ತಿರುವನಂತಪುರಂ : “ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು, ಅವರು ಮನೆಗೆ ಸೀಮಿತವಾಗಬೇಕು. ಹೆಣ್ಣುಮಕ್ಕಳು ಸಾರ್ವಜನಿಕ ರಂಗ ಪ್ರವೇಶಿಸಿದರೆ ವಿನಾಶ ಖಚಿತ” ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸಾರ್ವಜನಿಕವಾಗಿ ಹಾಗೂ ರಾಜಕೀಯ ವಲಯಗಳಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಭಾರತದ ಗ್ರ್ಯಾಂಡ್ ಮುಫ್ತಿ ಹಾಗೂ ಇಸ್ಲಾಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಕೊನೆಗೂ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಇಸ್ಲಾಂ ಧರ್ಮವು ಮಹಿಳೆಯರನ್ನು ಹತೋಟಿಯಲ್ಲಿಡಲು ಅಥವಾ ಅವರಿಗೆ ದ್ವಿತೀಯ ದರ್ಜೆಯ ಸ್ಥಾನ ನೀಡಲು ಎಂದಿಗೂ ಪ್ರತಿಪಾದಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಹೇಳಿಕೆಯ ಸುತ್ತ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಸಾರ್ವಜನಿಕ ಸಮಾವೇಶವೊಂದರಲ್ಲಿ ಮಾತನಾಡಿದ 95 ವರ್ಷದ ಧರ್ಮಗುರು ಕಾಂತಪುರಂ, “ನಾವು ಮಹಿಳೆಯರಿಗೆ ಸಮಾಜದಲ್ಲಿ ದ್ವಿತೀಯ ದರ್ಜೆಯ ಸ್ಥಾನ ನೀಡಿದ್ದೇವೆ ಎಂದು ಹೇಳುವುದು ತಪ್ಪು. ಇಸ್ಲಾಂ ಮಹಿಳೆಯರನ್ನು ಹೂತುಹಾಕುವ ಅಥವಾ ಅವರ ಹಕ್ಕುಗಳನ್ನು ಕಸಿಯುವ ಧರ್ಮವಲ್ಲ” ಎಂದು ಪ್ರತಿಪಾದಿಸಿದರು. ತಾವು ನಡೆಸುತ್ತಿರುವ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಆಡಳಿತದ ಶಿಕ್ಷಣ ಸಂಸ್ಥೆಗಳನ್ನು ಉದಾಹರಣೆಯಾಗಿ ನೀಡಿದ ಅವರು, ತಮ್ಮ ಸಂಸ್ಥೆಗಳಲ್ಲಿ ನೂರಾರು ಹೆಣ್ಣುಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಹಾಗೂ ಮಹಿಳೆಯರೇ ಶಿಕ್ಷಕಿಯರಾಗಿ ಉದ್ಯೋಗ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇಸ್ಲಾಂ ಇತಿಹಾಸ ನೆನಪಿಸಿ ಸಿಎಂ ವಿ.ಡಿ. ಸತೀಶನ್ ತಿರುಗೇಟು
ಕಾಂತಪುರಂ ಅವರ “ಮಹಿಳೆಯರು ಹೊರಬರುವುದು ವಿನಾಶಕ್ಕೆ ಕಾರಣ” ಎಂಬ ಮೂಲ ಹೇಳಿಕೆಯನ್ನು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ವಿವಿಧ ರಾಜಕೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಕಾಂತಪುರಂ ಬೆಂಬಲಿಗರ ನಿಯೋಗ ಸತೀಶನ್ ಅವರನ್ನು ಭೇಟಿಯಾಗಿ ಮನವೊಲಿಸಲು ಯತ್ನಿಸಿದರೂ ಸಿಎಂ ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ. “ಪ್ರವಾದಿ ಮೊಹಮ್ಮದರ ಮೊದಲ ಪತ್ನಿ ಖದೀಜಾ ದೊಡ್ಡ ಉದ್ಯಮಿಯಾಗಿದ್ದರು ಮತ್ತು ಅವರ ಇನ್ನೊಬ್ಬ ಪತ್ನಿ ಆಯಿಷಾ ಯುದ್ಧದಲ್ಲಿ ಸೈನ್ಯದ ನೇತೃತ್ವ ವಹಿಸಿದ್ದರು. 21 ನೇ ಶತಮಾನದಲ್ಲಿ 19 ನೇ ಶತಮಾನದ ಇಂತಹ ಆಲೋಚನೆಗಳನ್ನು ಒಪ್ಪಲು ಸಾಧ್ಯವಿಲ್ಲ. ಮಹಿಳೆಯರು ಮನೆಯಲ್ಲೇ ಬಂಧಿಯಾಗಿರದೆ ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು” ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳಿಂದ ಖಂಡನೆ
ಕಾಂತಪುರಂ ಹೇಳಿಕೆಗೆ ಕೇವಲ ಆಡಳಿತ ಪಕ್ಷ ಮಾತ್ರವಲ್ಲದೆ, ಸಿಪಿಎಂ ನಾಯಕ ಎಂ.ಎ. ಬೇಬಿ ಸೇರಿದಂತೆ ಪ್ರಮುಖ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆಗಳು ದೇಶದ ಸಂವಿಧಾನ ನೀಡಿದ ಲಿಂಗ ಸಮಾನತೆಯ ಹಕ್ಕಿಗೆ ವಿರುದ್ಧವಾಗಿವೆ ಎಂದಿದ್ದಾರೆ.
ಇದನ್ನೂ ಓದಿ : ವೋಕ್ಸ್ವ್ಯಾಗನ್ ಕಾರುಗಳ ಮೇಲೆ ಭರ್ಜರಿ ಆಫರ್ ; ಟೈಗನ್, ಟಿಗುವಾನ್ಗೆ 6 ಲಕ್ಷ ರೂಪಾಯಿ ವರೆಗೆ ಲಾಭ!



















