ಇಸ್ಲಾಮಾಬಾದ್ : ಭಾರತ-ಪಾಕಿಸ್ತಾನ ವಿಭಜನೆಯಾಗಿ ಸುಮಾರು 80 ವರ್ಷಗಳು ಕಳೆದರೂ ಇದೀಗ ಸಾಂಸ್ಕೃತಿಕ ನಗರಿ ಲಾಹೋರ್ನ ಗಲ್ಲಿಗಳಲ್ಲಿ ಅಳಿದು ಹೋಗಿದ್ದ ಭಾರತೀಯ ಇತಿಹಾಸ ಮತ್ತೆ ಜೀವ ಪಡೆದಿದೆ. ಪಾಕಿಸ್ತಾನದ ಪಂಜಾಬ್ ಸರ್ಕಾರವು ಲಾಹೋರ್ನ ರಸ್ತೆಗಳು, ಗಲ್ಲಿಗಳು ಮತ್ತು ವೃತ್ತಗಳಿಗೆ ವಿಭಜನೆಗೂ ಮುನ್ನ ಇದ್ದ ಹಿಂದೂ, ಸಿಖ್, ಜೈನ್ ಹಾಗೂ ಬ್ರಿಟಿಷ್ ವಸಾಹತುಶಾಹಿ ಕಾಲದ ಹಳೆಯ ಹೆಸರುಗಳನ್ನು ಮರುನಾಮಕರಣ ಮಾಡುವುದಕ್ಕೆ ಅಧಿಕೃತವಾಗಿ ಚಾಲನೆ ನೀಡಿದೆ.
ಈ ಹಿಂದೆ ಇಸ್ಲಾಮಿಕ್ ಅಥವಾ ಪಾಕಿಸ್ತಾನದ ಸ್ಥಳೀಯ ನಾಯಕರ ಹೆಸರಿಡಲಾಗಿದ್ದ ರಸ್ತೆಗಳಿಗೆ ಈಗ ಅವುಗಳ ಮೂಲ ಇತಿಹಾಸದ ಹೆಸರುಗಳ ಬೋರ್ಡ್ಗಳನ್ನು ಮರುಸ್ಥಾಪಿಸಲಾಗುತ್ತಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದ್ದು, ಕಳೆದ ಎರಡು ತಿಂಗಳುಗಳಿಂದ ನಗರದಾದ್ಯಂತ ಹೊಸ ನಾಮಫಲಕಗಳು ರಾರಾಜಿಸಲು ಆರಂಭಿಸಿವೆ.
‘ಇಸ್ಲಾಮಪುರ’ ಈಗ ಮತ್ತೆ ‘ಕೃಷ್ಣ ನಗರ’:
ಲಾಹೋರ್ನ ಇತಿಹಾಸ ಮತ್ತು ಪರಂಪರೆಯನ್ನು ಉಳಿಸುವ ಈ ಅಭಿಯಾನದ ಭಾಗವಾಗಿ ಪ್ರಸ್ತುತ 9 ಪ್ರಮುಖ ಸ್ಥಳಗಳ ಹೆಸರುಗಳನ್ನು ಹಳೆಯ ಶೈಲಿಗೆ ಬದಲಾಯಿಸಲಾಗಿದೆ. ಇದರ ಅನ್ವಯ, ಇದುವರೆಗೆ ‘ಇಸ್ಲಾಮ್ಪುರ’ ಎಂದು ಕರೆಯಲ್ಪಡುತ್ತಿದ್ದ ಪ್ರಸಿದ್ಧ ಪ್ರದೇಶಕ್ಕೆ ಈಗ ಮತ್ತೆ ‘ಕೃಷ್ಣ ನಗರ’ ಎಂದು ನಾಮಕರಣ ಮಾಡಲಾಗಿದೆ. ಹಾಗೆಯೇ ‘ಬಾಬರಿ ಮಸೀದಿ ಚೌಕ್’ ಈಗ ‘ಜೈನ್ ಮಂದಿರ್ ಚೌಕ್’ ಆಗಿ ಮಾರ್ಪಟ್ಟಿದೆ. ‘ಸುನ್ನತ್ ನಗರ’ಕ್ಕೆ ‘ಸಂತ ನಗರ’ ಎಂಬ ಹಳೆಯ ಹೆಸರನ್ನು ಇಡಲಾಗಿದ್ದರೆ, ‘ಮುಸ್ತಫಾಬಾದ್’ ಪ್ರದೇಶವು ಈಗ ‘ಧರ್ಮಪುರ’ ಆಗಿ ಬದಲಾಗಿದೆ. ಬೌದ್ಧಿಕ ಮತ್ತು ವಾಣಿಜ್ಯ ಕೇಂದ್ರಗಳಾಗಿದ್ದ ‘ಮೌಲಾನಾ ಜಾಫರ್ ಅಲಿ ಖಾನ್ ಚೌಕ್’ ಅನ್ನು ‘ಲಕ್ಷ್ಮಿ ಚೌಕ್’ ಎಂದೂ, ‘ಫಾತಿಮಾ ಜಿನ್ನಾ ರಸ್ತೆ’ಯನ್ನು ‘ಕ್ವೀನ್ಸ್ ರೋಡ್’ ಎಂದೂ ಮತ್ತು ಸುಪ್ರಸಿದ್ಧ ‘ಬಾಗ್-ಎ-ಜಿನ್ನಾ’ ಉದ್ಯಾನವನ್ನು ಬ್ರಿಟಿಷ್ ಕಾಲದ ಹಳೆಯ ಹೆಸರಾದ ‘ಲಾರೆನ್ಸ್ ಗಾರ್ಡನ್ಸ್’ ಎಂದೇ ಮರುನಾಮಕರಣ ಮಾಡಲಾಗಿದೆ.
ದಾಖಲೆಗಳಲ್ಲಿ ಹೆಸರಷ್ಟೇ ಬದಲಾಗಿತ್ತು, ಜನರ ಮನಸ್ಸಿನಲ್ಲಲ್ಲ!
ವಿಶೇಷವೆಂದರೆ, ಕಳೆದ ಎಂಟು ದಶಕಗಳಿಂದ ಸರ್ಕಾರಿ ದಾಖಲೆಗಳಲ್ಲಿ ಈ ರಸ್ತೆಗಳ ಹೆಸರುಗಳು ಬದಲಾಗಿದ್ದರೂ, ಲಾಹೋರ್ನ ಸ್ಥಳೀಯ ನಿವಾಸಿಗಳ ಆಡುಭಾಷೆಯಲ್ಲಿ ಹಳೆಯ ಹೆಸರುಗಳೇ ಕೇಳಿಬರುತ್ತಿತ್ತು. ಲಾಹೋರ್ನ ವಾಲ್ಡ್ ಸಿಟಿಯ ಮಾಜಿ ಮಹಾನಿರ್ದೇಶಕ ಕಮ್ರಾನ್ ಲಶಾರಿ ಅವರ ಪ್ರಕಾರ, ಅಲ್ಲಿನ ಆಟೋ ಚಾಲಕರು, ಚಹಾ ಮಾರುವವರು ಮತ್ತು ಜನಸಾಮಾನ್ಯರು ಕಾಗದದ ಮೇಲಿನ ಹೊಸ ಹೆಸರುಗಳಿಗಿಂತ ಹೆಚ್ಚಾಗಿ ಲಕ್ಷ್ಮಿ ಚೌಕ್, ಕೃಷ್ಣ ನಗರ ಎಂದೇ ದಿನನಿತ್ಯದ ಸಂಭಾಷಣೆಯಲ್ಲಿ ಬಳಸುತ್ತಿದ್ದರು. ಲಾಹೋರ್ ಎಂಬುದು ಕೇವಲ ಇಸ್ಲಾಮಿಕ್ ಸಂಸ್ಕೃತಿಗೆ ಸೀಮಿತವಾಗಿಲ್ಲ; ಅದು ಮುಸ್ಲಿಂ, ಸಿಖ್, ಹಿಂದೂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳ ಸುದೀರ್ಘ ಇತಿಹಾಸವನ್ನು ಒಳಗೊಂಡಿರುವ ಬಹುಸಂಸ್ಕೃತಿಯ ನಗರವಾಗಿದೆ ಎಂಬುದನ್ನು ಈ ಮರುನಾಮಕರಣ ಪ್ರಕ್ರಿಯೆ ಒಪ್ಪಿಕೊಂಡಂತಾಗಿದೆ. ಅಮೃತಸರ ನಗರದಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಲಾಹೋರ್, ವಿಭಜನೆಗೂ ಮುನ್ನ ಅಖಂಡ ಪಂಜಾಬಿ ಸಂಸ್ಕೃತಿಯ ಹೃದಯಭಾಗವಾಗಿತ್ತು.
