ಬೆಂಗಳೂರು : ನಗರದ ಬಾಣಸವಾಡಿ ವಿಧಾನಸಭಾ ಕ್ಷೇತ್ರದ ಜೈ ಭಾರತ್ ನಗರ, ಮಾರುತಿ ಸೇವಾನಗರ ಹಾಗೂ ವಿವೇಕಾನಂದ ನಗರದ ನಿವಾಸಿಗಳು ಕಳೆದ ಒಂದು ವರ್ಷದಿಂದ ಚರಂಡಿ ನೀರಿನ ದುರ್ವಾಸನೆ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾತ್ರಿಯಾದರೆ ಮೂಗು ಮುಚ್ಚಿಕೊಂಡೇ ಮಲಗಬೇಕಾದ ಪರಿಸ್ಥಿತಿ ಎದುರಾಗಿದ್ದು, ದುರ್ವಾಸನೆಯಿಂದ ಮಕ್ಕಳು ಸೇರಿದಂತೆ ಹಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಸುಮಾರು 1,000ಕ್ಕೂ ಹೆಚ್ಚು ಮನೆಗಳು ಈ ಸಮಸ್ಯೆಯಿಂದ ಬಳಲುತ್ತಿವೆ ಎಂದು ತಿಳಿದುಬಂದಿದೆ.
ಈ ಪ್ರದೇಶವು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದು, ಸಮಸ್ಯೆ ಕುರಿತು ಹಲವು ಬಾರಿ ದೂರು ನೀಡಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎನ್ನಲಾಗಿದೆ. ದುರ್ವಾಸನೆಯಿಂದ ಮನೆಗಳಲ್ಲಿ ವಾಸಿಸುವುದೇ ಕಷ್ಟವಾಗಿದ್ದು, ಹೊರಗೆ ಓಡಾಡಲು ಕೂಡ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸುಬ್ಬಯ್ಯನಪಾಳ್ಯದ ಜೈ ಭಾರತ್ ನಗರದಲ್ಲಿ ಈ ಸಮಸ್ಯೆ ಗಂಭೀರವಾಗಿದೆ. ಈ ಹಿಂದೆ ಚರಂಡಿ ನೀರು ಸಮೀಪದ ಬೃಹತ್ ನೀರುಗಾಲುವೆಗೆ ಹರಿಯುತ್ತಿತ್ತು. ಆದರೆ ರೈಲ್ವೆ ಇಲಾಖೆಯ ಜಾಗದಲ್ಲಿ ಕಾಂಪೌಂಡ್ ಹಾಗೂ ಫೆನ್ಸಿಂಗ್ ನಿರ್ಮಾಣ ಮಾಡಿದ ಬಳಿಕ ನೀರು ಹರಿಯುವ ಮಾರ್ಗ ಸಂಪೂರ್ಣ ಬಂದ್ ಆಗಿದ್ದು, ಚರಂಡಿ ನೀರು ಸ್ಥಳದಲ್ಲೇ ಶೇಖರಣೆಯಾಗುತ್ತಿದೆ. ಇದರಿಂದ ದುರ್ವಾಸನೆ ಹೆಚ್ಚಾಗಿ ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿದೆ.
ಸಮಸ್ಯೆ ಪರಿಹರಿಸಲು ಬೆಂಗಳೂರು ಉತ್ತರ ನಗರ ಪಾಲಿಕೆ ರೈಲ್ವೆ ಇಲಾಖೆಗೆ ಪತ್ರ ಬರೆದು, ರೈಲ್ವೆ ಸ್ವತ್ತಿನೊಳಗೆ ಸುಮಾರು 70 ಮೀಟರ್ ಉದ್ದದ ಪೈಪ್ಲೈನ್ ಅಥವಾ RCC ಡ್ರೈನ್ ನಿರ್ಮಿಸಲು ಅನುಮತಿ ಕೋರಿದೆ. ಚರಂಡಿ ನೀರನ್ನು ಮತ್ತೆ ಬೃಹತ್ ನೀರುಗಾಲುವೆಗೆ ಸಂಪರ್ಕಿಸಲು ರೈಲ್ವೆ ಇಲಾಖೆಯ ಅನುಮತಿ ಅಗತ್ಯವಿದೆ ಎಂದು ಪಾಲಿಕೆ ತಿಳಿಸಿದೆ.
ಮಳೆ ಬಂದಾಗ ಚರಂಡಿ ನೀರು ಇನ್ನಷ್ಟು ಶೇಖರಣೆಯಾಗಿ ರಸ್ತೆಗಳು ಜಲಾವೃತವಾಗುವ ಆತಂಕ ಎದುರಾಗಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : 7 ಸಾವಿರ ವಿದ್ಯಾರ್ಥಿಗಳಿಗೆ HIV ಸೋಂಕು ಎಂಬ ಸುದ್ದಿ ಸುಳ್ಳು : ಆರೋಗ್ಯ ಇಲಾಖೆ ಸ್ಪಷ್ಟನೆ!


















