ನವದೆಹಲಿ : ಕೆಂಪುಕೋಟೆಯ ಅಂಗಳದಿಂದ ಸತತ 13ನೇ ಬಾರಿಗೆ ಸ್ವಾತಂತ್ರ್ಯ ದಿನಗ ಭಾಷಣ ನೆರವೇರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವಶಕ್ತಿ ಹಾಗೂ ‘ಜೆನ್ ಝಿ’ (Gen Z) ಜನಾಂಗದ ಪಾತ್ರ ಅತ್ಯಂತ ನಿರ್ಣಾಯಕ ಎಂದು ಪ್ರತಿಪಾದಿಸಿದ್ದಾರೆ.
ಇತ್ತೀಚೆಗೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಂದಾಗಿ ದೇಶಾದ್ಯಂತ ಯುವಜನರು ನಡೆಸಿದ ಪ್ರತಿಭಟನೆಗಳ ಬೆನ್ನಲ್ಲೇ, ಯುವಕರ ಆಕಾಂಕ್ಷೆಗಳನ್ನು ಈಡೇರಿಸುವ ಮಹತ್ವದ ಭರವಸೆಗಳನ್ನು ಪ್ರಧಾನಿ ನೀಡಿದ್ದಾರೆ. ಸುಮಾರು 75 ನಿಮಿಷಗಳ ತಮ್ಮ ಸುದೀರ್ಘ ಭಾಷಣದಲ್ಲಿ, ಪ್ರಮುಖವಾಗಿ 1 ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ ಹಾಗೂ ಬಡ ಮತ್ತು ಮಧ್ಯಮ ವರ್ಗದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಚಿತ ಆನ್ಲೈನ್ ಕೋಚಿಂಗ್ ಸೌಲಭ್ಯ ಒದಗಿಸುವ ಐತಿಹಾಸಿಕ ಯೋಜನೆಗಳನ್ನು ಘೋಷಿಸಿದ್ದಾರೆ. ‘ವಿಕಸಿತ ಭಾರತ 2047’ರ ಕನಸನ್ನು ನನಸು ಮಾಡಲು ಯುವಜನತೆಯೇ ಮುಂಚೂಣಿಯಲ್ಲಿರಲಿದ್ದಾರೆ ಎಂದೂ ಅವರು ನುಡಿದಿದ್ದಾರೆ.
‘ಸಪ್ತಧಾರೆ’ ದೃಷ್ಟಿಕೋನ
ಪ್ರಾಚೀನ ‘ಸಪ್ತ ಸಿಂಧು’ ನದಿಗಳ ಪರಿಕಲ್ಪನೆಯಿಂದ ಪ್ರೇರಿತರಾಗಿ, ಭಾರತವನ್ನು 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ಮೋದಿ ‘ಸಪ್ತಧಾರೆ’ ಎಂಬ 7 ಪ್ರಮುಖ ರಂಗಗಳ ಸುಧಾರಣಾ ಚೌಕಟ್ಟನ್ನು ಅನಾವರಣಗೊಳಿಸಿದರು.
ತಯಾರಿಕಾ ಶಕ್ತಿ :
ಭಾರತವನ್ನು ಬಿಡಿಭಾಗಗಳಿಂದ ಹಿಡಿದು ಸಿದ್ಧ ಉತ್ಪನ್ನಗಳವರೆಗೆ ಜಾಗತಿಕ ತಯಾರಿಕಾ ಹಬ್ ಅನ್ನಾಗಿ ಪರಿವರ್ತಿಸುವುದು.
ಕೃಷಿ ಮತ್ತು ಆಹಾರ ಭದ್ರತೆ :
ಸಿರಿಧಾನ್ಯಗಳು (ಮಿಲೆಟ್ಸ್), ಮಸಾಲೆ ಪದಾರ್ಥಗಳು ಮತ್ತು ಹಣ್ಣುಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸಿ, ದೇಶದ ರೈತರನ್ನು ಜಾಗತಿಕ ಆಹಾರ ಪೂರೈಕೆಯ ಶಕ್ತಿಯನ್ನಾಗಿ ರೂಪಿಸುವುದು.
ತಂತ್ರಜ್ಞಾನ ಮತ್ತು ನಾವೀನ್ಯತೆ :
ಎಐ, ಕ್ವಾಂಟಮ್ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ರೋಬೋಟಿಕ್ಸ್ನಲ್ಲಿ ಸ್ವಾವಲಂಬನೆ ಸಾಧಿಸುವುದು. ಮುಂದಿನ 7-8 ವರ್ಷಗಳಲ್ಲಿ ದೇಶದಲ್ಲಿ 7ರಿಂದ 8 ಸೆಮಿಕಂಡಕ್ಟರ್ ಸ್ಥಾವರಗಳನ್ನು ಸ್ಥಾಪಿಸುವ ಗುರಿ ಹೊಂದುವುದು.
ಗತಿ ಶಕ್ತಿ :
ಹೈಸ್ಪೀಡ್ ರೈಲು ಮತ್ತು ಆಧುನಿಕ ಹೆದ್ದಾರಿಗಳ ಮೂಲಕ ನಗರಗಳ ನಡುವೆ ತೀವ್ರಗತಿಯ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು.
ರಕ್ಷಣಾ ಶಕ್ತಿ :
ಡ್ರೋನ್, ಹೈಪರ್ಸಾನಿಕ್ ತಂತ್ರಜ್ಞಾನ ಮತ್ತು ಸೈಬರ್ ಭದ್ರತೆಯಲ್ಲಿ ಸಜ್ಜಾಗಿ, ಭಾರತವನ್ನು ರಕ್ಷಣಾ ಸಾಮಗ್ರಿಗಳ ಜಾಗತಿಕ ಪೂರೈಕೆದಾರ ದೇಶವಾಗಿ ಬೆಳೆಸುವುದು.
ಇಂಧನ ಭದ್ರತೆ :
ಇಂಧನ ಸ್ವಾವಲಂಬನೆಗಾಗಿ ಮುಂಬರುವ ದಶಕದಲ್ಲಿ 5 ಹೊಸ ಪರಮಾಣು ರಿಯಾಕ್ಟರ್ಗಳನ್ನು ಪ್ರಾರಂಭಿಸಿ, 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯ ತಲುಪುವುದು.
ಸಾಫ್ಟ್ ಪವರ್ :
ಯೋಗ, ಆಯುರ್ವೇದ ಮತ್ತು ಭಾರತೀಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ರಾಜತಾಂತ್ರಿಕ ಪ್ರಭಾವಕ್ಕಾಗಿ ಬಳಸುವುದು.
ಇದನ್ನೂ ಓದಿ : ಕೆಂಪು ಕೋಟೆಯಲ್ಲಿ ಹೊಸ ಇತಿಹಾಸ : ಇದೇ ಮೊದಲ ಬಾರಿಗೆ ಮೊಳಗಿದ ಪೂರ್ಣ ‘ವಂದೇ ಮಾತರಂ’



















