ನವದೆಹಲಿ : ಇಂದಿನಿಂದ ಆರಂಭವಾಗಿರುವ ಸಂಸತ್ತಿನ 3 ದಿನಗಳ ವಿಶೇಷ ಅಧಿವೇಶನದಲ್ಲಿ ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂಬ ಸಮಾಜವಾದಿ ಪಕ್ಷದ (SP) ಸಂಸದರ ಬೇಡಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಭಾರತೀಯ ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯ ಜಾರಿ ಕುರಿತ ಚರ್ಚೆಯ ವೇಳೆ ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಅವರು, ಒಬಿಸಿ, ಹಿಂದುಳಿದ ವರ್ಗದ ಮಹಿಳೆಯರು ಹಾಗೂ ಮುಸ್ಲಿಂ ಮಹಿಳೆಯರಿಗೆ ಮೀಸಲಾತಿಯಲ್ಲಿ ಪ್ರಾತಿನಿಧ್ಯ ನೀಡದ ಹೊರತು ತಮ್ಮ ಪಕ್ಷವು ಈ ಪ್ರಸ್ತಾವನೆಯನ್ನು ಬೆಂಬಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಮಿತ್ ಶಾ, “ಧರ್ಮೇಂದ್ರ ಯಾದವ್ ಅವರು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಮೀಸಲಾತಿ ನೀಡುವುದು ಅಸಾಂವಿಧಾನಿಕ. ನಮ್ಮ ಸಂವಿಧಾನವು ಇದಕ್ಕೆ ಅನುಮತಿಸುವುದಿಲ್ಲ. ಹೀಗಾಗಿ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಖಡಕ್ ಆಗಿ ನುಡಿದರು.
ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಗೃಹ ಸಚಿವರ ಹೇಳಿಕೆಯನ್ನು ಬೆಂಬಲಿಸಿ, ಇಂತಹ ಗಂಭೀರ ವಿಷಯಗಳನ್ನು ಧಾರ್ಮಿಕ ನೆಲೆಯಲ್ಲಿ ನೋಡಬಾರದು, ಇಡೀ ದೇಶದ ಮಹಿಳೆಯರ ಹಿತದೃಷ್ಟಿಯಿಂದ ಚರ್ಚೆ ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಜಾತಿ ಗಣತಿ ನಡೆಸುವುದಾಗಿ ಕೇಂದ್ರದ ಘೋಷಣೆ
ಇದೇ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಗೃಹ ಸಚಿವರು ಮತ್ತೊಂದು ಮಹತ್ವದ ವಿಷಯವನ್ನು ಪ್ರಸ್ತಾಪಿಸಿದರು. ದೇಶದಲ್ಲಿ ಜನಗಣತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಇದರ ಜೊತೆಯಲ್ಲೇ ಜಾತಿ ಗಣತಿಯನ್ನೂ ನಡೆಸಲು ಸರ್ಕಾರ ನಿರ್ಧರಿಸಿದೆ. ಆದರೆ, ಯಾವುದೇ ಕಾರಣಕ್ಕೂ ಧರ್ಮಾಧಾರಿತ ಮೀಸಲಾತಿಗೆ ಅವಕಾಶ ನೀಡುವುದಿಲ್ಲ ಎಂಬುದನ್ನು ಅವರು ಮತ್ತೆ ಪುನರುಚ್ಚರಿಸಿದರು.
ಮಸೂದೆ ಮಂಡನೆಗೆ ವಿಪಕ್ಷಗಳ ತೀವ್ರ ಆಕ್ಷೇಪ
ಮಹಿಳಾ ಮೀಸಲಾತಿ (ನಾರಿ ಶಕ್ತಿ ವಂದನ್ ಅಧಿನಿಯಮ್) ಜಾರಿಗೆ ತರುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡಲು ಕರೆಯಲಾಗಿರುವ ಈ ಮೂರು ದಿನಗಳ ವಿಶೇಷ ಅಧಿವೇಶನವು ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ‘ಸಂವಿಧಾನದ 131ನೇ ತಿದ್ದುಪಡಿ ಮಸೂದೆ’ ಮತ್ತು ‘ಕ್ಷೇತ್ರ ಪುನರ್ವಿಂಗಡಣೆ ಮಸೂದೆ, 2026’ ಅನ್ನು ಮಂಡಿಸಿದರು. ಮತ್ತೊಂದೆಡೆ ಅಮಿತ್ ಶಾ ಅವರು ‘ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2026’ ಅನ್ನು ಮಂಡಿಸಿದರು.
ಈ ಮೂರೂ ಮಸೂದೆಗಳ ಮಂಡನೆಯನ್ನು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ತೀವ್ರವಾಗಿ ವಿರೋಧಿಸಿದರು. “ಈ ಮಸೂದೆಗಳು ಭಾರತದ ಒಕ್ಕೂಟ ವ್ಯವಸ್ಥೆಯ ಮೇಲಿನ ಮೂಲಭೂತ ದಾಳಿಯಂತಿವೆ. ಸಂಸತ್ತು ಈ ಹಿಂದೆಯೇ ಉಭಯ ಸದನಗಳಲ್ಲಿ ಶೇಕಡಾ 33ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿರುವಾಗ, ಈ ಹೊಸ ಮಸೂದೆಗಳನ್ನು ತರುತ್ತಿರುವ ಹಿಂದಿನ ಅಸಲಿ ಉದ್ದೇಶವೇನು?” ಎಂದು ಅವರು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಆಕ್ಷೇಪಣೆಗೆ ಉತ್ತರಿಸಿದ ಅಮಿತ್ ಶಾ, ಮಸೂದೆ ಮಂಡನೆಯ ಪ್ರಾಥಮಿಕ ಹಂತದಲ್ಲಿ ಕೇವಲ ತಾಂತ್ರಿಕ ಆಕ್ಷೇಪಣೆಗಳನ್ನು ಮಾತ್ರ ಎತ್ತಲು ಸಾಧ್ಯವಿದೆ. ಮಸೂದೆಯ ಸಾಧಕ-ಬಾಧಕಗಳ ಬಗ್ಗೆ ಈಗಲೇ ಚರ್ಚಿಸಲು ಬರುವುದಿಲ್ಲ. ಮುಂಬರುವ ಚರ್ಚೆಯ ವೇಳೆಯಲ್ಲಿ ಸರ್ಕಾರವು ವಿರೋಧ ಪಕ್ಷಗಳ ಎಲ್ಲಾ ಪ್ರಶ್ನೆಗಳಿಗೂ ತಕ್ಕ ಮತ್ತು ದಿಟ್ಟ ಉತ್ತರ ನೀಡಲಿದೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ : ಕೆಮ್ಮಣ್ಣುಗುಂಡಿ ಅರಣ್ಯದಲ್ಲಿ ‘ವ್ಯಾಘ್ರ’ ದರ್ಶನ – ಪ್ರವಾಸಿಗರ ಕ್ಯಾಮೆರಾದಲ್ಲಿ ದೃಶ್ಯ ಸೆರೆ!



















