ಬೆಂಗಳೂರು : ನಗರದ ಯಲಹಂಕದಲ್ಲಿ ವಾಸವಿದ್ದ ಜ್ಯೋತಿಷಿ ಒಬ್ಬರನ್ನು ಪೂಜೆ ಮಾಡಿಸುವ ನೆಪದಲ್ಲಿ ಸಂಪರ್ಕಿಸಿ ಕಿಡ್ನಾಪ್ ಮಾಡಿ, ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಮೊಹಮ್ಮದ್ ತಾರಿಕ್ ಹುಸೇನ್ ಹಲ್ಲೆಗೊಳಗಾದ ಜ್ಯೋತಿಷಿ. ಕೆಲ ದಿನಗಳ ಹಿಂದೆ ಆರಿಫ್ ಎಂಬಾತ ತಾರಿಕ್ ಹುಸೇನ್ ಅವರನ್ನು ಸಂಪರ್ಕಿಸಿ ತಮ್ಮ ಮನೆಗೆ ಬಂದು ಶಾಂತಿ ಪೂಜೆ ಮಾಡಿಸಬೇಕೆಂದು ಹೇಳಿ, ಆನ್ಲೈನ್ ಮೂಲಕ ₹10 ಸಾವಿರ ಮುಂಗಡ ಹಣವನ್ನೂ ಕಳುಹಿಸಿದ್ದ. ಆದರೆ ಕಾರಣಾಂತರಗಳಿಂದ ತಾರಿಕ್ ಹುಸೇನ್ ಮೂರು ದಿನಗಳಾದರೂ ಹೋಗಿರಲಿಲ್ಲ. ಬಳಿಕ ಜುಲೈ 29ರಂದು ಕಾರು ಕಳುಹಿಸುವುದಾಗಿ ಹೇಳಿದ ಆರಿಫ್, ಕಾರು ಮನೆ ಬಳಿ ಬಂದಾಗ ಹೋಗುವ ಸ್ಥಿತಿಯಲ್ಲಿ ಇಲ್ಲ ಎಂದರೂ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದ.
ಆರೋಪಿಗಳು ತಾರಿಕ್ ಹುಸೇನ್ ಅವರನ್ನು ತುಮಕೂರು ಹೊರವಲಯಕ್ಕೆ ಕರೆದೊಯ್ದು ಕಾರಿನಿಂದ ಇಳಿಸಿದ್ದಾರೆ. ಅಲ್ಲಿ ಮೊದಲೇ ಕಾಯುತ್ತಿದ್ದ ಮೂವರು ಸೇರಿ, “ಈ ಹಿಂದೆ ಶಾಂತಿ ಮಾಡುತ್ತೇನೆ ಎಂದು ಹಣ ಪಡೆದಿದ್ದೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಹಣ ಇಲ್ಲ ಎಂದಾಗ ಲಾಂಗ್ ಹಾಗೂ ಮಚ್ಚು ತೋರಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಮತ್ತೆ ಕಾರಿನಲ್ಲಿ ಕೂರಿಸಿಕೊಂಡು ಮೊಬೈಲ್ ಪಾಸ್ವರ್ಡ್ ಮತ್ತು ಯುಪಿಐ ಪಿನ್ ಪಡೆದು, ಅವರ ಬ್ಯಾಂಕ್ ಖಾತೆಯಲ್ಲಿ ₹5 ಲಕ್ಷಕ್ಕೂ ಹೆಚ್ಚು ಹಣ ಇರುವುದನ್ನು ಗಮನಿಸಿ ಮೊದಲು ₹13 ಸಾವಿರವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಬಳಿಕ ತಾರಿಕ್ ಹುಸೇನ್ ಅವರನ್ನು ಅಜ್ಞಾತ ಸ್ಥಳದಲ್ಲಿ ಕೂಡಿ ಹಾಕಿದ ಆರೋಪಿಗಳು, ಮರುದಿನ ಮನೆಯವರಿಗೆ ಕರೆ ಮಾಡಿಸಿ ಅಗತ್ಯ ದಾಖಲೆಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವಂತೆ ಬೆದರಿಕೆ ಹಾಕಿದ್ದಾರೆ. ನಂತರ ಖಾಸಗಿ ಬ್ಯಾಂಕ್ಗೆ ಕರೆದೊಯ್ದು ಹಣ ಡ್ರಾ ಮಾಡುವ ಅರ್ಜಿಗೆ ಬಲವಂತವಾಗಿ ಸಹಿ ಹಾಕಿಸಿಕೊಂಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಸಂಜೆ ಹಣ ನೀಡುವುದಾಗಿ ತಿಳಿಸಿದ ಬಳಿಕ, ಸಂಜೆ ಮತ್ತೆ ಬ್ಯಾಂಕ್ಗೆ ತೆರಳಿ ₹4.25 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಣ ಪಡೆದ ಬಳಿಕ ಆರೋಪಿಗಳು ತಾರಿಕ್ ಹುಸೇನ್ ಅವರನ್ನು ಕಾರಿನಲ್ಲಿ ದಾಬಸ್ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಹೊರವಲಯಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ಜೀವ ಬೆದರಿಕೆ ಹಾಕಿ, ಅವರ ಮೊಬೈಲ್ ಹಿಂತಿರುಗಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ತಾರಿಕ್ ಹುಸೇನ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯ ಬಗ್ಗೆ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಸಂಪಿಗೆಹಳ್ಳಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತುಮಕೂರು ಮೂಲದ ಆರಿಫ್ ಮತ್ತು ಆದಿಲ್, ಚಿಕ್ಕಬಾಣಾವರದ ಇಮ್ರಾನ್ ಹಾಗೂ ಆರ್.ಟಿ. ನಗರದ ಕಾದೀರ್ ಬಂಧಿತರಾಗಿದ್ದು, ಅಪಹರಣ, ಹಲ್ಲೆ, ಸುಲಿಗೆ ಹಾಗೂ ಜೀವ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಹಿರಿಯೂರು ಉಪಚುನಾವಣೆ ಟಿಕೆಟ್ಗಾಗಿ ಬಿಜೆಪಿ-ಜೆಡಿಎಸ್ ಪೈಪೋಟಿ?


















