ಭೋಪಾಲ್ : ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಮಾಡೆಲ್ ಹಾಗೂ ನಟಿ ತ್ವಿಷಾ ಶರ್ಮಾ ಅವರ ನಿಗೂಢ ಸಾವು ಪ್ರಕರಣ ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ಇಡೀ ಪ್ರಕರಣದ ತನಿಖೆಯನ್ನು ಭೋಪಾಲ್ ಪೊಲೀಸರಿಂದ ತನ್ನ ವಶಕ್ಕೆ ಪಡೆದುಕೊಂಡಿರುವ ಕೇಂದ್ರೀಯ ತನಿಖಾ ದಳ (CBI), ಈ ಹಿಂದಿನ ತನಿಖಾ ವರದಿಗಳು ಮತ್ತು ತ್ವಿಷಾ ಪತಿ ಸಮರ್ಥ್ ಸಿಂಗ್ ನೀಡಿದ್ದ ಹೇಳಿಕೆಗಳ ಆಧಾರದ ಮೇಲೆ ಹೊಸದಾಗಿ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಸೋಮವಾರವಷ್ಟೇ ಭೋಪಾಲ್ ಪೊಲೀಸರು ದಾಖಲಿಸಿಕೊಂಡಿದ್ದ ಎಫ್ಐಆರ್ ಅನ್ನು ಮರು-ದಾಖಲು ಮಾಡಿಕೊಂಡಿರುವ ಸಿಬಿಐ, ತ್ವಿಷಾ ಪತಿ ಸಮರ್ಥ್ ಸಿಂಗ್ ಹಾಗೂ ಆತನ ತಾಯಿ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದೆ. ದೆಹಲಿಯಿಂದ ಭೋಪಾಲ್ಗೆ ಆಗಮಿಸಿರುವ ಸಿಬಿಐನ ವಿಶೇಷ ಅಪರಾಧ ವಿಭಾಗದ ತಂಡವು ಕೇಸ್ ಡೈರಿ, ವೈದ್ಯಕೀಯ ದಾಖಲೆಗಳು, ಡಿಜಿಟಲ್ ಪುರಾವೆಗಳು ಹಾಗೂ ಸ್ಥಳೀಯ ಪೊಲೀಸರು ಸಂಗ್ರಹಿಸಿದ್ದ ಸಾಕ್ಷ್ಯಗಳನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ವರದಕ್ಷಿಣೆ ಕಿರುಕುಳ ಮತ್ತು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಎಫ್ಐಆರ್ ದಾಖಲಾಗಿದ್ದು, ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥ ರಜನೀಶ್ ಕಶ್ಯಪ್ ಕೌಲ್ ಅವರನ್ನೇ ಸಿಬಿಐ ದೂರುದಾರರನ್ನಾಗಿ ಹೆಸರಿಸಿದೆ.
ಇದೀಗ ಇಡೀ ತನಿಖೆಯು ಸಮರ್ಥ್ ಸಿಂಗ್ ಪೊಲೀಸರ ಮುಂದೆ ನೀಡಿರುವ 10 ಗಂಟೆಗಳ ಸುದೀರ್ಘ ಹೇಳಿಕೆ ಹಾಗೂ ಲಭ್ಯವಿರುವ ವಾಟ್ಸಾಪ್ ಚಾಟ್ಗಳ ಸುತ್ತ ಸುತ್ತುತ್ತಿದ್ದು, ಪತಿಯ ವಾದಗಳು ತನಿಖಾ ಸಂಸ್ಥೆಗೆ ಹತ್ತಾರು ಅನುಮಾನಗಳನ್ನು ಹುಟ್ಟುಹಾಕಿವೆ.
ವಾಟ್ಸಾಪ್ ಚಾಟ್ನಿಂದ ಬಯಲಾದ ಕಹಿ ಸತ್ಯ
ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಮರ್ಥ್ ಸಿಂಗ್, ತಮಗೂ ತ್ವಿಷಾಗೂ ಸಣ್ಣಪುಟ್ಟ ದಾಂಪತ್ಯ ಕಲಹಗಳಿದ್ದವೇ ಹೊರತು ತಾನ್ಯಾವತ್ತೂ ಆಕೆಯ ಮೇಲೆ ದೈಹಿಕ ದೌರ್ಜನ್ಯ ಎಸಗಿಲ್ಲ ಎಂದು ವಾದಿಸಿದ್ದಾನೆ. ಮದುವೆಯಾದ ಕೇವಲ ಐದು ತಿಂಗಳಲ್ಲೇ ಉಂಟಾದ ಈ ದುರಂತಕ್ಕೆ ತ್ವಿಷಾ ಅವರ ಮಾನಸಿಕ ಸ್ಥಿತಿಯೇ ಕಾರಣ ಎಂಬಂತೆ ಬಿಂಬಿಸಲು ಆತ ಯತ್ನಿಸಿದ್ದಾನೆ. ವಿಶೇಷವಾಗಿ ತ್ವಿಷಾ ಗರ್ಭಪಾತದ ವಿಷಯದ ಕುರಿತು ಮಾತನಾಡಿರುವ ಸಮರ್ಥ್, ತನಗೆ ಮಗು ಬೇಕಿತ್ತು. ಆದರೆ ತ್ವಿಷಾ ವೈದ್ಯಕೀಯ ಸಲಹೆಯ ಮೇರೆಗೆ ಸ್ವಇಚ್ಛೆಯಿಂದ ಗರ್ಭಪಾತ ಮಾಡಿಸಿಕೊಂಡರು ಎಂದು ಹೇಳಿಕೆ ನೀಡಿದ್ದಾನೆ. ಆದರೆ, ತನಿಖಾಧಿಕಾರಿಗಳ ಕೈ ಸೇರಿರುವ ತ್ವಿಷಾ ಅವರ ವಾಟ್ಸಾಪ್ ಸಂದೇಶಗಳು ಸಂಪೂರ್ಣ ವಿಭಿನ್ನವಾದ ಕಥೆಯನ್ನೇ ಹೇಳುತ್ತಿವೆ.
