ನವದೆಹಲಿ : ಭಾರತದಲ್ಲಿ ನೆಲೆಸುವ ಮತ್ತು ವೀಸಾ ಅವಧಿಯನ್ನು ವಿಸ್ತರಿಸಲು ಬಯಸುವ ವಿದೇಶಿ ನಾಗರಿಕರಿಗೆ ಕೇಂದ್ರ ಗೃಹ ಸಚಿವಾಲಯವು ಪ್ರಮುಖ ಎಚ್ಚರಿಕೆಯೊಂದನ್ನು ನೀಡಿದೆ. ದೇಶದ ಭದ್ರತೆ ಮತ್ತು ವಲಸೆ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ವಲಸೆ ಮತ್ತು ವಿದೇಶಿಗರ ನಿಯಮಗಳು, 2025’ ಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ನೂತನ ನಿಯಮಗಳ ಪ್ರಕಾರ, ಭಾರತದಲ್ಲಿ ತಮ್ಮ ವೀಸಾ ಅವಧಿಯನ್ನು ವಿಸ್ತರಿಸಿಕೊಳ್ಳಲು ಬಯಸುವ ವಿದೇಶಿಗರು ಈಗ ತಮ್ಮ 180 ದಿನಗಳ ಗಡುವು ಮುಗಿಯುವ ಮುನ್ನವೇ ಕಡ್ಡಾಯವಾಗಿ ನೋಂದಣಿ (ರಿಜಿಸ್ಟ್ರೇಷನ್) ಮಾಡಿಕೊಳ್ಳಬೇಕಾಗುತ್ತದೆ.
ಹಳೆಯ ನಿಯಮಾವಳಿಗಳ ಪ್ರಕಾರ, ಭಾರತಕ್ಕೆ ಆಗಮಿಸಿದ ವಿದೇಶಿ ನಾಗರಿಕರು 180 ದಿನಗಳು ಪೂರೈಸಿದ ನಂತರದ 14 ದಿನಗಳ ಒಳಗಾಗಿ ತಮ್ಮ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶವಿತ್ತು. ಆದರೆ ಸೋಮವಾರ ಹೊರಡಿಸಲಾದ ಹೊಸ ಆದೇಶದನ್ವಯ, ಈ ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು, 14 ದಿನಗಳ ಕಾಲಾವಕಾಶವನ್ನು ರದ್ದುಗೊಳಿಸಲಾಗಿದೆ. ಇನ್ಮುಂದೆ 180 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ವೀಸಾ ಹೊಂದಿರುವ ವಿದೇಶಿಗರು, ತಮ್ಮ ವಾಸ್ತವ್ಯವನ್ನು ಮುಂದುವರಿಸಬೇಕಾದರೆ ಆ 180 ದಿನಗಳ ಅವಧಿ ಮುಗಿಯುವ ಮುನ್ನವೇ ಯಾವುದೇ ಸಮಯದಲ್ಲಿ ನೋಂದಣಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಕೇವಲ ತುರ್ತು ಹಾಗೂ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರವೇ ಇಂತಹ ವಿಸ್ತರಣೆಗಳಿಗೆ ಅನುಮತಿ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಜನಿಸುವ ವಿದೇಶಿ ದಂಪತಿಯ ಮಕ್ಕಳಿಗೆ ವಿನಾಯಿತಿ
ಇದೇ ವೇಳೆ ಭಾರತದಲ್ಲಿ ಜನಿಸುವ ವಿದೇಶಿ ಮೂಲದ ಮಕ್ಕಳ ವೀಸಾ ನಿಯಮಗಳಲ್ಲಿ ಕೇಂದ್ರ ಸರ್ಕಾರ ಕೆಲವು ಸಡಿಲಿಕೆಗಳನ್ನು ತಂದು ಪೋಷಕರಿಗೆ ನಿರಾಳತೆ ನೀಡಿದೆ. ಈ ಹಿಂದಿನ ನಿಯಮಗಳ ಪ್ರಕಾರ, ಪೋಷಕರಲ್ಲಿ ಒಬ್ಬರು ಅಥವಾ ಇಬ್ಬರೂ ವಿದೇಶಿಗರಾಗಿದ್ದಲ್ಲಿ, ಮಗು ಜನಿಸಿದ 30 ದಿನಗಳ ಒಳಗಾಗಿ ಆನ್ಲೈನ್ ಪೋರ್ಟಲ್ ಅಥವಾ ಮೊಬೈಲ್ ಆಪ್ ಮೂಲಕ ವಲಸೆ ಅಧಿಕಾರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕಾಗಿತ್ತು.
ಮಗುವಿಗೆ ಹೊಸ ವೀಸಾ ಅಥವಾ ಎಕ್ಸಿಟ್ ಪರ್ಮಿಟ್ ಪಡೆಯಲು ಇದು ಅತ್ಯಗತ್ಯವಾಗಿತ್ತು. ಆದರೆ ಹೊಸ ನಿಯಮದ ಪ್ರಕಾರ, ಮಗುವಿನ ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕರಾಗಿದ್ದು, ಆ ಮಗುವಿಗೆ ಭಾರತದ ಪೌರತ್ವವನ್ನೇ ಮುಂದುವರಿಸಲು ಬಯಸಿದರೆ, ಜನನದ ತಕ್ಷಣವೇ ವಲಸೆ ಅಧಿಕಾರಿಗೆ ವರದಿ ಮಾಡುವ ಅಗತ್ಯವಿರುವುದಿಲ್ಲ. ಒಂದು ವೇಳೆ ಆ ಮಗು ಭಾರತದಲ್ಲೇ ವಾಸಿಸುತ್ತಿರುವಾಗ ಮುಂದೊಂದು ದಿನ ವಿದೇಶಿ ಪೌರತ್ವವನ್ನು ಪಡೆದುಕೊಂಡರೆ ಮಾತ್ರ, ಪೌರತ್ವ ಪಡೆದ 30 ದಿನಗಳ ಒಳಗಾಗಿ ಪೋಷಕರು ಕಡ್ಡಾಯವಾಗಿ ವಲಸೆ ಅಧಿಕಾರಿಗೆ ಮಾಹಿತಿ ನೀಡಬೇಕಾಗುತ್ತದೆ.
ಆಸ್ಪತ್ರೆಗಳ ಹೊಣೆಗಾರಿಕೆ
ವಿದೇಶಿ ರೋಗಿಗಳಿಗೆ ಚಿಕಿತ್ಸೆ ಹಾಗೂ ವಾಸ್ತವ್ಯದ ಸೌಲಭ್ಯ ನೀಡುವ ದೇಶದ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಮತ್ತು ವೈದ್ಯಕೀಯ ಸಂಸ್ಥೆಗಳ ನಿಯಮಗಳನ್ನೂ ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಚಿಕಿತ್ಸೆಗಾಗಿ ಭಾರತಕ್ಕೆ ಬರುವ ವಿದೇಶಿಗರ ಮಾಹಿತಿ ಹಾಗೂ ಅವರ ವಾಸ್ತವ್ಯದ ವಿವರಗಳನ್ನು ಸರ್ಕಾರಕ್ಕೆ ವರದಿ ಮಾಡುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ದೇಶದಲ್ಲಿ ಕಾನೂನುಬಾಹಿರವಾಗಿ ನೆಲೆಸುವ ವಿದೇಶಿಗರ ಮೇಲೆ ಕಣ್ಣಿಡಲು ಮತ್ತು ವಲಸೆ ನಿಗಾ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸಲು ಈ ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : ಧಾರವಾಡದ IITಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ



















