ಧಾರವಾಡ: ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ನಗರದ (Dharwad) ಪಿಬಿ ರಸ್ತೆಯಲ್ಲಿನ ಮಾಡರ್ನ್ ಹಾಲ್ ಹತ್ತಿರ ನಡೆದಿದೆ. ನಗರದ ಕೆಲಗೇರಿ ನಿವಾಸಿ ಶಿವಾನಂದ ಮಾಳಗಿ(38) ಸಾವನ್ನಪ್ಪಿದ ದುರ್ದೈವಿ. ಶಿವಾನಂದ ಹಾಗೂ ಮಂಜುನಾಥ ಹುಬ್ಬಳ್ಳಿಯಿಂದ ಧಾರವಾಡದತ್ತ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಧಾರವಾಡಿದಿಂದ ಹುಬ್ಬಳ್ಳಿ (Hubballi) ಮಾರ್ಗವಾಗಿ ಗದಗಕ್ಕೆ ಹೊರಟಿದ್ದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಶಿವಾನಂದ ಇದ್ದ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಪರಿಣಾಮ ಕಾರಿನಲ್ಲಿದ್ದ ಶಿವಾನಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಮಂಜುನಾಥ್ಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಲದೇ, ಮತ್ತೊಂದು ಕಾರಿನಲ್ಲಿದ್ದ ಗದಗ ಮೂಲದ ಮನೀಶರೆಡ್ಡಿ, ಬಸವರೆಡ್ಡಿ ಹುಚ್ಚಣ್ಣವರ ಹಾಗೂ ಮಂಜುನಾಥರೆಡ್ಡಿ ಸಾಸಿವೆಹಳ್ಳಿ ಎಂಬುವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಧಾರವಾಡ ಸಂಚಾರ ಠಾಣೆಯ ಪೊಲೀಸರು (Dharwad) ಭೇಟಿ ನೀಡಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.