ಢಾಕಾ : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಅನುಮಾನಾಸ್ಪದ ದಾಳಿಗಳು ಮುಂದುವರಿದಿದೆ. ಇದೀಗ ರಂಗ್ಪುರ ನಗರದಲ್ಲಿ ನಿವೃತ್ತ ಶಿಕ್ಷಕ, ಅವರ ಪತ್ನಿ, 23 ವರ್ಷದ ಮಗಳು ಹಾಗೂ 12 ವರ್ಷದ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರು ತಮ್ಮದೇ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಈ ಭೀಕರ ಹತ್ಯಾಕಾಂಡವು ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶವನ್ನು ಹುಟ್ಟುಹಾಕಿದೆ. ಶನಿವಾರ ತಡರಾತ್ರಿ ಬಾಗಿಲು ಮುರಿದು ಒಳನುಗ್ಗಿದ ಪೊಲೀಸರು ನಾಲ್ವರ ಶವಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಕೊಲೆಯಾದವರನ್ನು ರಂಗ್ಪುರ ಜಿಲ್ಲಾ ಶಾಲೆಯ ನಿವೃತ್ತ ಶಿಕ್ಷಕ ಗಣಪತಿ ಚಕ್ರವರ್ತಿ (65), ಅವರ ಪತ್ನಿ ಪ್ರೀತಿಲತಾ ಚಕ್ರವರ್ತಿ (50), ಮಗಳು ಅಗಾಮಿ ಚಕ್ರವರ್ತಿ ಪ್ರಾರ್ಥಿ (23) ಮತ್ತು ಪುತ್ರ ಪ್ರಿಯಮ್ ಚಕ್ರವರ್ತಿ (12) ಎಂದು ಗುರುತಿಸಲಾಗಿದೆ. ರಂಗ್ಪುರ ನಗರದ ದಾಸ್ಪಾರಾ (ಮಚ್ಚುವಾಪಾರಾ) ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ನೂತನ ಮನೆಯಲ್ಲಿ ಈ ಕುಟುಂಬ ವಾಸವಾಗಿತ್ತು. ಗಣಪತಿ ಅವರು ಕಳೆದ ವರ್ಷದ ಡಿಸೆಂಬರ್ 31 ರಂದು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದು, ನಂತರ ಹೋಮಿಯೋಪತಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮಗಳು ಅಗಾಮಿ ಈ ವರ್ಷವಷ್ಟೇ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಮಾಸ್ಟರ್ಸ್) ಪೂರೈಸಿದ್ದರೆ, ಮಗ ಪ್ರಿಯಮ್ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಮೊಬೈಲ್ ಫೋನ್ ಸಂಪರ್ಕ ಕಡಿತ
ಸಂಬಂಧಿಕರ ಪ್ರಕಾರ, ಗುರುವಾರ ಮಧ್ಯಾಹ್ನದ ನಂತರ ಈ ಕುಟುಂಬ ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಪತ್ನಿ ಪ್ರೀತಿಲತಾ ಅವರ ತಂಗಿ ಪೂಜಾ ಚಕ್ರವರ್ತಿ ಅವರು ಮಾತನಾಡಿ, ಗುರುವಾರ ಮಧ್ಯಾಹ್ನ ಅಕ್ಕನೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಆದರೆ ಗುರುವಾರ ರಾತ್ರಿಯಿಂದ ಕುಟುಂಬಸ್ಥರು ಬಳಸುತ್ತಿದ್ದ ನಾಲ್ಕೂ ಮೊಬೈಲ್ ಫೋನ್ಗಳು ಸ್ವಿಚ್ ಆಫ್ ಆಗಿದ್ದವು. ಸತತವಾಗಿ ಕರೆ ಮಾಡಿದರೂ ಸಿಗದಿದ್ದಾಗ ಗಾಬರಿಗೊಂಡ ಸಂಬಂಧಿಕರು ಶನಿವಾರ ರಾತ್ರಿ ದಾಸ್ಪಾರಾದ ಮನೆಗೆ ಆಗಮಿಸಿದ್ದಾರೆ. ಆಗ ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಲಾಗಿತ್ತು ಹಾಗೂ ಒಳಗಿನ ಎಲ್ಲಾ ದೀಪಗಳು ಆಫ್ ಆಗಿದ್ದವು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಬೀಗ ಮುರಿದು ಒಳಪ್ರವೇಶಿಸಿದಾಗ ನಾಲ್ವರ ದೇಹಗಳು ಪತ್ತೆಯಾಗಿವೆ.
