ನವದೆಹಲಿ : ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅನುಭವಿಸಿದ ಆಘಾತಕಾರಿ ಸೋಲಿನ ಕಹಿಯ ನಡುವೆಯೇ, ಭಾರತ ತಂಡದ ನಾಯಕ ಶುಭಮನ್ ಗಿಲ್ ಮತ್ತು ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದಾರೆ. ಫಾರ್ಮ್ ಕಂಡುಕೊಳ್ಳಲು ಮತ್ತು ದೇಶೀಯ ಕ್ರಿಕೆಟ್ಗೆ ಬಲ ತುಂಬಲು ಈ ಇಬ್ಬರು ಸ್ಟಾರ್ ಆಟಗಾರರು ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಕ್ರಿಕ್ಬಜ್ ವರದಿಗಳ ಪ್ರಕಾರ, ಜನವರಿ 22ರಿಂದ ರಾಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಗಿಲ್ ನೇತೃತ್ವದ ಪಂಜಾಬ್ ಮತ್ತು ಜಡೇಜಾ ಪ್ರತಿನಿಧಿಸುವ ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಲಿವೆ. ಏಕದಿನ ಸರಣಿ ಮುಗಿಯುತ್ತಿದ್ದಂತೆಯೇ ಈ ಇಬ್ಬರು ಆಟಗಾರರು ರಾಜ್ಕೋಟ್ಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ಟಿ20 ವಿಶ್ವಕಪ್ ತಂಡದ ಭಾಗವಾಗಿಲ್ಲದ ಕಾರಣ, ಈ ಆಟಗಾರರು ತಮ್ಮ ರಾಜ್ಯ ತಂಡಗಳ ಪರ ಲೀಗ್ ಹಂತದ ಅಂತಿಮ ಪಂದ್ಯಗಳವರೆಗೆ ಲಭ್ಯವಿರಲಿದ್ದಾರೆ.
ಫಾರ್ಮ್ ಹುಡುಕಾಟದಲ್ಲಿ ‘ಸೌರಾಷ್ಟ್ರ ರವಿಂದ್ರ’
ರವೀಂದ್ರ ಜಡೇಜಾ ಅವರಿಗೆ ಈ ರಣಜಿ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸದ್ಯ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ಜಡೇಜಾ ಅವರ ಪ್ರದರ್ಶನ ಮಂಕಾಗಿತ್ತು. ಆಡಿದ ಮೂರು ಇನ್ನಿಂಗ್ಸ್ಗಳಲ್ಲಿ ಕೇವಲ 14.33ರ ಸರಾಸರಿಯಲ್ಲಿ 43 ರನ್ ಗಳಿಸಿದ್ದ ‘ಜಡ್ಡು’, ಬೌಲಿಂಗ್ನಲ್ಲಿ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗದೆ ವೈಫಲ್ಯ ಅನುಭವಿಸಿದ್ದರು. ಹೀಗಾಗಿ, ತವರು ಮೈದಾನದಲ್ಲಿ ಲಯಕ್ಕೆ ಮರಳಲು ಅವರು ಈ ಅವಕಾಶವನ್ನು ಬಳಸಿಕೊಳ್ಳಲಿದ್ದಾರೆ. ಈ ಋತುವಿನಲ್ಲಿ ಜಡೇಜಾ ಮಧ್ಯಪ್ರದೇಶದ ವಿರುದ್ಧ ಕೇವಲ ಒಂದು ಪಂದ್ಯವನ್ನು ಆಡಿದ್ದರು.
ರಣಜಿ ಅಂಗಳಕ್ಕೆ ಶುಭಮನ್ ಗಿಲ್ ವಾಪಸ್
ಮತ್ತೊಂದೆಡೆ, ಭಾರತ ತಂಡದ ನಾಯಕ ಶುಭಮನ್ ಗಿಲ್ ದೀರ್ಘಕಾಲದ ನಂತರ ಬಿಳಿ ಬಟ್ಟೆಯ ಕ್ರಿಕೆಟ್ಗೆ ಮರಳುತ್ತಿದ್ದಾರೆ. ಕಳೆದ ಋತುವಿನಲ್ಲಿ ಕರ್ನಾಟಕದ ವಿರುದ್ಧದ ಪಂದ್ಯದ ನಂತರ ಗಿಲ್ ಯಾವುದೇ ರಣಜಿ ಪಂದ್ಯಗಳನ್ನು ಆಡಿರಲಿಲ್ಲ. ಪಂಜಾಬ್ ತಂಡವು ಪ್ರಸ್ತುತ ‘ಬಿ’ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ತಂಡವನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿ ಗಿಲ್ ಮೇಲಿದೆ. ಸೌರಾಷ್ಟ್ರ ಕೂಡ ನಾಲ್ಕನೇ ಸ್ಥಾನದಲ್ಲಿದ್ದು, ಎರಡೂ ತಂಡಗಳಿಗೆ ಈ ಪಂದ್ಯವು ಅತ್ಯಂತ ಪ್ರಮುಖವಾಗಿದೆ.
ಆತ್ಮಾವಲೋಕನ ಮಾಡಿಕೊಂಡ ನಾಯಕ
ಸರಣಿ ಸೋಲಿನ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಗಿಲ್, ಬ್ಯಾಟ್ಸ್ಮನ್ಗಳ ವೈಫಲ್ಯವನ್ನು ಒಪ್ಪಿಕೊಂಡಿದ್ದರು. “ನಮಗೆ ಸಿಕ್ಕ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಭಾರತದ ಪಿಚ್ಗಳಲ್ಲಿ ಬ್ಯಾಟರ್ಗಳು ದೊಡ್ಡ ಇನ್ನಿಂಗ್ಸ್ ಆಡದಿದ್ದರೆ ಪಂದ್ಯ ಗೆಲ್ಲುವುದು ಕಷ್ಟ” ಎಂದು ಹೇಳಿದ್ದರು. ಅಲ್ಲದೆ ಜಡೇಜಾ ಅವರ ಕುರಿತು ಮಾತನಾಡುತ್ತಾ, “ಜಡ್ಡು ಭಾಯ್ ಬ್ಯಾಟಿಂಗ್ನಲ್ಲಿ ಉತ್ತಮ ಟಚ್ನಲ್ಲಿದ್ದಾರೆ, ಆದರೆ ಅವರ ಮೇಲಿನ ಕೆಲಸದ ಒತ್ತಡ ಮತ್ತು ಪಂದ್ಯಗಳ ಲಭ್ಯತೆಯ ಬಗ್ಗೆ ನಮಗೆ ಅರಿವಿದೆ” ಎಂದು ಬೆಂಬಲ ಸೂಚಿಸಿದ್ದರು.
ಇದನ್ನೂ ಓದಿ : ಬಿಗ್ಬಾಸ್ ವಿನ್ನರ್ ಗಿಲ್ಲಿಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ.. ಭರ್ಜರಿ ರೋಡ್ ಶೋ, ಕಿಕ್ಕಿರಿದು ಸೇರಿದ ಫ್ಯಾನ್ಸ್!



















