ, ನೆರೆದಿದ್ದ ಪ್ರೇಕ್ಷಕರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳನ್ನು ತೂರಾಟ ನಡೆಸಿತು. ಅಲ್ಲಿದ್ದ ವಿದ್ಯಾರ್ಥಿಗಳು ದಾಳಿಕೋರರನ್ನು ತಡೆಯಲು ಪ್ರಯತ್ನಿಸಿದರಾದರೂ, ಹಿಂಸಾಚಾರ ಹೆಚ್ಚಾದ ಕಾರಣ ಸ್ಥಳೀಯ ಅಧಿಕಾರಿಗಳ ಸೂಚನೆಯ ಮೇರೆಗೆ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು.
ತಸ್ಲಿಮಾ ನಸ್ರೀನ್ ಆಕ್ರೋಶ
ಈ ಘಟನೆಯನ್ನು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ತೀವ್ರವಾಗಿ ಖಂಡಿಸಿದ್ದಾರೆ. ಎಕ್ಸ್ (ಟ್ವಿಟರ್) ತಾಣದಲ್ಲಿ ಬರೆದುಕೊಂಡಿರುವ ಅವರು, “ಸಾಂಸ್ಕೃತಿಕ ಕೇಂದ್ರವಾದ ಛಾಯಾನೌತ್ ಮತ್ತು ಜಾತ್ಯತೀತ ಪ್ರಜ್ಞೆಯನ್ನು ಬೆಳೆಸುವ ಉದಿಚಿ ಸಂಸ್ಥೆಯನ್ನು ಸುಟ್ಟು ಬೂದಿ ಮಾಡಲಾಗಿದೆ. ಈಗ ಜಿಹಾದಿಗಳು ಖ್ಯಾತ ಗಾಯಕ ಜೇಮ್ಸ್ ಅವರಿಗೂ ಕಾರ್ಯಕ್ರಮ ನಡೆಸಲು ಬಿಡಲಿಲ್ಲ,” ಎಂದು ಕಿಡಿಕಾರಿದ್ದಾರೆ.
ಭಾರತದ ಪ್ರಸಿದ್ಧ ಸಂಗೀತಗಾರ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರ ಮೊಮ್ಮಗ ಸಿರಾಜ್ ಅಲಿ ಖಾನ್ ಮತ್ತು ಉಸ್ತಾದ್ ರಶೀದ್ ಖಾನ್ ಅವರ ಪುತ್ರ ಅರ್ಮಾನ್ ಖಾನ್ ಕೂಡ ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯನ್ನು ವಿರೋಧಿಸಿ ಅಲ್ಲಿನ ಕಾರ್ಯಕ್ರಮಗಳನ್ನು ತಿರಸ್ಕರಿಸಿದ್ದಾರೆ ಎಂದು ನಸ್ರೀನ್ ಉಲ್ಲೇಖಿಸಿದ್ದಾರೆ.
ಮಹಮ್ಮದ್ ಯೂನುಸ್ ಸರ್ಕಾರದ ವಿರುದ್ಧ ಆರೋಪ
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಮೂಲಭೂತವಾದಿ ಗುಂಪುಗಳು ಸಾಂಸ್ಕೃತಿಕ ಸಂಸ್ಥೆಗಳು, ಕಲಾವಿದರು ಮತ್ತು ಪತ್ರಕರ್ತರ ಮೇಲೆ ನಿರಂತರ ದಾಳಿ ನಡೆಸುತ್ತಿವೆ. ಮಹಮ್ಮದ್ ಯೂನುಸ್ ನೇತೃತ್ವದ ಹಂಗಾಮಿ ಸರ್ಕಾರವು ಈ ಗಲಭೆಗಳನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ಟೀಕಿಸಲಾಗಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದಲೇ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಇಂತಹ ಕೃತ್ಯಗಳನ್ನು ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ : ಮೈಸೂರಿನಲ್ಲಿ ಮತ್ತೊಂದು ಚಿರತೆ ಸೆರೆ | ನಿಟ್ಟುಸಿರು ಬಿಟ್ಟ ಗ್ರಾಮಸ್ಥರು



















