ಚಂಡೀಗಢ : ದುಷ್ಕರ್ಮಿಗಳ ಅಟ್ಟಹಾಸಕ್ಕೆ ಸಾಕ್ಷಿಯಾಗಿ ಸುಮಾರು ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿದ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿದ್ದ ಪಂಜಾಬ್ ಮೂಲದ ಇನ್ಫ್ಲುಯೆನ್ಸರ್ ಮಂಜೀತ್ ಕೌರ್ (28) ಕೊನೆಯುಸಿರೆಳೆದಿದ್ದಾರೆ. ಆಕೆಯನ್ನು ದುಷ್ಕರ್ಮಿಗಳು ಅಪಹರಿಸಿ, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದರು, ತೀವ್ರ ಗಾಯಗೊಂಡ ಆಕೆ 2 ತಿಂಗಳ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಪ್ರಕಾರ, ಜುಲೈ 3ರಂದು ಚಂಡೀಗಢದ ಸೆಕ್ಟರ್ 34 ರಲ್ಲಿ ಆಕೆಯ ಪರಿಚಿತರಾದ ಶುಭಿ ಮತ್ತು ಪಿಂದಾ ಎಂಬಿಬ್ಬರು ಮಾತುಕತೆಯ ನೆಪದಲ್ಲಿ ಆಕೆಯನ್ನು ಕರೆಸಿಕೊಂಡಿದ್ದರು. ನಂತರ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಪಂಜಾಬ್ನ ರೂಪನಗರ ಜಿಲ್ಲೆಯ ಮೊರಿಂದಾ ಎಂಬ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಆಕೆಯ ಮೇಲೆ ತೀವ್ರ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಆಕೆಯ ಸ್ನೇಹಿತರೊಬ್ಬರು ಕಂಬಳಿಯಿಂದ ಬೆಂಕಿ ನಂದಿಸಿ ಆಕೆಯನ್ನು ರಕ್ಷಿಸಲು ಯತ್ನಿಸಿದ್ದಾರೆ.
ಎರಡು ತಿಂಗಳ ಸುದೀರ್ಘ ಹೋರಾಟ ಅಂತ್ಯ
ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಂಜೀತ್ ಕೌರ್ ಅವರನ್ನು ಮೊದಲು ಮೊರಿಂದಾ ಆಸ್ಪತ್ರೆಗೆ, ನಂತರ ಮೊಹಾಲಿ ಹಾಗೂ ಜುಲೈ 9ರಂದು ಉನ್ನತ ಚಿಕಿತ್ಸೆಗಾಗಿ ಚಂಡೀಗಢದ ಪಿಜಿಐಎಂಇಆರ್ (PGIMER) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ವಾರಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೌರ್, ಆಗಸ್ಟ್ 5 ರಂದು ಕೊಂಚ ಪ್ರಜ್ಞೆ ಬಂದಾಗ ತಮ್ಮ ಮೇಲಾದ ದೌರ್ಜನ್ಯವನ್ನು ಕುಟುಂಬಸ್ಥರಿಗೆ ವಿವರಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 26ರಂದು ಆಸ್ಪತ್ರೆಯಲ್ಲಿ ನಿಧನರಾದರು. ಕೌರ್ ವಿಚ್ಛೇದಿತರಾಗಿದ್ದು, 7 ವರ್ಷದ ಪುತ್ರನನ್ನು ಅಗಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್
ಮಂಜೀತ್ ಆಸ್ಪತ್ರೆಯಲ್ಲಿದ್ದಾಗ ಆಕೆಯ ಸ್ನೇಹಿತ ಹಾಗೂ ಇನ್ಫ್ಲುಯೆನ್ಸರ್ ಗಿಲ್ ಮೊಹಾಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. “ಮಂಜೀತ್ ಶೇ.50ರಷ್ಟು ಚೇತರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಆಕೆಯೇ ಲೈವ್ ಬಂದು ತನಗಾದ ಅನ್ಯಾಯವನ್ನು ವಿವರಿಸಲಿದ್ದಾಳೆ. ಯಾರೂ ಆಕೆಯ ಬಗ್ಗೆ ತಪ್ಪು ಅಭಿಪ್ರಾಯ ತಳೆಯಬೇಡಿ” ಎಂದು ಮನವಿ ಮಾಡಿದ್ದರು. ಆದರೆ, ತಮ್ಮ ಮೇಲಾದ ಕೃತ್ಯದ ಬಗ್ಗೆ ಆಕೆ ಸ್ವತಃ ಲೈವ್ ಬಂದು ಮಾತನಾಡುವ ಮುನ್ನವೇ ಜೀವ ಬಿಟ್ಟಿರುವುದು ಅಭಿಮಾನಿಗಳಲ್ಲಿ ತೀವ್ರ ದುಃಖ ಉಂಟುಮಾಡಿದೆ.
ಹತ್ಯೆಯ ಹಿಂದಿನ ನೈಜ ಕಾರಣ ಹಾಗೂ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಚಂಡೀಗಢದ ಸೆಕ್ಟರ್ 34 ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಾದ ಶುಭಿ ಮತ್ತು ಪಿಂದಾ ಅವರಿಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಒಳಮೀಸಲಾತಿ ಬೆಂಕಿ : ಚಿರಾಗ್ ಪಾಸ್ವಾನ್-ಜಿತನ್ ರಾಮ್ ಮಾಂಝಿ ನಡುವೆ ವಾಕ್ಸಮರ.. ರಾಜೀನಾಮೆಗೆ ಪಟ್ಟು!



