ಕ್ರೀಡೆ, ಕುಸ್ತಿ ಅಖಾಡ, ಸಿಖ್ ಸಾಮ್ರಾಜ್ಯದ ವೈಭವದ ಪುನಶ್ಚೇತನ
ರಸ್ತೆಗಳ ಹೆಸರು ಬದಲಾಯಿಸುವುದಷ್ಟೇ ಅಲ್ಲದೆ, ಲಾಹೋರ್ನಲ್ಲಿರುವ 100ಕ್ಕೂ ಹೆಚ್ಚು ಪರಂಪರೆಯ ಕಟ್ಟಡಗಳ ಜಿರ್ಣೋದ್ಧಾರ ಕಾರ್ಯವೂ ಭರದಿಂದ ಸಾಗುತ್ತಿದೆ. ಮಹಾರಾಜ ರಂಜಿತ್ ಸಿಂಗ್ ಅವರ ಸಿಖ್ ಸಾಮ್ರಾಜ್ಯದ ಕೊನೆಯ ವಂಶಸ್ಥರಾದ ರಾಜಕುಮಾರಿ ಬಂಬಾ ಸದರ್ಲ್ಯಾಂಡ್ ಅವರ ಅಪರೂಪದ ವರ್ಣಚಿತ್ರವನ್ನು ಲಾಹೋರ್ ಕೋಟೆಯಲ್ಲಿ ಮರುಸ್ಥಾಪಿಸಲಾಗಿದೆ. ಇದಲ್ಲದೆ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಲಾಹೋರ್ನ ಐತಿಹಾಸಿಕ ಕ್ರಿಕೆಟ್ ಮೈದಾನಗಳು ಮತ್ತು ಮಿಂಟೋ ಪಾರ್ಕ್ನಲ್ಲಿ (ಈಗಿನ ಗ್ರೇಟರ್ ಇಕ್ಬಾಲ್ ಪಾರ್ಕ್) ಇದ್ದ ಹಳೆಯ ಕುಸ್ತಿ ಅಖಾಡವನ್ನು ಪುನರ್ ನಿರ್ಮಿಸಲು ಪ್ರಸ್ತಾಪಿಸಿದ್ದಾರೆ. ಭಾರತದ ಕ್ರಿಕೆಟ್ ದಿಗ್ಗಜ ಲಾಲಾ ಅಮರನಾಥ್ ಮತ್ತು ಪಾಕ್ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ ಅವರಂತಹ ಕ್ರೀಡಾಪಟುಗಳು ತರಬೇತಿ ಪಡೆದಿದ್ದ ಈ ಮೈದಾನಗಳು ಹಾಗೂ ಲೆಜೆಂಡರಿ ಕುಸ್ತಿಪಟುಗಳಾದ ಗಾಮ ಪೈಲ್ವಾನ್ ಮತ್ತು ಇಮಾಮ್ ಬಕ್ಷ್ ಅವರ ಅಖಾಡಗಳು ಉಪಖಂಡದ ಹಳೆಯ ಮಧುರ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತಿವೆ. ವಿಭಜನೆಗೂ ಮುನ್ನ ಹಿಂದೂ ಕುಟುಂಬಗಳು ದಸರಾ ಆಚರಿಸುತ್ತಿದ್ದ ಈ ಐತಿಹಾಸಿಕ ಸ್ಥಳಗಳಿಗೆ ಹಳೆಯ ಕಳೆಯನ್ನು ತರಲು ಪಾಕಿಸ್ತಾನದ ಪಂಜಾಬ್ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಇದನ್ನೂ ಓದಿ : ಬಾವಿಯಲ್ಲಿ ಈಜಲು ಹೋಗಿ ಯುವಕ ಸಾವು!



















