ಬೆಂಗಳೂರು : 9 ಡ್ರೀಮ್ಸ್ ಸಂಸ್ಥೆ ಆಯೋಜಿಸುತ್ತಿರುವ ‘ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಲೀಗ್‘ ಟೂರ್ನಿಯ ಟ್ರೋಫಿ ಹಾಗೂ ಜರ್ಸಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟಪೂರ್ವ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ವಿ. ಪ್ರಭಾಕರ್, ಮಾಧ್ಯಮ ಮಿತ್ರರು ಸದಾ ಕೆಲಸದ ಒತ್ತಡದಲ್ಲಿರುತ್ತಾರೆ. ಕ್ರಿಕೆಟ್ ಆಟದ ಮೂಲಕ ಅವರ ಒತ್ತಡವನ್ನು ನಿವಾರಣೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ. ಕ್ರಿಕೆಟ್ ಆಟದ ನೆಪದಲ್ಲಿ ಎಲ್ಲರೂ ಒಂದಾಗಿ ಕಲೆತು ಬೆರೆಯಬೇಕು ಎಂಬುದು ಟೂರ್ನಿಯ ಉದ್ದೇಶ. ಸೋಲು-ಗೆಲುವು ಸಹಜವಾಗಿದ್ದು, ಆಟದ ಸ್ಪೂರ್ತಿ ಮುಖ್ಯ ಎಂದು ಹೇಳಿದರು.

ನಂತರ ಮಾತನಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ, ಈ ಟೂರ್ನಿಯ ಪರಿಕಲ್ಪನೆ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಹುಟ್ಟಿಕೊಂಡಿದ್ದು, ಅಲ್ಲಿ ಚಿಗುರಿದ ಕನಸನ್ನು ಸಾಕಾರಗೊಳಿಸಿದವರು ಸಚಿವ ಜಮೀರ್ ಅಹ್ಮದ್ ಸಾಹೇಬ್ ಎಂದು ಹೇಳಿದರು. ಟೂರ್ನಿ ಬಗ್ಗೆ ಮಾತನಾಡಿದಾಗಲೇ ಆಯೋಜನೆ ಮಾಡಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಸಚಿವರು ಹೇಳಿದ್ದರು. ಈ ಹಿಂದೆ ನೈನ್ ಡ್ರೀಮ್ಸ್ ತಂಡ ಆಯೋಜಿಸಿದ್ದ ಬ್ಯಾಡ್ಮಿಂಟನ್ ಟೂರ್ನಿ ಕ್ರೀಡಾ ಜಾತ್ರೆಯ ವಾತಾವರಣ ಸೃಷ್ಟಿಸಿತ್ತು. ಇದೀಗ ಬಿ ಝೆಡ್ ಕಪ್ನಲ್ಲೂ ಅಂತಹದ್ದೇ ವಾತಾವರಣ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಇದಕ್ಕೂ ಮುನ್ನ ನಡೆದ ಪತ್ರಕರ್ತ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 130 ಆಟಗಾರರು ಭಾಗವಹಿಸಿದ್ದರು. ಈ ಪೈಕಿ 84 ಆಟಗಾರರನ್ನು 12 ತಂಡಗಳ ಮಾಲೀಕರು ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಖರೀದಿ ಮಾಡಿದರು.
ಬಿ ಝೆಡ್ ಕಪ್ ಕ್ರಿಕೆಟ್ ಟೂರ್ನಿ ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನ ವೇಟರ್ನರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ. 9 ಡ್ರೀಮ್ಸ್ ಹಾಗೂ ಸಿಎಂ ಕಪ್ ಟೀಂ ಸಂಘಟಿಸುತ್ತಿರುವ ಈ ಟೂರ್ನಿಯಲ್ಲಿ ಮಾಧ್ಯಮ ಮಿತ್ರರು, ಕಲಾವಿದರು, ಪೊಲೀಸ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಆಪ್ತ ಸಹಾಯಕರು ಆಡಲಿದ್ದಾರೆ.
ಸಮಾರಂಭದಲ್ಲಿ 9 ಡ್ರೀಮ್ಸ್ ಸಂಸ್ಥೆಯ ಸಂಸ್ಥಾಪಕ ಮಂಜುನಾಥ್, ಹಿರಿಯ ಪತ್ರಕರ್ತರಾದ ಪೊನ್ನಪ್ಪ, ಜೋಸೆಫ್ ಹೂವರ್, ಚಲನಚಿತ್ರ ನಿರ್ಮಾಪಕ ಭಾ.ಮ. ಹರೀಶ್ ಸೇರಿದಂತೆ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.
ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು :
ವಿನಿಷಾ ವಾರಿಯರ್ಸ್, ಬಿಎಸ್ ಬುಲ್ಸ್, ಅರುಣ್–ವಿನಯ ಸ್ಟ್ರೈಕರ್ಸ್, ಅರವಿಂದ್ ಅವೆಂಜರ್ಸ್, ಡಿವೈನ್ ವಂಡರ್ಸ್ ವಾರಿಯರ್ಸ್, ಬಿ ಝೆಡ್ ವಾರಿಯರ್ಸ್, ಪ್ರೊ ವಿನ್ ಪ್ರೈಡ್ಸ್, ಪ್ರತಿಧ್ವನಿ ಚಾಲೆಂಜರ್ಸ್, ಟೀಮ್ ಅಪ್ಪು, ಟೀಮ್ ಪರ್ವಮ್, ದೇವು ಬ್ಯಾಟಲರ್ಸ್ ಹಾಗೂ ನಂದಿ ಬ್ಲಾಸ್ಟರ್ಸ್.
ಇದನ್ನೂ ಓದಿ : 33ನೇ ವಯಸ್ಸಿನಲ್ಲಿ ಭಾರತ ಟೆಸ್ಟ್ಗೆ ಪಾದಾರ್ಪಣೆ ಮಾಡಿದ ಸರಾಂಶ್ ಜೈನ್ ; ಕುಲದೀಪ್ಗೆ ವಿಶ್ರಾಂತಿ



















