ಕಠ್ಮಂಡು : ಕಳೆದ ವಾರ ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಿಮಪಾತ ಹಾಗೂ ದಿಢೀರ್ ಪ್ರವಾಹವು ನೇಪಾಳವನ್ನು ನರಕವಾಗಿಸಿದೆ. ಈ ನೈಸರ್ಗಿಕ ವಿಕೋಪದಲ್ಲಿ 960ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ಕಾಣೆಯಾಗಿದ್ದಾರೆ. ಆದರೆ, ಈ ವಿಕೋಪದ ನಡುವೆ ತಮ್ಮ ಮಾಲೀಕರನ್ನು ಕಳೆದುಕೊಂಡು, ಧ್ವಂಸಗೊಂಡ, ನೆಲಸಮವಾದ ಮನೆಗಳ ಶಿಥಿಲಾವಶೇಷಗಳ ಬಳಿಯೇ ಕಾಯುತ್ತಿರುವ ನಾಯಿಗಳ ಕರುಣಾಜನಕ ವೀಡಿಯೊಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿವೆ.
ನಾಶವಾದ ಮನೆಗಳ ಬಳಿ ಬಿಡದ ಕಾವಲು
ಢುಂಗೆ ಪ್ರದೇಶದಲ್ಲಿ ‘ಲಿಲ್ಲಿ’ ಎಂಬ ಸಾಕುನಾಯಿ ತನ್ನ ಮನೆಯಿದ್ದ ಜಾಗದಲ್ಲೇ ಮಾಲೀಕರ ಬರುವಿಕೆಗಾಗಿ ದಿನಗಟ್ಟಲೆ ಕಾಯುತ್ತಿರುವ ದೃಶ್ಯ ಹೃದಯವಿದ್ರಾವಕವಾಗಿದೆ. ಮನೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದರೂ, ತನ್ನ ಮಾಲೀಕ ಮರಳಿ ಬರುತ್ತಾನೆಂಬ ಭರವಸೆಯಿಂದ ಅದು ಆ ಸ್ಥಳದಿಂದ ಕದಲುತ್ತ್ತಿಲ್ಲ. ರಸುವಾ ಜಿಲ್ಲೆಯಲ್ಲಿ ಭೋಟೆ ಕೋಶಿ ನದಿಯ ಪ್ರವಾಹಕ್ಕೆ ಸಿಲುಕಿ ಮನೆ ನಾಶವಾಗಿದ್ದರೂ, ಮತ್ತೊಂದು ನಾಯಿ ತನ್ನ ಯಜಮಾನನನ್ನು ಕಳೆದುಕೊಂಡು ಅದೇ ಕುಸಿದುಬಿದ್ದ ಗೋಡೆಗಳ ಬಳಿ ಮೌನವಾಗಿ ಕುಳಿತಿರುವ ದೃಶ್ಯಗಳು ಪ್ರಕೃತಿಯ ವಿಕೋಪಕ್ಕೆ ಸಾಕ್ಷಿ ನುಡಿದಿದೆ.
ಕೆಸರಿನಲ್ಲಿ ಸಿಲುಕಿದ್ದ ಜೀವಗಳ ರಕ್ಷಣೆ, ಅಪರೂಪದ ಪುನರ್ಮಿಲನ
ಕೆಲವು ಪ್ರದೇಶಗಳಲ್ಲಿ ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿ ದಪ್ಪಗಿನ ಕೆಸರಿನಲ್ಲಿ ಸಿಲುಕಿಕೊಂಡಿದ್ದ ನಾಯಿಗಳನ್ನು ಸ್ಥಳೀಯ ಯುವಕರು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಇನ್ನು ತೀವ್ರ ನಿರಾಶೆಯ ನಡುವೆಯೂ ಒಂದು ಆಶಾದಾಯಕ ಘಟನೆ ವರದಿಯಾಗಿದ್ದು, ಪ್ರವಾಹದಲ್ಲಿ 3-4 ದಿನಗಳಿಂದ ಕಾಣೆಯಾಗಿದ್ದ ನಾಯಿಯೊಂದು ಕೊನೆಗೂ ತನ್ನ ಒಡತಿಯನ್ನು ಸೇರಿಕೊಂಡಿದೆ. ತನ್ನ ಪ್ರೀತಿಯ ನಾಯಿಯನ್ನು ಕಂಡ ಕ್ಷಣ ಆ ಮಹಿಳೆ ಅಪ್ಪಿ ಕಣ್ಣೀರಿಟ್ಟ ದೃಶ್ಯವು ಪ್ರವಾಹದ ಭೀಕರತೆಯ ನಡುವೆಯೂ ಮಾನವೀಯ ಸಂಬಂಧಗಳ ಆಳವನ್ನು ಬಿಂಬಿಸಿದೆ.
ಕುಕುರ್ ತಿಹಾರ್ ನಾಡಿನಲ್ಲಿ ಮೌನ ಕಣ್ಣೀರು
ನೇಪಾಳದಲ್ಲಿ ‘ಕುಕುರ್ ತಿಹಾರ್’ ಹಬ್ಬದ ಸಂದರ್ಭದಲ್ಲಿ ನಾಯಿಗಳಿಗೆ ಹೂವಿನ ಮಾಲೆ ಹಾಕಿ, ತಿಲಕವಿಟ್ಟು, ಪೂಜಿಸಿ ಅವುಗಳ ನಿಷ್ಠೆಯನ್ನು ಗೌರವಿಸುವ ಪದ್ಧತಿಯಿದೆ. ಅಂತಹ ಕೃತಜ್ಞತಾ ಭಾವ ಹೊಂದಿರುವ ನಾಡಿನಲ್ಲಿ, ಇಂದು ಪ್ರಕೃತಿ ವಿಕೋಪದಿಂದಾಗಿ ನಾಯಿಗಳು ತಮ್ಮನ್ನು ಪೊರೆದ ಯಜಮಾನರಿಗಾಗಿ ಹಸಿವು-ಬಾಯಾರಿಕೆ ಮರೆತು ಕಾಯುತ್ತಿರುವುದು ಪ್ರತಿಯೊಬ್ಬರ ಮನ ಮಿಡಿಯುವಂತೆ ಮಾಡಿದೆ. ಲಕ್ಷಾಂತರ ಜನರು ನಿರಾಶ್ರಿತರಾಗಿರುವ ಈ ಸಂಕಷ್ಟದ ಸಮಯದಲ್ಲಿ, ಈ ಮುಗ್ಧ ಜೀವಿಗಳ ಮೌನ ಕಾಯುವಿಕೆ ನೇಪಾಳದ ದುರಂತದ ತೀವ್ರತೆಯನ್ನು ಜಗತ್ತಿಗೆ ಸಾರುತ್ತಿದೆ.
ಇದನ್ನೂ ಓದಿ : ಅನಯಾಗೆ ಡೇನಿಯಲ್ ಬೆಂಬಲ ; ‘ವೈಯಕ್ತಿಕ ದಾಳಿ ಸಲ್ಲದು’ ಎಂದ ಮೊದಲ ಟ್ರಾನ್ಸ್ಜೆಂಡರ್ ಕ್ರಿಕೆಟಿಗ!



















