ಅಮರಾವತಿ : ಮಹಾರಾಷ್ಟ್ರದ ಅಮರಾವತಿಯ ಸರ್ಕಾರಿ ಮಹಿಳಾ ಆಸ್ಪತ್ರೆಯಲ್ಲಿ ಇಂದು (ಸೋಮವಾರ) ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅನಾಹುತವು ಮೂರು ನವಜಾತ ಶಿಶುಗಳನ್ನು ಬಲಿಪಡೆದಿದೆ. ಬೆಳಗಿನ ಜಾವ ಸುಮಾರು 3.30ರ ಸುಮಾರಿಗೆ ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ನವಜಾತ ಶಿಶುಗಳ ನಿಗಾ ಘಟಕದಲ್ಲಿ (SNCU) ವೆಂಟಿಲೇಟರ್ ಸ್ಫೋಟಗೊಂಡಿದ್ದೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಘಟನೆಯ ತೀವ್ರತೆಗೆ ಮೂರು ಶಿಶುಗಳು ಸಜೀವ ದಹನವಾಗಿವೆ.
ಬೆಂಕಿ ಕಾಣಿಸಿಕೊಂಡ ತಕ್ಷಣವೇ ಜಾಗರೂಕರಾದ ವೈದ್ಯರು, ದಾದಿಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಕೂಡಲೇ ನವಜಾತ ಶಿಶುಗಳ ನಿಗಾ ಘಟಕಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ವೈದ್ಯಕೀಯ ಉಪಕರಣಗಳ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಿ, ವಾರ್ಡ್ನಲ್ಲಿದ್ದ ಇತರೆ ಮಕ್ಕಳನ್ನು ಬೆಂಕಿಯ ಜ್ವಾಲೆಯಿಂದ ಸುರಕ್ಷಿತವಾಗಿ ಹೊರತರಲಾಯಿತು. ದುರಂತದ ಸಮಯದಲ್ಲಿ ಈ ಘಟಕದಲ್ಲಿ ಒಟ್ಟು 39 ನವಜಾತ ಶಿಶುಗಳು ಚಿಕಿತ್ಸೆ ಪಡೆಯುತ್ತಿದ್ದವು.
ಗಂಭೀರ ಗಾಯಗೊಂಡ ಶಿಶುಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನೆ
ಬೆಂಕಿಯ ಜ್ವಾಲೆ ಮತ್ತು ದಟ್ಟವಾದ ಹೊಗೆಯಿಂದಾಗಿ ತೀವ್ರ ಸುಟ್ಟಗಾಯಗಳಿಗೆ ಒಳಗಾದ ಮೂರು ಶಿಶುಗಳು ಜೀವ ಕಳೆದುಕೊಂಡಿವೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಆರು ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತಕ್ಷಣವೇ ಸ್ಥಳಾಂತರಿಸಲಾಗಿದೆ.
ಉನ್ನತ ಮಟ್ಟದ ತನಿಖೆಗೆ ಆದೇಶ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಉಪ ಕಮಿಷನರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಆಡಳಿತಾತ್ಮಕ ಲೋಪ ಮತ್ತು ದುರಂತದ ಕುರಿತು ಸಮಗ್ರವಾಗಿ ವಿಚಾರಣೆ ನಡೆಸಿ ಹೊಣೆಗಾರರನ್ನು ಪತ್ತೆಹಚ್ಚಲು ಸ್ಥಳೀಯ ಆಡಳಿತ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಸಚಿವ ಚಂದ್ರಶೇಖರ್ ಬಾವಂಕುಳೆ ಶೋಕ ಸಂದೇಶ
ಈ ದುರಂತಕ್ಕೆ ಅಮರಾವತಿ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಚಂದ್ರಶೇಖರ್ ಬಾವಂಕುಳೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಅಮರಾವತಿ ಆಸ್ಪತ್ರೆಯ ಘಟನೆ ನನ್ನ ಮನಸ್ಸನ್ನು ತೀವ್ರವಾಗಿ ಕಲಕಿದೆ. ಮೃತಪಟ್ಟ ಶಿಶುಗಳ ಕುಟುಂಬಕ್ಕೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಪ್ರಾರ್ಥಿಸಿರುವ ಅವರು, ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ಸುರಕ್ಷತಾ ವ್ಯವಸ್ಥೆಯ ಲೋಪ: ಪ್ರತಿಪಕ್ಷಗಳ ಆಕ್ರೋಶ
ಇನ್ನೊಂದೆಡೆ, ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಆಸ್ಪತ್ರೆಯ ಅಗ್ನಿಶಾಮಕ ವ್ಯವಸ್ಥೆಯ ಲೋಪವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ನೂತನ ಕಟ್ಟಡದ ನವಜಾತ ಶಿಶುಗಳ ನಿಗಾ ಘಟಕದಲ್ಲೇ ಈ ಅನಾಹುತ ನಡೆದಿರುವುದು ಆಘಾತಕಾರಿ ಎಂದಿರುವ ಅವರು, ಆಸ್ಪತ್ರೆಯಲ್ಲಿ ಸೂಕ್ತವಾದ ಅಗ್ನಿಶಾಮಕ ಉಪಕರಣಗಳು ಲಭ್ಯವಿಲ್ಲದ ಕಾರಣ ಬೆಂಕಿ ಬೇಗನೆ ವ್ಯಾಪಿಸಿತು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ದೆಹಲಿಯಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ಭೀಕರ ಅಪಘಾತ!



