ತ್ವಿಷಾ ಗರ್ಭಿಣಿಯಾಗಿದ್ದಾಗ ಸಮರ್ಥ್ ಆಕೆಯ ಪಾವಿತ್ರ್ಯವನ್ನು ಸಂಶಯಿಸಿ, ಮಗುವಿನ ಅಪ್ಪ ಯಾರು ಎಂಬ ಬಗ್ಗೆಯೇ ಪ್ರಶ್ನೆ ಎತ್ತಿದ್ದ ಎಂಬ ಆಘಾತಕಾರಿ ವಿಷಯ ಈ ಚಾಟ್ಗಳಿಂದ ಬೆಳಕಿಗೆ ಬಂದಿದೆ. ತನಗೆ ಮತ್ತು ತನ್ನ ತಾಯಿಗೆ ಮಗು ಬೇಕಿತ್ತೆಂಬ ಪತಿಯ ವಾದವನ್ನು ಈ ಡಿಜಿಟಲ್ ಪುರಾವೆಗಳು ಸಂಪೂರ್ಣವಾಗಿ ಸುಳ್ಳಾಗಿಸುತ್ತಿವೆ. ಇತ್ತ ತ್ವಿಷಾ ಕುಟುಂಬಸ್ಥರು, ಗರ್ಭಧಾರಣೆಯ ನಂತರವೇ ತ್ವಿಷಾಗೆ ಮಾನಸಿಕ ಕಿರುಕುಳ ಹೆಚ್ಚಾಯಿತು ಮತ್ತು ಇದೇ ಅವಧಿಯಲ್ಲಿ ಆಕೆ ಸುಮಾರು 15 ಕೆಜಿಯಷ್ಟು ತೂಕ ಕಳೆದುಕೊಂಡಿದ್ದಳು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಾನಸಿಕ ಕಾಯಿಲೆಯ ಹಣೆಪಟ್ಟಿ, ನಿಗೂಢ ಚಿಕಿತ್ಸೆ
ತ್ವಿಷಾ ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಮತ್ತು ಅವರಿಗೆ ‘ಬೈಪೋಲಾರ್ ಡಿಸಾರ್ಡರ್’ (Bipolar Disorder) ಇತ್ತು ಎಂದು ಬಿಂಬಿಸಲು ಸಮರ್ಥ್ ತನಿಖೆಯುದ್ದಕ್ಕೂ ಪ್ರಯತ್ನಿಸಿದ್ದಾನೆ. ಆಕೆಯ ನಡವಳಿಕೆಯಲ್ಲಿ ದಿಢೀರ್ ಬದಲಾವಣೆಗಳಾಗುತ್ತಿದ್ದರಿಂದ ವೈದ್ಯರ ಬಳಿ ಕರೆದೊಯ್ದಾಗ ‘ಅಡ್ಜಸ್ಟ್ಮೆಂಟ್ ಡಿಸಾರ್ಡರ್’ ಇರುವುದು ಪತ್ತೆಯಾಗಿತ್ತು. ಆಕೆಯ ಒತ್ತಡ ಕಡಿಮೆ ಮಾಡಲು ವೈದ್ಯರ ಸಲಹೆಯ ಮೇರೆಗೆ ನಿದ್ದೆ ಮಾತ್ರೆಗಳನ್ನು ನೀಡಲಾಗುತ್ತಿತ್ತು ಎಂದು ಸಮರ್ಥ್ ಸಮರ್ಥಿಸಿಕೊಂಡಿದ್ದಾನೆ. ಆದರೆ, ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಇಷ್ಟೊಂದು ಸ್ಟ್ರಾಂಗ್ ಮಾತ್ರೆಗಳನ್ನು ನೀಡಲು ಕಾರಣವೇನು? ಈ ಚಿಕಿತ್ಸೆಯ ಬಗ್ಗೆ ತ್ವಿಷಾ ಪೋಷಕರಿಗೆ ಮಾಹಿತಿ ನೀಡಲಾಗಿತ್ತೇ? ಮತ್ತು ಇದಕ್ಕೆ ತ್ವಿಷಾ ಅವರ ಒಪ್ಪಿಗೆ ಇತ್ತೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸಿಬಿಐ ಈಗ ಉತ್ತರ ಹುಡುಕುತ್ತಿದೆ. ಮಾನಸಿಕ ಆರೋಗ್ಯವನ್ನೇ ದಾಳವಾಗಿ ಬಳಸಿ ತ್ವಿಷಾರನ್ನು ಸಮಾಜದಿಂದ ಒಂಟಿಯಾಗಿಸುವ ಸಂಚು ನಡೆದಿತ್ತೇ ಎಂಬ ಆಯಾಮದಲ್ಲೂ ತನಿಖೆ ಸಾಗುತ್ತಿದೆ.
