ಪಹಲ್ಗಾಮ್ ದಾಳಿಗೂ ಮುನ್ನ ನೇಪಾಳಿ ಬೇಹುಗಾರನ ಬಂಧನ: ಪಾಕ್ ಐಎಸ್ಐ ಉಗ್ರ ಸಂಚು ವಿಫಲ
ನವದೆಹಲಿ: ಭಾರತದಲ್ಲಿ ದೊಡ್ಡ ಮಟ್ಟದ ಉಗ್ರ ದಾಳಿಯನ್ನು ನಡೆಸಲು ಪಾಕ್ ಐಎಸ್ಐ ನಡೆಸಿದ್ದ ಸಂಚನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಭೇದಿಸಿವೆ. ಏಪ್ರಿಲ್ 22, 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಮುಂಚಿತವಾಗಿಯೇ ಈ ಸಂಚು ರೂಪಿಸಲಾಗಿತ್ತು. ಆದರೆ ಭಾರತದ ಸಂಸ್ಥೆಗಳ ಸಮಯಪ್ರಜ್ಞೆಯಿಂದ ದೊಡ್ಡ ದಾಳಿತಪ್ಪಿದಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕಾರ್ಯಾಚರಣೆಯ ಕೇಂದ್ರಬಿಂದುವಾಗಿದ್ದ ನೇಪಾಳ ಮೂಲದ ಐಎಸ್ಐ ಏಜೆಂಟ್ ಅನ್ಸಾರುಲ್ ಮಿಯಾನ್ ಅನ್ಸಾರಿಯನ್ನು ದೆಹಲಿಯ ಹೋಟೆಲ್ವೊಂದರಿಂದ ಬಂಧಿಸಲಾಗಿದೆ. ಐಎಸ್ಐ ಸೂಚನೆಯ ಮೇರೆಗೆ ಅನ್ಸಾರಿ ಪಾಕಿಸ್ತಾನದಿಂದ ನೇಪಾಳ ಮೂಲಕ ಭಾರತಕ್ಕೆ ಪ್ರವೇಶಿಸಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಬಂಧನದ ವೇಳೆ, ತನಿಖಾಧಿಕಾರಿಗಳು ಅನ್ಸಾರಿಯಿಂದ ಗೌಪ್ಯ ಸೈನಿಕ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಫಾರೆನ್ಸಿಕ್ ವಿಶ್ಲೇಷಣೆಯಿಂದ ಈ ದಾಖಲೆಗಳು ಗೌಪ್ಯ ಸೈನಿಕ ಮಾಹಿತಿಗಳನ್ನು ಒಳಗೊಂಡಿರುವುದು ದೃಢಪಟ್ಟಿದೆ.
ಜನವರಿ ಮತ್ತು ಮಾರ್ಚ್ 2025ರ ನಡುವೆ ಕೇಂದ್ರೀಯ ಗುಪ್ತಚರ ಸಂಸ್ಥೆಗಳು ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕದ ಜಂಟಿ ಕಾರ್ಯಾಚರಣೆಯ ಫಲವಾಗಿ ಅನ್ಸಾರಿಯ ಬಂಧನ ನಡೆದಿದೆ. ವಿಚಾರಣೆಯ ಸಂದರ್ಭದಲ್ಲಿ, ಅನ್ಸಾರಿಯು ಐಎಸ್ಐನ ವ್ಯಾಪಕ ಗೂಢಚಾರ ಜಾಲದ ಬಗ್ಗೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ. ಗೌಪ್ಯ ಸೈನಿಕ ದಾಖಲೆಗಳನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ಕಳುಹಿಸುವ ಕಾರ್ಯವನ್ನು ತನಗೆ ವಹಿಸಲಾಗಿತ್ತು ಎಂದು ಅವನು ಬಾಯಿಬಿಟ್ಟಿದ್ದಾನೆ.
ಪಹಲ್ಗಾಮ್ ದಾಳಿಯ ನಂತರ, ಭದ್ರತಾ ಸಂಸ್ಥೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರವಲ್ಲದೆ, ದೇಶಾದ್ಯಂತದ ನಗರಗಳಲ್ಲಿ ಕಾರ್ಯಾಚರಣೆಯಲ್ಲಿರುವ ಸ್ಲೀಪರ್ ಸೆಲ್ಗಳ ವಿರುದ್ಧ ತಮ್ಮ ಭಯೋತ್ಪಾದನೆ-ವಿರೋಧಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ.
ಗುಪ್ತಚರ ವರದಿಗಳ ಪ್ರಕಾರ, ಪಾಕ್ ಐಎಸ್ಐ ಜಮ್ಮು ಕಾಶ್ಮೀರದ ಶ್ರೀನಗರ ಮತ್ತು ಗಂಡರ್ಬಾಲ್ ಜಿಲ್ಲೆಗಳಲ್ಲಿ ಕಾಶ್ಮೀರಿ ಪಂಡಿತರು, ಸಿಐಡಿ ಸಿಬ್ಬಂದಿ, ಮತ್ತು ಸ್ಥಳೀಯರಲ್ಲದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಯೋಜಿಸುತ್ತಿದೆ. ಈ ಭಯೋತ್ಪಾದಕ ಜಾಲವನ್ನು ಭೇದಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತೀವ್ರ ಕಾರ್ಯಾಚರಣೆಯನ್ನು ನಡೆಸುತ್ತಿದೆ.