ಕಠ್ಮಂಡು : ನೇಪಾಳದಲ್ಲಿ ಕಳೆದ ಬುಧವಾರ ಸಂಭವಿಸಿದ ಭೀಕರ ಜಲಪ್ರಳಯದ ಬಳಿಕ ಪತ್ತೆಯಾಗಿರುವ ನೂರಾರು ಅನಾಥ ಹಾಗೂ ಗುರುತು ಸಿಗದ ಮೃತದೇಹಗಳನ್ನು ಹೂಳಲು ನೇಪಾಳ ಸರ್ಕಾರ ನಿರ್ಧರಿಸಿದೆ. ಶವಗಾರಗಳಲ್ಲಿ ಜಾಗದ ಅಭಾವ ಹಾಗೂ ಮೃತದೇಹಗಳು ಕೊಳೆಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಮಂಜುಗಡ್ಡೆ ಕುಸಿತ ಹಾಗೂ ದಿಢೀರ್ ಪ್ರವಾಹದ ಬಳಿಕ ಕನಿಷ್ಠ 700ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಭಾರತದ ಗಡಿಗೆ ಹೊಂದಿಕೊಂಡಿರುವ ದಕ್ಷಿಣದ ಚಿತ್ವಾನ್ ಜಿಲ್ಲೆಯೊಂದರಲ್ಲೇ ಗರಿಷ್ಠ 233 ಮೃತದೇಹಗಳು ಪತ್ತೆಯಾಗಿವೆ. ಆಸ್ಪತ್ರೆಗಳಲ್ಲಿ ಮೃತದೇಹಗಳನ್ನು ಸಂರಕ್ಷಿಸಿಡಲು ಸ್ಥಳಾವಕಾಶವಿಲ್ಲದೆ, ಜಿಲ್ಲಾಡಳಿತವು ತಾತ್ಕಾಲಿಕವಾಗಿ ಒಂದು ಕಟ್ಟಡವನ್ನು ಶೀತಲೀಕರಣ ಕೇಂದ್ರವಾಗಿ ಬಳಸಿಕೊಂಡಿತ್ತು. ಆದರೆ, ದಿನದಿಂದ ದಿನಕ್ಕೆ ಶವಗಳ ಸಂಖ್ಯೆ ಹೆಚ್ಚಾದ ಕಾರಣ ಅನಿವಾರ್ಯವಾಗಿ ಶವಸಂಸ್ಕಾರಕ್ಕೆ ಮುಂದಾಗಬೇಕಾಗಿದೆ.
ಡಿಎನ್ಎ ಮಾದರಿ ಸಂಗ್ರಹ
ಮೃತದೇಹಗಳನ್ನು ಹೂಳುವ ಮುನ್ನ ಪ್ರತಿಯೊಂದು ದೇಹದಿಂದ ಡಿಎನ್ಎ (DNA) ಮಾದರಿಗಳನ್ನು ಸಂಗ್ರಹಿಸಿ ಸಂರಕ್ಷಿಸಲಾಗುತ್ತಿದೆ. ಭವಿಷ್ಯದಲ್ಲಿ ಮೃತರ ಸಂಬಂಧಿಕರು ಪತ್ತೆಯಾದರೆ ಗುರುತಿಸಲು ಅನುಕೂಲವಾಗುವಂತೆ ಪ್ರತಿಯೊಂದು ಮೃತದೇಹಕ್ಕೂ ಪ್ರತ್ಯೇಕವಾದ ವಿಶಿಷ್ಟ ಗುರುತಿನ ಅಥವಾ ಉಲ್ಲೇಖ ಸಂಖ್ಯೆಯನ್ನು (Unique Identification Number) ನೀಡಲಾಗುತ್ತಿದೆ. ಪ್ರತಿಯೊಂದು ಶವವನ್ನು ಚೀಲದಲ್ಲಿ ಪ್ಯಾಕ್ ಮಾಡಿ, ಅದರ ಮೇಲೆ ಉಕ್ಕಿನ ಪ್ಲೇಟ್ನಲ್ಲಿ ಗುರುತಿನ ಸಂಖ್ಯೆಯನ್ನು ನಮೂದಿಸಲಾಗುತ್ತಿದೆ. ಭರತ್ಪುರದ ದೇವ್ಘಾಟ್ನ ತೆರೆದ ಪ್ರದೇಶದಲ್ಲಿ ಶವಗಳನ್ನು ಹೂಳಲಾಗುತ್ತಿದ್ದು, ಪ್ರತಿ ಸಮಾಧಿಯ ಮೇಲೆಯೂ ಗುರುತಿನ ಸಂಖ್ಯೆ ಹೊಂದಿರುವ ಸಿಮೆಂಟ್ ಫಲಕವನ್ನು ನಿರ್ಮಿಸಲಾಗುತ್ತದೆ.
