ಶ್ರೀನಗರ : ಜಮ್ಮು-ಕಾಶ್ಮೀರದ ಉಧಮ್ಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಬೃಹತ್ ಶೋಧ ಕಾರ್ಯಾಚರಣೆ ವೇಳೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇದಾದ ಬಳಿಕವೂ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಇಡೀ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬುಧವಾರ ಸಾಯಂಕಾಲ ಉಧಮ್ಪುರ ಜಿಲ್ಲೆಯ ಮಜಾಲ್ತಾ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಕಂಡುಬಂದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಭಾರತೀಯ ಸೇನೆಯ ಸ್ಪೆಷಲ್ ಪ್ಯಾರಾ ಕಮಾಂಡೋಗಳು ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ತಕ್ಷಣವೇ ಪ್ರತ್ಯುತ್ತರ ನೀಡಿದವು.
ಉಗ್ರರ ಮಟ್ಟಹಾಕಿದ ಜಂಟಿ ಪಡೆ
ಎನ್ಕೌಂಟರ್ ತೀವ್ರಗೊಳ್ಳುತ್ತಿದ್ದಂತೆ ಭಾರತೀಯ ಸೇನೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮತ್ತು ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡದ (SOG) ಹೆಚ್ಚುವರಿ ತುಕಡಿಗಳು ಸ್ಥಳಕ್ಕೆ ಧಾವಿಸಿದವು. ಜಂಟಿ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಹತರಾದ ಉಗ್ರರ ಗುರುತನ್ನು ಪತ್ತೆ ಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ.
ಪೀರ್ ಪಂಜಾಲ್ ಪ್ರದೇಶದಲ್ಲಿ ಕಣ್ಗಾವಲು
ಇತ್ತೀಚೆಗೆ ರಾಜೌರಿಯಲ್ಲಿ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಗೆ ಸಹಾಯ ಮಾಡುತ್ತಿದ್ದ ಜಾಲವನ್ನು ಭೇದಿಸಿ, ಸೆಪ್ಟೆಂಬರ್ 15 ರಂದು ಮೂವರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಪೀರ್ ಪಂಜಾಲ್ ವಲಯದಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿತ್ತು. ಪ್ರಸ್ತುತ ಉಧಮ್ಪುರದಲ್ಲಿ ಉಳಿದ ಉಗ್ರರಿಗಾಗಿ ಡ್ರೋನ್ ಹಾಗೂ ವಿಮಾನಗಳ ಮೂಲಕ ವೈಮಾನಿಕ ಕಣ್ಗಾವಲು ಇಡಲಾಗಿದ್ದು, ಶ್ವಾನ ದಳಗಳ ನೆರವಿನಿಂದ ಶೋಧ ತೀವ್ರಗೊಳಿಸಲಾಗಿದೆ.
ಉಧಮ್ಪುರ, ರಿಯಾಸಿ, ರಾಂಬನ್, ಕಥುವಾ, ಪೂಂಚ್ ಮತ್ತು ರಾಜೌರಿ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಪಾಕಿಸ್ತಾನಿ ಉಗ್ರರ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳುಗಳಿಂದ ಭದ್ರತಾ ಪಡೆಗಳು ಸತತ ದಾಳಿಗಳನ್ನು ನಡೆಸುತ್ತಿವೆ. ಈ ನಿರಂತರ ಕಾರ್ಯಾಚರಣೆಗಳಿಂದಾಗಿ ಉಗ್ರರಿಗೆ ಒಂದೆಡೆ ನೆಲೆಯೂರಿ ಭಾರಿ ದಾಳಿ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ನಿರಂತರವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳ ಬದಲಾಯಿಸಬೇಕಾಗಿದೆ.
ಇದನ್ನೂ ಓದಿ : IPL 2027 Auction : ಭಾರತಕ್ಕೆ ಮರಳಲಿದೆ ಆಟಗಾರರ ಹರಾಜು.. ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮದ ಭವಿಷ್ಯವೂ ಪರಿಶೀಲನೆ!



















