ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆಯ(Waqf Act) ವಿರುದ್ಧ ಶುಕ್ರವಾರ ಪಶ್ಚಿಮ ಬಂಗಾಳದ ಹಲವಾರು ಭಾಗಗಳಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ, ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಘಟನೆ ನಡೆದಿದೆ. ರಸ್ತೆ ಮತ್ತು ರೈಲು ಸಂಚಾರಕ್ಕೂ ಉದ್ರಿಕ್ತರು ಅಡ್ಡಿಪಡಿಸಿದ್ದಾರೆ.
ಮುರ್ಷಿದಾಬಾದ್ನ ಸುತಿಯಲ್ಲಿ, ಪ್ರತಿಭಟನಾಕಾರರು ನಿಷೇಧಾಜ್ಞೆಯ ಹೊರತಾಗಿಯೂ ಶುಕ್ರವಾರ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ವಾಗ್ವಾದವೂ ನಡೆದಿದೆ. ನಂತರ ಪೊಲೀಸರ ಮೇಲೆ ಕಲ್ಲುಗಳನ್ನು ಎಸೆದಿದ್ದಲ್ಲದೇ, ಪೊಲೀಸ್ ವಾಹನಗಳು ಮತ್ತು ಬಸ್ಸುಗಳಿಗೆ ಬೆಂಕಿ ಹಚ್ಚಿದ್ದಾರೆ. ವಕ್ಫ್ ಕಾಯ್ದೆಯ ವಿರುದ್ಧ ಶುಕ್ರವಾರದ ಪ್ರಾರ್ಥನೆಯ ನಂತರ ಮುಸ್ಲಿಂ ಸಮುದಾಯದ ಜನರು ಜಮಾಯಿಸಿ, ಬೀದಿಗಿಳಿದ ನಂತರ ಭುಗಿಲೆದ್ದ ಘರ್ಷಣೆಯಲ್ಲಿ ಸುಮಾರು 10 ಪೊಲೀಸರು ಗಾಯಗೊಂಡಿದ್ದಾರೆ.
ಪ್ರತಿಭಟನಾಕಾರರು ಬಾಂಬ್ ತರಹದ ವಸ್ತುಗಳನ್ನು ಎಸೆದ ನಂತರ ಪೊಲೀಸರು ಅವರನ್ನು ಚದುರಿಸಲು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂಸಾಚಾರ ಹೆಚ್ಚುತ್ತಿದ್ದಂತೆ ಕೆಲವು ಅಧಿಕಾರಿಗಳು ಹತ್ತಿರದ ಮಸೀದಿಯಲ್ಲಿ ಆಶ್ರಯ ಪಡೆದ ಘಟನೆಯೂ ನಡೆಯಿತು. ಬಳಿಕ ಬಿಎಸ್ಎಫ್ ಪಡೆಯನ್ನು ನಿಯೋಜಿಸಲಾಗಿದ್ದು, ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಲು ಹಲವೆಡೆ ದಾಳಿ ನಡೆಸಿದ್ದಾರೆ.

ಎಲ್ಲಿ ಏನಾಯ್ತು?
- ಪಶ್ಚಿಮ ಬಂಗಾಳದ ಧುಲಿಯಾಂಡಂಗ ಮತ್ತು ನಿಮ್ತಿಟಾ ನಿಲ್ದಾಣಗಳ ನಡುವೆ ಜನರ ಗುಂಪೊಂದು ಹಳಿಗಳನ್ನು ತಡೆದು ರೈಲ್ವೆ ಆಸ್ತಿಗೆ ಹಾನಿ ಮಾಡಿತು. ನಂತರ ಪೂರ್ವ ರೈಲ್ವೆಯ ನ್ಯೂ ಫರಕ್ಕಾ-ಅಜೀಮ್ಗಂಜ್ ವಿಭಾಗದಲ್ಲಿ ರೈಲು ಸೇವೆಗಳನ್ನು ಏಳು ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು.
- ಸುಮಾರು 5,000 ಪ್ರತಿಭಟನಾಕಾರರು ಲೆವೆಲ್ ಕ್ರಾಸಿಂಗ್ನಲ್ಲಿ ಹಳಿಗಳನ್ನು ಬ್ಲಾಕ್ ಮಾಡಿದ್ದು, ಮತ್ತೊಂದು ಗೇಟ್ ಅನ್ನೂ ಪ್ರತಿಭಟನಾಕಾರರು ಹಾನಿಗೊಳಿಸಿದ್ದಾರೆ. ಪ್ರತಿಭಟನಾಕಾರರು ರೈಲ್ವೆ ಹಳಿಗಳ ಮೇಲೆ ಕುಳಿತಿದ್ದರಿಂದ ಮಾಲ್ಡಾ ಮಾರ್ಗದಲ್ಲಿ ರೈಲು ಸೇವೆಗಳು ಅಸ್ತವ್ಯಸ್ತಗೊಂಡವು.
- ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಜಂಗಿಪುರದಲ್ಲೂ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
- ಇತ್ತೀಚೆಗೆ ಇಲ್ಲಿ ಉಂಟಾದ ಅಶಾಂತಿಯಿಂದ ಸ್ಥಗಿತಗೊಂಡಿದ್ದ ಇಂಟರ್ನೆಟ್ ಸೇವೆಗಳು ಹಾಗೂ ನಿಷೇಧಾಜ್ಞೆಯನ್ನು ಮುಂದುವರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ದಕ್ಷಿಣ 24 ಪರಗಣ ಜಿಲ್ಲೆಯ ಅಮ್ಟಾಲಾದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರತಿಭಟನಾಕಾರರು ಪೊಲೀಸ್ ವಾಹನಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ.
- ಕೋಲ್ಕತ್ತಾದಲ್ಲಿ, ಅಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಖಿದಿರ್ಪುರ ಪ್ರದೇಶದಲ್ಲಿ ವಕ್ಫ್ ಕಾಯ್ದೆಯ ವಿರುದ್ಧ ರಾಲಿಗಳನ್ನು ನಡೆಸಿದ್ದಾರೆ.
- ಮುರ್ಷಿದಾಬಾದ್, ಮಾಲ್ಡಾ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆಗೆ ಕಾರಣವಾದ ದುಷ್ಕರ್ಮಿಗಳ ವಿರುದ್ಧ ತಕ್ಷಣ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಸಿ.ವಿ.ಆನಂದ ಬೋಸ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.