ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಸ್ವಾತಂತ್ರ್ಯಾನಂತರದ ಅತಿ ಹೆಚ್ಚು ಅಂದರೆ ಶೇ.92.88ರಷ್ಟು ಮತದಾನ ದಾಖಲಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ನಡೆಸಿ ಗಮನ ಸೆಳೆದಿದ್ದಾರೆ. ಏ.29ರಂದು ನಡೆಯಲಿರುವ ಎರಡನೇ ಹಂತದ ಮತದಾನಕ್ಕೂ ಮುನ್ನ ಬಿಡುವು ಮಾಡಿಕೊಂಡ ಪ್ರಧಾನಿ, ಕ್ಯಾಮೆರಾ ಹಿಡಿದು ನಿಸರ್ಗದ ಸೌಂದರ್ಯವನ್ನು ಸವಿದರು. ವಿದ್ಯಾಸಾಗರ್ ಸೇತುವಿನ ಹಿನ್ನೆಲೆಯಲ್ಲಿ ಮರದ ದೋಣಿಯಲ್ಲಿ ಕುಳಿತಿರುವ ಚಿತ್ರಗಳನ್ನು ಅವರು ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗಂಗಾ ನದಿಯ ಪಶ್ಚಿಮದ ಉಪನದಿಯಾಗಿರುವ ಹೂಗ್ಲಿಯ ತಟದಲ್ಲಿ ಕಳೆದ ಕ್ಷಣಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, “ಪ್ರತಿ ಬಂಗಾಳಿಗೂ ಗಂಗೆಯ ಬಗ್ಗೆ ಅತ್ಯಂತ ವಿಶೇಷವಾದ ಸ್ಥಾನವಿದೆ. ಗಂಗೆಯು ಬಂಗಾಳದ ಆತ್ಮದ ಮೂಲಕ ಹರಿಯುತ್ತಾಳೆ ಎಂದು ಹೇಳಬಹುದು. ಆಕೆಯ ಪವಿತ್ರ ನೀರು ಇಡೀ ನಾಗರಿಕತೆಯ ಕಾಲಾತೀತ ಚೈತನ್ಯವನ್ನು ಹೊತ್ತು ತರುತ್ತದೆ” ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ಗಂಗಾಮಾತೆಗೆ ಕೃತಜ್ಞತೆ ಸಲ್ಲಿಸಿದ ಅವರು, ಪಶ್ಚಿಮ ಬಂಗಾಳದ ಅಭಿವೃದ್ಧಿ ಮತ್ತು ಬಂಗಾಳಿ ಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ವಿಹಾರದ ಸಮಯದಲ್ಲಿ ನದಿ ತೀರದಲ್ಲಿದ್ದ ಸ್ಥಳೀಯರು ಹಾಗೂ ಅಂಬಿಗರೊಂದಿಗೂ ಪ್ರಧಾನಿ ಮಾತುಕತೆ ನಡೆಸಿದರು.
ಬೇಲೂರು ಮಠಕ್ಕೆ ಭೇಟಿ
ಗುರುವಾರ ಕೃಷ್ಣನಗರದಲ್ಲಿ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಬೇಲೂರು ಮಠಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಇಂದು ಡಮ್ ಡಮ್ ಮತ್ತು ಜಾದವ್ಪುರದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಬಂಗಾಳದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮೋದಿ, ಮೇ 4ರ ಮತ ಎಣಿಕೆಯ ದಿನವು ತೃಣಮೂಲ ಕಾಂಗ್ರೆಸ್ನ (ಟಿಎಂಸಿ) 15 ವರ್ಷಗಳ ‘ಸಿಂಡಿಕೇಟ್ ವ್ಯವಸ್ಥೆ’ ಮತ್ತು ‘ಮಹಾ ಜಂಗಲ್ ರಾಜ್’ನ ಅಂತ್ಯದ ದಿನವಾಗಲಿದೆ ಎಂದು ಗುಡುಗಿದ್ದಾರೆ.
ಗೆಲುವಿನ ವಿಶ್ವಾಸದಲ್ಲಿ ಮಮತಾ ಬ್ಯಾನರ್ಜಿ
ಒಂದೆಡೆ ಬಿಜೆಪಿ ಬಂಗಾಳದಲ್ಲಿ ಅಧಿಕಾರಕ್ಕೇರಲು ತೀವ್ರ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸತತ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇದುವರೆಗಿನ ಮತದಾನದ ಒಲವುಗಳು ಟಿಎಂಸಿ ಪರವಾಗಿವೆ ಎಂದು ಹೇಳಿರುವ ಅವರು, ಒಟ್ಟು 152 ಕ್ಷೇತ್ರಗಳ ಪೈಕಿ 125 ರಿಂದ 134 ಸ್ಥಾನಗಳಲ್ಲಿ ತಮ್ಮ ಪಕ್ಷ ಭರ್ಜರಿ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮೇ 4ರಂದು ಹೊರಬೀಳಲಿರುವ ಚುನಾವಣಾ ಫಲಿತಾಂಶವು ಈ ಎಲ್ಲ ಕುತೂಹಲಗಳಿಗೆ ತೆರೆ ಎಳೆಯಲಿದೆ.
ಇದನ್ನೂ ಓದಿ : ದೇವಾಲಯ ಉದ್ಘಾಟನೆಯಲ್ಲಿ ಕಣ್ಣೀರಿಟ್ಟ ರೇವಣ್ಣ – ಸರ್ಕಾರ ವಿರುದ್ಧ ಆಕ್ರೋಶ!


















