ಮೈಸೂರು: ಮೈಸೂರು ನಗರದ ಲಷ್ಕರ್ ಪೊಲೀಸ್ ಠಾಣೆಯ ಪೊಲೀಸರ ಭರ್ಜರಿ ಕಾರ್ಯಚರಣೆಯಿಂದ ಅಂತರರಾಜ್ಯ ಮಹಿಳಾ ಆರೋಪಿಗಳು ಸೇರಿದಂತೆ ಒಟ್ಟು ಮೂರು ಜನರನ್ನು ಬಂಧಿಸಿ ಸುಮಾರು 16,50,000 ರೂ. ಬೆಲೆ ಬಾಳುವ 125 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್-10ರಲ್ಲಿ ಪಿರ್ಯಾದಿಯವರಿಗೆ ಸೇರಿದ ಸುಮಾರು 47 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿತ್ತು.

ನಂತರ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಮೈಸೂರು ನಗರ ಪೊಲೀಸ್ ಆಯುಕ್ತರು, ವಿಶೇಷ ತಂಡ ರಚನೆ ಮಾಡಿದ್ದು, ಅದರಂತೆ ವಿಶೇಷ ತಂಡದ ಸಿಬ್ಬಂದಿಗಳು ತಮಿಳನಾಡು ರಾಜ್ಯದ ಆರೋಪಿಗಳಾದ ಪಂಜವರ್ಣಮ್, ಸುಮದಿ ಹಾಗೂ ರಘು ಎಂಬುವರನ್ನು ಬಂಧಿಸಿದ್ದಾರೆ.
ಸದ್ಯ ಆರೋಪಿಗಳಿಂದ 47 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ಠಾಣೆಯ ಇತರೆ ಎರಡು ಪ್ರಕರಣಗಳಿಗೆ ಸಂಬಂಧಿಸಿದ 22 ಗ್ರಾಂ ಚಿನ್ನದ ನಕ್ಲೇಸ್ ಹಾಗೂ 56 ಗ್ರಾಂ ತೂಕದ ಚಿನ್ನದ ಆಭರಣಗಳು ಸೇರಿದಂತೆ ಒಟ್ಟು 03 ಕಳ್ಳತನದ ಪ್ರಕರಣಗಳನ್ನು ಪತ್ತೆಮಾಡಿ ಸುಮಾರು 16,50,000/-ರೂ. ಬೆಲೆ ಬಾಳುವ ಒಟ್ಟು 125 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಎಲ್ಪಿಜಿ ಗ್ಯಾಸ್ ಅಭಾವ.. ಕಿಲೋ ಮೀಟರ್ ಗಟ್ಟಲೆ ಕ್ಯೂ ನಿಂತ ಆಟೋಗಳು



