ಡಿಲೀಟ್ ಆದ ಚಾಟ್ಗಳು
ಪ್ರಕರಣಕ್ಕೆ ಮತ್ತೊಂದು ಪ್ರಮುಖ ತಿರುವು ಎಂದರೆ, ಸಮರ್ಥ್ ತನ್ನ ಮೊಬೈಲ್ ಫೋನ್ನಿಂದ ತ್ವಿಷಾ ಹಾಗೂ ಆಕೆಯ ಕುಟುಂಬಸ್ಥರೊಂದಿಗೆ ನಡೆಸಿದ್ದ ಎಲ್ಲಾ ವಾಟ್ಸಾಪ್ ಚಾಟ್ಗಳನ್ನು ಡಿಲೀಟ್ ಮಾಡಿದ್ದಾನೆ. ತಾಂತ್ರಿಕ ತಂಡವು ಈಗ ಈ ಸಂದೇಶಗಳನ್ನು ಮರುಪಡೆಯಲು (Data Recovery) ಕಸರತ್ತು ನಡೆಸುತ್ತಿದೆ. ಉದ್ಯೋಗ ತೊರೆಯುವಂತೆ ತ್ವಿಷಾಗೆ ಒತ್ತಡ ಹೇರಲಾಗಿತ್ತು. ಆಕೆಗೆ ಆನ್ಲೈನ್ನಲ್ಲಿ ಕೆಲಸ ಮಾಡಲು ಸಹ ಬಿಡುತ್ತಿರಲಿಲ್ಲ ಎಂಬ ಆರೋಪಕ್ಕೆ ಈ ಚಾಟ್ಗಳು ಪ್ರಮುಖ ಸಾಕ್ಷಿಯಾಗಲಿವೆ.
ಘಟನೆ ನಡೆದ ದಿನ ಇಬ್ಬರೂ ಒಟ್ಟಿಗೆ ಜಿಮ್ಗೆ ಹೋಗಿ, ಊಟ ಮುಗಿಸಿ, ವಾಕಿಂಗ್ ಹೋಗಿದ್ದಾಗಿ ಮತ್ತು ಎಲ್ಲವೂ ಸಹಜವಾಗಿತ್ತೆಂದು ಸಮರ್ಥ್ ಹೇಳುತ್ತಿದ್ದಾನೆ. ಆದರೆ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕಾಲ್ ರೆಕಾರ್ಡ್ಗಳು ಈ ವಾದವನ್ನು ಪುಷ್ಟೀಕರಿಸುತ್ತಿಲ್ಲ. ಇನ್ನು ನಿವೃತ್ತ ನ್ಯಾಯಾಧೀಶೆಯಾಗಿರುವ ಅತ್ತೆ ಗಿರಿಬಾಲಾ ಸಿಂಗ್ ಅವರು ಕೇವಲ ಕೌಟುಂಬಿಕ ಕಲಹಗಳನ್ನು ಬಗೆಹರಿಸುತ್ತಿದ್ದರು ಎಂದು ಸಮರ್ಥ್ ಹೇಳಿದ್ದರೂ, ಪ್ರತಿ ಬಾರಿ ಜಗಳವಾದಾಗಲೂ ಅತ್ತೆ ಕೇವಲ ಮಗನ ಪರವಾಗಿಯೇ ನಿಂತು ತ್ವಿಷಾರನ್ನು ಹತ್ತಿಕ್ಕುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಒಟ್ಟಿನಲ್ಲಿ, ಪತಿಯು ಹೆಣೆದಿರುವ ಈ ಎಲ್ಲಾ ಹೇಳಿಕೆಗಳ ಜಾಲವನ್ನು ಭೇದಿಸಲು ಸಿಬಿಐ ಈಗ ಸಿಸಿಟಿವಿ, ವೈದ್ಯಕೀಯ ವರದಿ ಮತ್ತು ಡಿಜಿಟಲ್ ಹೆಜ್ಜೆಗುರುತುಗಳ ತಾಂತ್ರಿಕ ವಿಶ್ಲೇಷಣೆಗೆ ಮುಂದಾಗಿದೆ.
ಇದನ್ನೂ ಓದಿ : 2 ಗುಂಪುಗಳ ನಡುವೆ ಫೈಟ್ – ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ!



















