ನವದೆಹಲಿ/ಜೈಪುರ : ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನೀಡಿರುವ ಹೇಳಿಕೆಯೊಂದು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಬದುಕಿದ್ದರೆ ಬಿಜೆಪಿ(BJP)ಯನ್ನು ನಿಷೇಧಿಸುತ್ತಿದ್ದರು ಎಂದು ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಕೆಂಡಾಮಂಡಲವಾಗಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳೆಂದರೆ ದ್ವೇಷ ಮತ್ತು ಅದು ಕೇವಲ ಮುಸ್ಲಿಂ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದೆ.
ಜೈಪುರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಶೋಕ್ ಗೆಹ್ಲೋಟ್, ತಮ್ಮ 50 ವರ್ಷಗಳ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಇಂತಹ ಕಠಿಣ ಪರಿಸ್ಥಿತಿಯನ್ನು ಎಂದೂ ನೋಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. “ಇಂದು ದೇಶದಲ್ಲಿ ಸೃಷ್ಟಿಯಾಗಿರುವ ವಾತಾವರಣ ಅತ್ಯಂತ ಅಪಾಯಕಾರಿಯಾಗಿದೆ. ಇಂದಿರಾ ಗಾಂಧಿಯವರಂತಹ ಪ್ರಭಾವಿ ನಾಯಕರು ಇಂದು ಬದುಕಿದ್ದರೆ, ಬಿಜೆಪಿಯಂತಹ ಪಕ್ಷವನ್ನು ಖಂಡಿತವಾಗಿಯೂ ನಿಷೇಧಿಸುತ್ತಿದ್ದರು. ನಾನು ಸಂಪೂರ್ಣ ಜವಾಬ್ದಾರಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ.
ದೇಶದ ಜನತೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಅದರ ಭೀಕರ ಪರಿಣಾಮವನ್ನು ಅವರೇ ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ. ಅಧಿಕಾರದಲ್ಲಿರುವವರು ದೇಶದಲ್ಲಿ ಉದ್ದೇಶಪೂರ್ವಕವಾಗಿ ಧಾರ್ಮಿಕ ಧ್ರುವೀಕರಣವನ್ನು ಉಂಟುಮಾಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯ ಪ್ರಸ್ತಾಪ
ತಮ್ಮ ಭಾಷಣದ ವೇಳೆ ಬಿಜೆಪಿಯ ಚುನಾವಣಾ ತಂತ್ರಗಾರಿಕೆಯನ್ನು ಪ್ರಶ್ನಿಸಿದ ಗೆಹ್ಲೋಟ್, ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡದಿರುವುದನ್ನು ಪ್ರಸ್ತಾಪಿಸಿದ್ದಾರೆ. “ದೇಶದ ಜನರಿಗೆ ತೋರಿಸಿಕೊಳ್ಳುವುದಕ್ಕಾಗಿಯಾದರೂ ನೀವು ಐದು ಸೀಟುಗಳನ್ನು ನೀಡಬಹುದಿತ್ತು. ಆದರೆ, ತಾವು ಕೇವಲ ಶುದ್ಧ ಹಿಂದುತ್ವವಾದಿ ಪಕ್ಷ ಎಂದು ಬಿಂಬಿಸಿಕೊಳ್ಳಲು ನೀವು ಬಯಸುತ್ತೀರಿ. ಕೇವಲ ಹಿಂದುತ್ವ ಬೆಂಬಲಿಗರನ್ನು ಪ್ರಚೋದಿಸಿ ಆಡಳಿತ ನಡೆಸುವ ಆಲೋಚನೆ ಹೊಂದಿರುವ ಇಂತಹ ಪಕ್ಷವನ್ನು ಇಂದಿರಾ ಗಾಂಧಿ ನಿಷೇಧಿಸುತ್ತಿದ್ದರು. ಕೇವಲ ಹಿಂದುತ್ವದ ಅಜೆಂಡಾ ಮತ್ತು ಹಿಂದೂಗಳ ಹೆಸರಿನಲ್ಲಿ ಮಾತ್ರವೇ ನೀವು ರಾಜಕಾರಣ ಮಾಡಲು ಬಯಸುತ್ತೀರಾ?” ಎಂದು ಅವರು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.
ಕಾಂಗ್ರೆಸ್ಗೆ ಹಿಂದೂಗಳೆಂದರೆ ದ್ವೇಷ: ಬಿಜೆಪಿ ವಾಗ್ದಾಳಿ
ಅಶೋಕ್ ಗೆಹ್ಲೋಟ್ ಅವರ ಈ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೆಹ್ಲೋಟ್ ಅವರ ಮಾತುಗಳು ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳು ಮತ್ತು ಹಿಂದುತ್ವದ ಮೇಲಿರುವ ದ್ವೇಷವನ್ನು ಎತ್ತಿ ತೋರಿಸುತ್ತವೆ ಎಂದು ಅವರು ಹರಿಹಾಯ್ದಿದ್ದಾರೆ. “ಹಿಂದುತ್ವ ಎನ್ನುವುದು ಒಂದು ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಿರುವಾಗ ಇಂದಿರಾ ಗಾಂಧಿ ಅದನ್ನು ಏಕೆ ನಿಷೇಧಿಸುತ್ತಿದ್ದರು? ಗೆಹ್ಲೋಟ್ ಅವರ ಮಾತುಗಳು ಕಾಂಗ್ರೆಸ್ ನಾಯಕರ ಒಳಗೆ ಅಡಗಿರುವ ತುರ್ತು ಪರಿಸ್ಥಿತಿಯ ಮನಸ್ಥಿತಿಯನ್ನು ಬಿಂಬಿಸುತ್ತವೆ” ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ‘ಇಂಡಿಯನ್ ನ್ಯಾಷನಲ್ ಕ್ಯಾಲಿಫೇಟ್’ ಮತ್ತು ‘ಮುಸ್ಲಿಂ ಲೀಗ್ ಮಾವೋಯಿಸ್ಟ್ ಕಾಂಗ್ರೆಸ್’ ಎಂದು ಲೇವಡಿ ಮಾಡಿರುವ ಪೂನಾವಾಲಾ, “ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸ್ಲಿಮರದ್ದು ಎಂದು ಕಾಂಗ್ರೆಸ್ ಹೇಳುತ್ತದೆ. ತಮಗೆ ಮುಸ್ಲಿಮರ ಬೆಂಬಲ ಬೇಕು ಎಂದು ಬಹಿರಂಗವಾಗಿ ಒಪ್ಪಿಕೊಳ್ಳುತ್ತದೆ. ಆದರೆ ಯಾರಾದರೂ ಹಿಂದುತ್ವದ ಬಗ್ಗೆ ಮಾತನಾಡಿದರೆ ಅದನ್ನು ಮಹಾ ಪಾಪ ಎಂಬಂತೆ ಬಿಂಬಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆ ಹಾಕುತ್ತದೆ” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ಹಿರಿಯ ಪತ್ರಕರ್ತ ದಿ.ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ನಿಧನ


















