ಬೆಂಗಳೂರು : ಶಾಂತಿನಗರದಲ್ಲಿ ಯುವಕನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ತನಿಖೆ ವೇಳೆ ಇಬ್ಬರ ಲವ್ ಕಹಾನಿ ಬಯಲಾಗಿದೆ. ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ್ದು, ಹಲ್ಲೆ ಹಿಂದೆ ಪ್ರೇಮ ವೈಮನಸ್ಸೇ ಕಾರಣ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಹಿಂದೆ ಅರ್ಫಾನ್ ಎಂಬಾತನನ್ನು ಯುವತಿಯೊಬ್ಬಳು ಪ್ರೀತಿಸುತ್ತಿದ್ದಳು. ಬಳಿಕ ಇಬ್ಬರ ಮಧ್ಯೆ ಲವ್ ಬ್ರೇಕಪ್ ಆಗಿದ್ದು, ನಂತರ ಯುವತಿ ಮಂಜು ಎಂಬಾತನ ಜೊತೆ ಲವ್ವಿ ಡವ್ವಿಯಲ್ಲಿ ತೊಡಗಿದ್ದಳು. ಆದರೆ ಮಂಜುಗೆ ಗೊತ್ತಾಗದಂತೆ ಯುವತಿ ಮತ್ತೆ ಹಳೆಯ ಪ್ರಿಯಕರ ಅರ್ಫಾನ್ ಜೊತೆ ಸಂಪರ್ಕದಲ್ಲಿದ್ದು, ಇಬ್ಬರೂ ಸುತ್ತಾಡುತ್ತಿದ್ದರು ಎನ್ನಲಾಗಿದೆ.
ಮೇ 22ರ ಬೆಳಗಿನ ಜಾವ ಶಾಂತಿನಗರ ಬಳಿ ಕಾರಿನಲ್ಲಿದ್ದ ಅರ್ಫಾನ್ ಮತ್ತು ಯುವತಿಯನ್ನು ನೋಡಿದ ಮಂಜು ಕೋಪಗೊಂಡಿದ್ದಾನೆ. ಬಳಿಕ ಗ್ಯಾಂಗ್ ಕಟ್ಟಿಕೊಂಡು ಸ್ಥಳಕ್ಕೆ ಬಂದ ಮಂಜು ಮತ್ತು ಆತನ ಸಹಚರರು ಅರ್ಫಾನ್ ಮೇಲೆ ಹಲ್ಲೆ ನಡೆಸಿದ್ದಾರೆ. ಏಳು ಮಂದಿ ಗ್ಯಾಂಗ್ ಸೇರಿ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಘಟನೆ ಸಂಬಂಧ ಪೊಲೀಸರು ಸುಮೋಟೊ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಹಲ್ಲೆಗೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಈ ಘಟನೆ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರೇಮ ವೈಮನಸ್ಸಿನಿಂದಲೇ ಹಲ್ಲೆ ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಭೀಕರ ಅಪಘಾತ ; ನವ ವಿವಾಹಿತ ಸೇರಿ ಇಬ್ಬರು ದುರ್ಮರಣ



















