ಲಂಡನ್ : ಲಂಡನ್ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ 3ನೇ ಮತ್ತು ನಿರ್ಣಾಯಕ ಏಕದಿನ ಪಂದ್ಯದ ವೇಳೆ, ಮಾಜಿ ಕ್ರಿಕೆಟಿಗ ಹಾಗೂ ವಿಶ್ವಕಪ್ ವಿಜೇತ ನಾಯಕ ಯುವರಾಜ್ ಸಿಂಗ್, ರೋಹಿತ್ ಶರ್ಮಾ ಅವರ ನಿವೃತ್ತಿ ಮತ್ತು 2027ರ ಏಕದಿನ ವಿಶ್ವಕಪ್ಗೆ ವಿರಾಟ್ ಕೊಹ್ಲಿಯವರ ಭವಿಷ್ಯದ ಕುರಿತು ಮಹತ್ವದ ಮಾತುಗಳನ್ನಾಡಿದ್ದಾರೆ.
ಜಿಯೋ-ಹಾಟ್ಸ್ಟಾರ್ ಸ್ಪೋರ್ಟ್ಸ್ ಶೋನ ಇನ್ನಿಂಗ್ಸ್ ವಿರಾಮದ ವೇಳೆ ಮಾತನಾಡಿದ ಯುವಿ, “ಭಾರತೀಯ ಕ್ರಿಕೆಟ್ನ ಈ ಇಬ್ಬರು ದಿಗ್ಗಜರು ತಂಡದಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಮ್ಯಾನೇಜ್ಮೆಂಟ್ ಸ್ಪಷ್ಟತೆ ಒದಗಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ವಿಶ್ವಕಪ್ ನಂತಹ ದೊಡ್ಡ ಟೂರ್ನಿಗಳಿಗೆ ಕೇವಲ ಯುವ ಆಟಗಾರರ ಮೇಲೆ ಅವಲಂಬಿತರಾಗಬಾರದು. ತಂಡದಲ್ಲಿ ಅನುಭವದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಯುವ ಹಾಗೂ ನುರಿತ ಆಟಗಾರರ ಸಂಯೋಜನೆ ಮುಖ್ಯ
ಯುವರಾಜ್ ಸಿಂಗ್, ತಂಡದ ಸಂಯೋಜನೆಯ ಬಗ್ಗೆ ಮಾತನಾಡುತ್ತಾ ಯುವ ಆಟಗಾರರು ಹಾಗೂ ಅನುಭವಿ ಆಟಗಾರರ ನಡುವಿನ ಸಮತೋಲನದ ಮಹತ್ವವನ್ನು ಒತ್ತಿ ಹೇಳಿದ್ದಾರೆ. “ನೀವು ಯಾರಿಗೆ ಹೆಚ್ಚು ಒತ್ತು ನೀಡುತ್ತೀರಿ ಎನ್ನುವುದು ಮ್ಯಾನೇಜ್ಮೆಂಟ್ಗೆ ಬಿಟ್ಟದ್ದು. ಆದರೆ, ಕೇವಲ ಯುವ ಆಟಗಾರರೊಂದಿಗೆ ಮುಂದುವರಿಯುವುದು ಕಷ್ಟ. ಕೇವಲ ಅನುಭವದೊಂದಿಗೆ ಟೂರ್ನಿ ಆಡುವುದೂ ಅಸಾಧ್ಯವೇ. ಇವೆರಡರ ಸಮತೋಲನ ಅಗತ್ಯವಿದೆ. ಇವರಿಬ್ಬರೂ ಮುಂದಿನ ವಿಶ್ವಕಪ್ ಆಡಬೇಕಾದರೆ, ಈಗಲೇ ಅವರ ಸ್ಥಾನವನ್ನು ಭದ್ರಪಡಿಸಬೇಕು” ಎಂದು ಯುವಿ ಸ್ಪಷ್ಟ ಪಡಿಸಿದರು.
