ಬಿಷ್ಕೇಕ್ : ಕಿರ್ಗಿಸ್ತಾನ ರಾಜಧಾನಿ ಬಿಷ್ಕೇಕ್ನಲ್ಲಿ ನಡೆಯುತ್ತಿರುವ 26ನೇ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದು, ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಭಾರತದ ದಿಟ್ಟ ನಿಲುವನ್ನು ಪ್ರತಿಪಾದಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಸಾಲು ಸಾಲು ಜಾಗತಿಕ ನಾಯಕರ ಉಪಸ್ಥಿತಿಯಲ್ಲೇ ಖಡಕ್ಕಾಗಿ ಮಾತನಾಡಿದ ಮೋದಿ, ಭಯೋತ್ಪಾದನೆಯನ್ನು ಕೇವಲ ರಾಜಕೀಯ ಅಥವಾ ತಂತ್ರಜ್ಞಾನದ ಅಸ್ತ್ರವಾಗಿ ಬಳಸಿಕೊಳ್ಳುವುದನ್ನು ಯಾವುದೇ ದೇಶವೂ ಸಹಿಸಬಾರದು ಎಂದು ಎಚ್ಚರಿಸಿದ್ದಾರೆ.
ಎಸ್ಸಿಒ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯಂತಹ ಗಂಭೀರ ವಿಷಯದಲ್ಲಿ ದ್ವಿಮುಖ ನೀತಿಗೆ (Double Standards) ಅವಕಾಶವೇ ಇರಬಾರದು ಎಂದು ಖಡಕ್ ಆಗಿ ನುಡಿದರು. “ಭಯೋತ್ಪಾದಕರನ್ನು ತಮ್ಮ ದೇಶದ ನೀತಿಯ ಭಾಗವಾಗಿ ಬಳಸಿಕೊಳ್ಳುವ ಹಾಗೂ ಅವರಿಗೆ ಆಶ್ರಯ ನೀಡುವ ರಾಷ್ಟ್ರಗಳಿಗೆ ಜಗತ್ತು ಒಂದೇ ದನಿಯಲ್ಲಿ ಸ್ಪಷ್ಟ ಸಂದೇಶ ತಲುಪಿಸಬೇಕು. ಭಯೋತ್ಪಾದನೆಯು ಯಾರಿಗೂ ಸಹ ಆಯಕಟ್ಟಿನ ಆಸ್ತಿ ಆಗಲು ಸಾಧ್ಯವಿಲ್ಲ. ಭಯೋತ್ಪಾದಕ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವುದೇ ನಮ್ಮ ಆದ್ಯತೆಯಾಗಬೇಕು” ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಚಾಟಿ ಬೀಸಿದರು.
ಜಾಗತಿಕ ಭದ್ರತೆ, ಮಾದಕ ದ್ರವ್ಯ ತಡೆ
ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ಎದುರಾಗಿರುವ ಬಿಕ್ಕಟ್ಟುಗಳನ್ನು ಉಲ್ಲೇಖಿಸಿದ ಪ್ರಧಾನಿ, ಒಂದು ಪ್ರದೇಶದ ಸಂಘರ್ಷವು ಇಡೀ ಜಗತ್ತಿನ ಇಂಧನ ಭದ್ರತೆ, ಸಮುದ್ರ ವ್ಯಾಪಾರ ಹಾಗೂ ಪೂರೈಕೆ ಸರಪಳಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಯುವ ಸಮೂಹವನ್ನು ನಾಶಪಡಿಸುತ್ತಿರುವ ಮಾದಕ ದ್ರವ್ಯ ಕಳ್ಳಸಾಗಣೆಯು ಪ್ರಾದೇಶಿಕ ಭದ್ರತೆಗೆ ದೊಡ್ಡ ಬೆದರಿಕೆಯಾಗಿದ್ದು, ಇದನ್ನು ತಡೆಯಲು ಎಸ್ಸಿಒ ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ರಣರಂಗದಿಂದ ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ; ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ಜಾಗತಿಕ ಸಂಘರ್ಷಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಅಖಂಡತೆಯನ್ನು ಗೌರವಿಸಲಿ
ಎಸ್ಸಿಒ ಒಕ್ಕೂಟದ ಮೂಲ ಆಶಯವಾದ ಪ್ರಾದೇಶಿಕ ಸಂಪರ್ಕ ಹಾಗೂ ವ್ಯಾಪಾರ ವೃದ್ಧಿಗೆ ಭಾರತದ ಸಂಪೂರ್ಣ ಬೆಂಬಲವಿದೆ ಎಂದ ಪ್ರಧಾನಿ, ಯಾವುದೇ ಸಂಪರ್ಕ ಯೋಜನೆಯಾಗಲಿ ಅದು ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತೆಯನ್ನು ಗೌರವಿಸಬೇಕು ಎಂಬ ಉಲ್ಲೇಖ ಮಾಡಿದರು. ಬರೀ ರಸ್ತೆ ಮತ್ತು ರೈಲ್ವೆ ಸಂಪರ್ಕವಲ್ಲದೆ, ಡಿಜಿಟಲ್ ದಾಖಲೆಗಳು ಹಾಗೂ ಸುಂಕ ಪ್ರಕ್ರಿಯೆಗಳ ಸರಳೀಕರಣದ ಮೂಲಕ ಜನರ ನಡುವಿನ ಬಾಂಧವ್ಯವನ್ನು ಗಟ್ಟಿ ಮಾಡುವುದು ಮತ್ತು ಯುವಜನತೆಗೆ ಹಾಗೂ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದೇ ಎಸ್ಸಿಒದ ಮುಖ್ಯ ಗುರಿಯಾಗಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ಇದನ್ನೂ ಓದಿ : ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿ 4 ಹುದ್ದೆಗಳ ನೇಮಕಾತಿ : ಫ್ರೀಲಾನ್ಸರ್ಗಳಿಗೆ ಗುಡ್ ನ್ಯೂಸ್



















