ಇಸ್ಲಾಮಾಬಾದ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬರೋಬ್ಬರಿ 125 ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ಹಿಂದೂ ದೇವಾಲಯವೊಂದನ್ನು ನೆಲಸಮಗೊಳಿಸಲಾಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ನರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿರುವ ಈ ದೇವಾಲಯದ ಜಾಗವನ್ನು ಪಕ್ಕದಲ್ಲೇ ಇರುವ ಮದರಸಾ ವಿಸ್ತರಣೆಗೆ ಬಳಸಿಕೊಳ್ಳಲು, ನಿಷೇಧಿತ ಉಗ್ರಗಾಮಿ ಸಂಘಟನೆ ‘ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್’ (ಟಿಎಲ್ಪಿ) ಆಗಸ್ಟ್ 21ರಂದು ಈ ಕೃತ್ಯ ಎಸಗಿದೆ ಎಂದು ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಸ್ಥಳೀಯ ಹಕ್ಕುಗಳ ಹೋರಾಟಗಾರರು ಗಂಭೀರ ಆರೋಪ ಮಾಡಿದ್ದಾರೆ.
ಸುಮಾರು 1,000 ಚದರ ಮೀಟರ್ ವಿಸ್ತೀರ್ಣದಲ್ಲಿದ್ದ ಈ ಪುರಾತನ ದೇವಾಲಯದ ಕೆಡವಲ್ಪಟ್ಟ ಕಟ್ಟಡದ ಇಟ್ಟಿಗೆಗಳು ಹಾಗೂ ಶಿಖರದಲ್ಲಿದ್ದ ಲೋಹದ ವಸ್ತುಗಳನ್ನು ಸ್ಥಳದಿಂದ ತೆರವುಗೊಳಿಸಿ ಕೊಂಡೊಯ್ಯಲಾಗಿದೆ. ದೇವಾಲಯದ ಜಾಗವನ್ನು ಈ ಹಿಂದೆ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಮದರಸಾಗೆ ಬಾಡಿಗೆಗೆ ನೀಡಿತ್ತಾದರೂ, ಬಾಡಿಗೆ ಪಾವತಿಸದ ಹಾಗೂ ನಿಗದಿತ ಉದ್ದೇಶಕ್ಕೆ ಬಳಸದ ಕಾರಣ ಆ ಗುತ್ತಿಗೆಯನ್ನು ರದ್ದುಗೊಳಿಸಿ ಒತ್ತುವರಿ ತೆರವುಗೊಳಿಸಲು ಆದೇಶಿಸಲಾಗಿತ್ತು. ಆದರೆ, ಸ್ಥಳೀಯ ಆಡಳಿತ ಈ ಆದೇಶವನ್ನು ಜಾರಿಗೆ ತರಲು ವಿಫಲವಾದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಅಲ್ಪಸಂಖ್ಯಾತ ನಾಯಕರು ದೂರಿದ್ದಾರೆ.
ಸರ್ಕಾರದ ಸ್ಪಷ್ಟನೆ
ಈ ಘಟನೆಯ ಕುರಿತು ಪಾಕಿಸ್ತಾನ ಸರ್ಕಾರ ಮತ್ತು ಸ್ಥಳೀಯ ಆಡಳಿತ ನೀಡುತ್ತಿರುವ ಹೇಳಿಕೆಗಳು ಗೊಂದಲಕ್ಕೆ ಕಾರಣವಾಗಿವೆ. ಇಟಿಪಿಬಿ ಹಿರಿಯ ಅಧಿಕಾರಿ ರಾಣಾ ಇಫ್ತಿಯಾರ್ ಅವರು ನೀಡಿದ ಸ್ಪಷ್ಟನೆಯಲ್ಲಿ, “ದೇವಾಲಯವು ಅತ್ಯಂತ ಹಳೆಯದಾಗಿದ್ದು, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತಾನಾಗಿಯೇ ಕುಸಿದು ಬಿದ್ದಿದೆಯೇ ಹೊರತು ಯಾರೂ ಧ್ವಂಸಗೊಳಿಸಿಲ್ಲ” ಎಂದು ಹೇಳಿದ್ದಾರೆ. ಆದರೆ, ಏಪ್ರಿಲ್ ತಿಂಗಳಲ್ಲೇ ಸ್ಥಳೀಯ ಪೊಲೀಸರಿಗೆ ಈ ದೇವಾಲಯದ ಸುರಕ್ಷತೆ ಹಾಗೂ ಹಾನಿಯಾಗುವ ಸಾಧ್ಯತೆಗಳ ಕುರಿತು ಮುನ್ಸೂಚನೆ ಇತ್ತು ಎಂಬ ವರದಿಗಳು ಸರ್ಕಾರದ ವಾದದ ಬಗ್ಗೆ ಅನುಮಾನ ಮೂಡಿಸಿದೆ.
ಪುನರ್ನಿರ್ಮಾಣಕ್ಕೆ ಆಗ್ರಹ
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪಾಕಿಸ್ತಾನ ಮಸೀಹಾ ಮಿಲತ್ ಪಾರ್ಟಿ (ಪಿಎಂಎಂಪಿ) ಮತ್ತು ಸ್ಥಳೀಯ ಹಿಂದೂ ಸಮುದಾಯದ ನಾಯಕರು, ಘಟನೆಯ ಕುರಿತು ತಕ್ಷಣವೇ ಸಮಗ್ರ ತನಿಖೆ ನಡೆಸಬೇಕೆಂದು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಷರೀಫ್ ಅವರ ಬಳಿ ಮನವಿ ಮಾಡಿದ್ದಾರೆ. ಧ್ವಂಸಗೊಂಡ ದೇವಾಲಯವನ್ನು ಅದರ ಮೂಲ ಸ್ವರೂಪದಲ್ಲೇ ಪುನರ್ನಿರ್ಮಿಸಬೇಕು, ಅಕ್ರಮ ಒತ್ತುವರಿದಾರರನ್ನು ತಕ್ಷಣವೇ ತೆರವುಗೊಳಿಸಬೇಕು ಹಾಗೂ ಪಂಜಾಬ್ನಲ್ಲಿರುವ ಅಲ್ಪಸಂಖ್ಯಾತರ ಧಾರ್ಮಿಕ ಕ್ಷೇತ್ರಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : IPL 2027ಕ್ಕೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ರದ್ದು? ; 10 ಫ್ರಾಂಚೈಸಿಗಳ ಅಭಿಪ್ರಾಯ ಕೇಳಿದ BCCI



