ಮಾಧ್ಯಮಗಳ ಅನಗತ್ಯ ಟೀಕೆಗಳ ಬಗ್ಗೆ ಯುವಿ ಅಸಮಾಧಾನ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಒಂದೆರಡು ಪಂದ್ಯಗಳಲ್ಲಿ ವಿಫಲರಾದ ತಕ್ಷಣ ಮಾಧ್ಯಮಗಳು ಫಾರ್ಮ್ ಹಾಗೂ ವಯಸ್ಸಿನ ವಿಷಯವನ್ನು ಮುಂದಿಟ್ಟುಕೊಂಡು ಟೀಕೆಗಳನ್ನು ಮಾಡುತ್ತವೆ ಎಂದು ಯುವರಾಜ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು. “ಅವರು ಪರ್ಫಾರ್ಮ್ ಮಾಡದಿದ್ದ ತಕ್ಷಣ ಹೊರಗಡೆ ಏನೇನೋ ಮಾತುಗಳು ಕೇಳಿಬರುತ್ತವೆ, ಅವರ ಫಾರ್ಮ್ ಮತ್ತು ವಯಸ್ಸಿನ ಬಗ್ಗೆ ಟೀಕೆಗಳು ಬರುತ್ತವೆ. ಹೊರಗಡೆಯ ಶಬ್ದಗಳು ಹೊರಗೇ ಇರಲಿ” ಎಂದು ಖಾರವಾಗಿ ಉತ್ತರಿಸಿದರು.
ಮುಖಾಮುಖಿ ಮಾತನಾಡುವ ಧೈರ್ಯವಿರಲಿ
ಹಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ಗೆ ಅವಿಸ್ಮರಣೀಯ ಕೊಡುಗೆ ನೀಡಿರುವ ಈ ಇಬ್ಬರೂ ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ಮ್ಯಾನೇಜ್ಮೆಂಟ್ ಮುಕ್ತವಾಗಿ ಮಾತನಾಡಬೇಕು ಎಂದು ಯುವಿ ಕೋರಿದ್ದಾರೆ. “ಮುಂದಿನ ವಿಶ್ವಕಪ್ಗೆ ಅವರನ್ನು ಕಳುಹಿಸುವ ಯೋಚನೆ ಇದ್ದರೆ ಈಗಲೇ ಅವರಿಗೆ ಹೇಳಿ, ಭರವಸೆ ಕೊಡಿ. ಒಂದು ವೇಳೆ ಅವರು ತಂಡಕ್ಕೆ ಸರಿಹೊಂದುವುದಿಲ್ಲ ಎನಿಸಿದರೆ ನೇರವಾಗಿ ಅವರ ಮುಖದ ಮೇಲೆಯೇ ಹೇಳಿಬಿಡಿ. ಅದು ಆರಂಭದಲ್ಲಿ ಕಷ್ಟ ಎನಿಸಿದರೂ, ನಂತರ ನೈಜತೆಯನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ರೋಹಿತ್ ಮತ್ತು ವಿರಾಟ್ ಅವರು ಭಾರತಕ್ಕಾಗಿ ಮಾಡಿರುವ ಸಾಧನೆ, ಗೆಲ್ಲಿಸಿಕೊಟ್ಟಿರುವ ಪಂದ್ಯಗಳು, ಬಾರಿಸಿರುವ ಶತಕಗಳು ಹಾಗೂ ನಾಯಕರಾಗಿ ತಂಡಕ್ಕೆ ಕೊಟ್ಟಿರುವ ಕೊಡುಗೆ ಬೆಲೆ ಕಟ್ಟಲಾಗದ್ದು. ಹೀಗಾಗಿ ಅವರ ಜೊತೆ ನೀವು ಸ್ಪಷ್ಟವಾಗಿರಬೇಕು” ಎಂದು ಯುವರಾಜ್ ಸಿಂಗ್ ಆಗ್ರಹಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ರೋಹಿತ್ ಹಾಗೂ ಕೊಹ್ಲಿ ಪ್ರದರ್ಶನ
ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ, 2ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿದ್ದರು (ಪಂದ್ಯದಲ್ಲಿ ಭಾರತ ಸೋತಿತ್ತು). ಮತ್ತೊಂದೆಡೆ, ರೋಹಿತ್ ಶರ್ಮಾ 3ನೇ ಪಂದ್ಯದಲ್ಲಿ ಉತ್ತಮ ಲಯಕ್ಕೆ ಮರಳಿದಂತೆ ಕಂಡು ಬಂದಿದ್ದಾರೆ. ಟೀಕಾಕಾರರ ಬಾಯಿ ಮುಚ್ಚಿಸಲು ಈ ಅನುಭವಿ ಆಟಗಾರರಿಗೆ ಒಂದೆರಡು ಉತ್ತಮ ಇನ್ನಿಂಗ್ಸ್ಗಳ ಅಗತ್ಯವಿದೆಯಷ್ಟೇ.
ಇದನ್ನೂ ಓದಿ : ಮುನಿಸು? ಯಾವ ಮುನಿಸು? ಲಂಡನ್ನಲ್ಲಿ ಒಟ್ಟಾಗಿ ಕಾಣಿಸಿಕೊಂಡ ಕೊಹ್ಲಿ-ಗಂಭೀರ್



















