ಬೆಂಗಳೂರು : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ (ಶಾಂತವೇರಿ ಗೋಪಾಲಗೌಡ ಆಸ್ಪತ್ರೆ) ವೈದ್ಯರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಡಾಕ್ಟರ್ ನಿರ್ಲಕ್ಷ್ಯಕ್ಕೆ ಮರ್ಮಾಂಗದ ಭಾದೆ ತಾಳಲಾರದೆ ವ್ಯಕ್ತಿಯೋರ್ವ ನರಳಿ ನರಳಿ ಪ್ರಾಣಬಿಟ್ಟಿದ್ದಾನೆ ಎಂದು ದೂರಲಾಗಿದ್ದು, ಇದು ಇಡೀ ವೈದ್ಯ ಲೋಕವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ ಎಂಬ ಮಾತುಗಳು ಕೇಳಿಬಂದಿವೆ.
ಖಾಸಗಿ ಸಂಸ್ಥೆಯೊಂದರಲ್ಲಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದ 45 ವರ್ಷದ ಶಾ ನವಾಜ್ ಎಂಬ ವ್ಯಕ್ತಿ ಮರ್ಮಾಂಗದಲ್ಲಿ ಗಡ್ಡೆ ಬೆಳೆದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆ ಎಮರ್ಜೆನ್ಸಿ ವಿಭಾಗಕ್ಕೆ ಅವರನ್ನು ಎಡ್ಮಿಟ್ ಮಾಡಿಕೊಳ್ಳಲಾಗಿತ್ತು.
ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಹೇಳಿದ್ದು, ಬಳಿಕ ಚಿಕಿತ್ಸೆಗಾಗಿ ಆತನ ಮರ್ಮಾಂಗವನ್ನು ಆಸ್ಪತ್ರೆ ಸಿಬ್ಬಂದಿ ಕೊಯ್ದಿದ್ದರು. ಅದಾದ ಕೆಲ ದಿನಗಳ ಬಳಿಕ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ತಿಳಿಸಿದ್ದರು. ಆದರೆ ಗಾಯ ಇನ್ನೂ ಆರಿಲ್ಲ ಎಂದು ಈ ವೇಳೆ ಸರ್ಜರಿ ವಿಭಾಗ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.
ಆಪರೇಷನ್ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ಸಮನ್ವಯತೆ ಕೊರತೆ ಕಾರಣ ರೋಗಿ ಗಂಭೀರ ಸ್ಥಿತಿಯಲ್ಲಿ ಇರುವಾಗಲೇ ಡಿಸ್ಚಾರ್ಜ್ ಆಗುವಂತೆ ಒತ್ತಡ ಹೇರಲಾಗಿದೆ. ಕೊನೆಗೆ ಕೊಯ್ದಿದ್ದ ಮರ್ಮಾಂಗಕ್ಕೆ ಹೊಲಿಗೆ ಕೂಡ ಮಾಡದೇ ಸಿಬ್ಬಂದಿ ಕಳುಹಿಸಿರುವ ಆರೋಪ ಕೇಳಿಬಂದಿದೆ.
ಎಷ್ಟೇ ಅಂಗಲಾಚಿದರೂ ಆಸ್ಪತ್ರೆ ಸಿಬ್ಬಂದಿ ಮತ್ತೆ ಅಡ್ಮಿಟ್ ಮಾಡಿಕೊಳ್ಳದ ಕಾರಣ ಕೊನೆಗೆ 3 ದಿನ ಫುಟ್ಪಾತ್ನಲ್ಲೇ ರೋಗಿ ಪತಿಯನ್ನು ಮಡದಿ ಇಟ್ಟುಕೊಂಡಿದ್ದರು. ಮರ್ಮಾಂಗದಿಂದ ರಕ್ತ ಸುರಿಯುತ್ತಲೇ ಇದ್ದರೂ ಹೊಲಿಗೆ ಕೂಡ ಮಾಡದೇ ನಿರ್ಲಕ್ಷ್ಯ ತೋರಿದ ಕಾರಣ ಕೊನೆಗೆ ಮರ್ಮಾಂಗದ ಭಾದೆ ತಾಳಲಾರದೆ ನವಾಜ್ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ.
ನವಾಜ್ರನ್ನೇ ನಂಬಿಕೊಂಡಿದ್ದ ಹೆಂಡತಿ ಹಾಗೂ ನಾಲ್ಕು ಮಂದಿ ಮಕ್ಕಳು ಘಟನೆಯಿಂದ ಬೀದಿಗೆ ಬಿದ್ದಿದ್ದು, ಮನೆಗೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯ ಆರೋಪದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ!



