ಮನೆಯ ಮೂಲೆ ಮೂಲೆಯಲ್ಲಿ ಪತ್ತೆಯಾದ ಶವಗಳು
ಘಟನೆಯ ತನಿಖೆ ನಡೆಸುತ್ತಿರುವ ಸಿಐಡಿ (CID) ಅಧಿಕಾರಿ ಸುಬೀರ್ ಚೌಧರಿ ನೀಡಿರುವ ಮಾಹಿತಿ ಪ್ರಕಾರ, ದುಷ್ಕರ್ಮಿಗಳು ಯೋಜಿತವಾಗಿ ಈ ಕೃತ್ಯ ಎಸಗಿದ್ದಾರೆ. ತಾಯಿ ಹಾಗೂ ಮಗಳ ಶವಗಳು ಮನೆಯ ಮೆಟ್ಟಿಲುಗಳ ಬಳಿ ಪತ್ತೆಯಾಗಿದ್ದರೆ, ಗಣಪತಿ ಚಕ್ರವರ್ತಿ ಅವರ ಶವ ಮನೆಯ ಮೇಲ್ಛಾವಣಿ ಮೇಲೆ ಬಿದ್ದಿತ್ತು. 12 ವರ್ಷದ ಬಾಲಕ ಪ್ರಿಯಮ್ ಶವವನ್ನು ಮಂಚದ ಅಡಿಯಲ್ಲಿ ಬಚ್ಚಿಡಲಾಗಿತ್ತು. ಗಣಪತಿ ಅವರಿಗೆ ಯಾರೊಂದಿಗೂ ಶತ್ರುತ್ವವಿರಲಿಲ್ಲ, ಅವರು ಅತ್ಯಂತ ಸಾತ್ವಿಕ ಹಾಗೂ ಒಳ್ಳೆಯ ಮನುಷ್ಯರಾಗಿದ್ದರು ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಈ ಕೊಲೆಯ ಹಿಂದಿನ ನಿಜವಾದ ಉದ್ದೇಶ ಏನೆಂಬುದು ಯಾರಿಗೂ ಅರ್ಥವಾಗುತ್ತಿಲ್ಲ.
ಪ್ರಮುಖ ಸಂಸ್ಥೆಗಳಿಂದ ತನಿಖೆ
ರಂಗ್ಪುರ ಮೆಟ್ರೋಪಾಲಿಟನ್ ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ನಾಜ್ಮುಲ್ ಖಾದರ್ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಅಪರಾಧ ತನಿಖಾ ವಿಭಾಗ (CID) ಮತ್ತು ಪತ್ತೇದಾರಿ ವಿಭಾಗ (DB) ಜಂಟಿ ಕಾರ್ಯಾಚರಣೆ ಆರಂಭಿಸಿವೆ ಎಂದು ತಿಳಿಸಿದ್ದಾರೆ. ಪ್ರಕರಣವು ಅತ್ಯಂತ ಸೂಕ್ಷ್ಮವಾಗಿದ್ದು, ಕೊಲೆಗಾರರು ಯಾರು ಮತ್ತು ಯಾವ ಸಮಯಕ್ಕೆ ಈ ಭೀಕರ ಕೃತ್ಯ ಎಸಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಬಳಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ : 33ನೇ ವಯಸ್ಸಿನಲ್ಲಿ ಭಾರತ ಟೆಸ್ಟ್ಗೆ ಪಾದಾರ್ಪಣೆ ಮಾಡಿದ ಸರಾಂಶ್ ಜೈನ್ ; ಕುಲದೀಪ್ಗೆ ವಿಶ್ರಾಂತಿ


