1.5 ಮೀಟರ್ ಆಳದ ಸಮಾಧಿ ಮತ್ತು ಜಿಯೋ-ಟ್ಯಾಗಿಂಗ್
ಮುಂದಿನ ದಿನಗಳಲ್ಲಿ ಸುಲಭವಾಗಿ ಶವಗಳನ್ನು ಹೊರತೆಗೆಯಲು ಅನುಕೂಲವಾಗುವಂತೆ 1.5 ಮೀಟರ್ ಆಳದ ಸಮಾಧಿ ಗುಂಡಿಗಳನ್ನು ತೋಡಲಾಗುತ್ತಿದೆ. ಒಂದು ಶವದ ಗುಂಡಿಯಿಂದ ಮತ್ತೊಂದಕ್ಕೆ 40 ಸೆಂಟಿಮೀಟರ್ ಅಂತರ ಕಾಯ್ದುಕೊಳ್ಳಲಾಗುತ್ತಿದ್ದು, ಇದರಿಂದ ನಿರ್ದಿಷ್ಟ ಮೃತದೇಹವನ್ನಷ್ಟೇ ಹೊರತೆಗೆಯಲು ಸಾಧ್ಯವಾಗುತ್ತದೆ. ಇಡೀ ಪ್ರಕ್ರಿಯೆಯನ್ನು ವಿಡಿಯೋ ಹಾಗೂ ಛಾಯಾಚಿತ್ರಗಳ ಮೂಲಕ ದಾಖಲಿಸಲಾಗುತ್ತಿದ್ದು, ಸಮಾಧಿ ಸ್ಥಳಗಳ ಜಿಯೋ-ಟ್ಯಾಗಿಂಗ್ (Geo-tagging) ಕೂಡ ಮಾಡಲಾಗುತ್ತಿದೆ.
ಬಾಂಧವರಿಗಾಗಿ ಶೋಧ ಕಾಪಾಡಿಕೊಳ್ಳಲಾದ ಡಿಎನ್ಎ ಮಾದರಿಗಳ ಮೂಲಕ ಕುಟುಂಬಸ್ಥರು ತಮ್ಮವರನ್ನು ಗುರುತಿಸುವ ಪ್ರಕ್ರಿಯೆಯನ್ನು ನೇಪಾಳ ಆರೋಗ್ಯ ಇಲಾಖೆ ಹೀಗೆ ರೂಪಿಸಿದೆ:
- ಪ್ರವಾಹದಲ್ಲಿ ಕಾಣೆಯಾದವರ ಸಂಬಂಧಿಕರು ನೇಪಾಳದ ನಿಯೋಜಿತ ಆಸ್ಪತ್ರೆಗಳಿಗೆ ತೆರಳಿ ತಮ್ಮ ಡಿಎನ್ಎ ಮಾದರಿಗಳನ್ನು ನೀಡಬೇಕಾಗುತ್ತದೆ.
- ಪರೀಕ್ಷಾ ವರದಿಯಲ್ಲಿ ಡಿಎನ್ಎ ಸಾಮ್ಯತೆ (Match) ಕಂಡುಬಂದಲ್ಲಿ, ಆರೋಗ್ಯ ಇಲಾಖೆಯು ಮೃತದೇಹಕ್ಕೆ ನೀಡಲಾದ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಖಚಿತಪಡಿಸುತ್ತದೆ.
- ಆ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿ, ಶವವನ್ನು ಹೂಳಲಾದ ನಿಖರ ಜಿಯೋ-ಸ್ಥಳವನ್ನು ಗುರುತಿಸುತ್ತಾರೆ.
- ಬಳಿಕ ಕಾನೂನುಬದ್ಧವಾಗಿ ಸಮಾಧಿಯಿಂದ ಶವವನ್ನು ಹೊರತೆಗೆದು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ.
ಇದಲ್ಲದೆ, ಗುರುತು ಸಿಗದ ಮೃತದೇಹಗಳ ವಿವರಗಳನ್ನು ಪೊಲೀಸರು ಅಧಿಕೃತ ವೆಬ್ಸೈಟ್ನಲ್ಲಿಯೂ ಪ್ರಕಟಿಸಿದ್ದಾರೆ. ಪ್ರಸ್ತುತ ದೇಶದಲ್ಲಿ ನೂರಾರು ವಿದೇಶಿಗರು ಸೇರಿದಂತೆ 3000ಕ್ಕೂ ಹೆಚ್ಚು ಜನರು ಪ್ರವಾಹದ ಬಳಿಕ ಕಾಣೆಯಾಗಿದ್ದಾರೆ.
ಇದನ್ನೂ ಓದಿ : ನೇಪಾಳ ಜಲಪ್ರಳಯ : 3 ದಿನ ಕೆಸರಿನಡಿಯಲ್ಲಿ ಸಿಲುಕಿದ್ದ 6 ವರ್ಷದ ಬಾಲಕಿಯ ರಕ್ಷಣೆ!



















