ಅಮರಾವತಿ : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಮಾರ್ಮಿಕವಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಸಾರ್ವಜನಿಕರ ಮುಂದಿಟ್ಟಿದ್ದಾರೆ.
ನೆರೆರಾಜ್ಯ ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಗಳಿಸಿರುವುದನ್ನು ಪ್ರಸ್ತಾಪಿಸಿದ ಅವರು, “ವಿಜಯ್ ಅವರನ್ನು ನೋಡಿದರೆ ನನಗೆ ಸ್ವಲ್ಪ ಅಸೂಯೆಯಾಗುತ್ತದೆ” ಎಂದು ಹಾಸ್ಯದ ಧಾಟಿಯಲ್ಲೇ ಸತ್ಯ ಬಿಚ್ಚಿಟ್ಟಿದ್ದಾರೆ.
ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್, ತಮಿಳುನಾಡು ರಾಜಕಾರಣವನ್ನು ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ ಇತರರಿಗೆ ರಾಜಕೀಯ ಎಷ್ಟು ಸುಲಭ ಅನಿಸುತ್ತದೆ ಎಂದು ನುಡಿದರು. “ಅಲ್ಲಿ ಕಟೌಟ್ಗಳು ಮತ್ತು ಹೊಲೊಗ್ರಾಮ್ಗಳನ್ನು ಬಳಸಿಕೊಂಡು ಎಷ್ಟು ಆರಾಮವಾಗಿ, ಸಲೀಸಾಗಿ ಗೆದ್ದುಬಿಟ್ಟರು. ಅದನ್ನು ನೋಡಿ ನನಗೆ ಅಸೂಯೆಯಾಯಿತು” ಎಂದು ನಗುತ್ತಲೇ ಹೇಳಿದರು. ಆದರೆ ತಕ್ಷಣವೇ ಗಂಭೀರ ಮುಖಭಾವ ತಳೆದ ಅವರು, “ಆದರೆ ನಾನು ಮಾತ್ರ ಕಳೆದ 15 ವರ್ಷಗಳಿಂದ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದೇನೆ” ಎಂದು ತಮ್ಮ ಸುದೀರ್ಘ ಹೋರಾಟದ ದಿನಗಳನ್ನು ಸ್ಮರಿಸಿಕೊಂಡರು.
ಪಕ್ಷ ಕಟ್ಟುವುದು, ಸಮಾಜ ಬದಲಾವಣೆ ಸುಲಭವಲ್ಲ
ರಾಜಕೀಯ ಪಕ್ಷವೊಂದನ್ನು ಮುನ್ನಡೆಸುವುದು ಎಂದರೆ ಲಕ್ಷಾಂತರ ಜನರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದು ಎಂದರ್ಥ. ಇದು ಅತ್ಯಂತ ಸವಾಲಿನ ಕೆಲಸ ಎಂದು ಪ್ರತಿಪಾದಿಸಿದ ಪವನ್ ಕಲ್ಯಾಣ್, “ನಮ್ಮ ಸ್ವಂತ ಕುಟುಂಬದ ಸದಸ್ಯರನ್ನೇ ಒಂದು ವಿಷಯದ ಮೇಲೆ ಒಪ್ಪಿಸಲು ನಮಗೆ ಸಾಧ್ಯವಾಗುವುದಿಲ್ಲ. ಅಂತಹದ್ದರಲ್ಲಿ ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದರ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಹೊರಡುವುದು ಅತ್ಯಂತ ದೊಡ್ಡ ರಿಸ್ಕ್” ಎಂದು ರಾಜಕೀಯದ ಹಿಂದಿರುವ ವಾಸ್ತವವನ್ನು ತೆರೆದಿಟ್ಟರು.
ಇದೇ ವೇಳೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ರಾಜಕೀಯ ಪರಿಸ್ಥಿತಿಗಳನ್ನು ನೇರವಾಗಿ ಹೋಲಿಕೆ ಮಾಡಲು ಆಗದು ಎಂದೂ ಹೇಳಿದ ಅವರು, ಆಂಧ್ರದ ರಾಜಕೀಯ ಲೆಕ್ಕಾಚಾರ ಮತ್ತು ಸನ್ನಿವೇಶಗಳೇ ಬೇರೆ ಎಂದೂ ಹೇಳಿದರು.
ಚಿತ್ರರಂಗದಿಂದ ರಾಜಕೀಯಕ್ಕೆ ಪ್ರವೇಶಿಸಿದ ನಟ ವಿಜಯ್ ಅವರ ಟಿವಿಕೆ ಪಕ್ಷ ಅಸ್ತಿತ್ವಕ್ಕೆ ಬಂದಿದ್ದೇ 2024ರಲ್ಲಿ. ಆದರೆ ಕೇವಲ ಎರಡೇ ವರ್ಷಗಳಲ್ಲಿ, ಅಂದರೆ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರವನ್ನೂ ರಚಿಸಿದೆ. ದಶಕಗಳ ಕಾಲ ತಮಿಳುನಾಡನ್ನು ಆಳಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪ್ರಭಾವವನ್ನು ಮೆಟ್ಟಿ ನಿಂತು ವಿಜಯ್ ಮುಖ್ಯಮಂತ್ರಿಯಾಗಿದ್ದಾರೆ.
ಮತ್ತೊಂದೆಡೆ, 2014ರಲ್ಲಿ ಜನಸೇನಾ ಪಕ್ಷ ಸ್ಥಾಪಿಸಿದ್ದ ಪವನ್ ಕಲ್ಯಾಣ್ ಅವರ ಹಾದಿ ಸುಲಭದ್ದಾಗಿರಲಿಲ್ಲ. 2019ರ ಚುನಾವಣೆಯಲ್ಲಿ ಅವರ ಪಕ್ಷ ಕೇವಲ ಒಂದು ಸ್ಥಾನ ಗೆದ್ದಿತ್ತಲ್ಲದೆ, ಪವನ್ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದರು. ಆಗ ಪಕ್ಷದ ಅಸ್ತಿತ್ವದ ಬಗ್ಗೆಯೇ ಪ್ರಶ್ನೆಗಳು ಎದ್ದಿದ್ದವು. ಆದರೆ ಧೃತಿಗೆಡದ ‘ಪವರ್ ಸ್ಟಾರ್’, ಸಂಘಟನೆಯನ್ನು ಬಲಪಡಿಸಿ ಟಿಡಿಪಿ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು. ತದನಂತರ 2024ರ ಆಂಧ್ರಪ್ರದೇಶ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದ್ದ ಎಲ್ಲಾ 21 ಕ್ಷೇತ್ರಗಳಲ್ಲೂ ಗೆದ್ದು ಶೇ.100ರಷ್ಟು ಯಶಸ್ಸು ಸಾಧಿಸುವ ಮೂಲಕ ಆಂಧ್ರ ರಾಜಕಾರಣದ ಕಿಂಗ್ ಮೇಕರ್ ಆಗಿ ಹೊರಹೊಮ್ಮಿ, ಪ್ರಸ್ತುತ ಉಪಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮಲಬಾರ್ ಟ್ರೀ ಟೋಡ್ ಹಾಗೂ ತುಡುವೆ ಜೇನಿಗೆ ಶೀಘ್ರದಲ್ಲೇ ರಾಜ್ಯಮಟ್ಟದ ಸ್ಥಾನಮಾನ!



















