ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ತಮಗೆ ಮತ್ತು ತಮ್ಮ ಪತ್ನಿಗೆ ಬಂದಿರುವ ಸರಣಿ ಜೀವ ಬೆದರಿಕೆಗಳ ಕುರಿತು ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಕೋಲ್ಕತ್ತಾದ ಮಾಲ್ ಒಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ವಿಚಾರವಾಗಿ ಪೊಲೀಸರಿಗೆ ಅಧಿಕೃತ ದೂರು ನೀಡಲಾಗಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂಬ ಅಚಲ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ತಮಗೆ ಬೆದರಿಕೆ ಹಾಕಲು ಬಳಸಲಾದ ಮೊಬೈಲ್ ಸಂಖ್ಯೆಯು ಕೋಲ್ಕತ್ತಾ ನಗರದ್ದೇ ಆಗಿದ್ದು, ತಮ್ಮ ಕುಟುಂಬಕ್ಕೆ ಅಗತ್ಯ ಭದ್ರತೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆರು ತಿಂಗಳಿಂದ ಬರುತ್ತಿದ್ದ ಪತ್ರಗಳು; ಕಡೆಗಣಿಸಿದ್ದ ಕುಟುಂಬ
ಪ್ರಸ್ತುತ ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರಿಗೆ ಕಳೆದ ಆರು ತಿಂಗಳುಗಳಿಂದ ನಿರಂತರವಾಗಿ ಬೆದರಿಕೆ ಪತ್ರಗಳು ಬರುತ್ತಿದ್ದವು. ಆರಂಭದಲ್ಲಿ ಇವುಗಳನ್ನು ಅಭಿಮಾನಿಗಳ ಉತ್ಪ್ರೇಕ್ಷೆಯ ಬರಹಗಳೆಂದು ಭಾವಿಸಿ ಗಂಗೂಲಿ ಕುಟುಂಬ ಮತ್ತು ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಇತ್ತೀಚೆಗೆ ಅವರ ಕಚೇರಿಗೆ ಕೊರಿಯರ್ ಮೂಲಕ ತಲುಪಿದ ಎರಡು ಪತ್ರಗಳಲ್ಲಿ ಸೌರವ್ ಗಂಗೂಲಿ, ಅವರ ಪತ್ನಿ ಡೋನಾ ಗಂಗೂಲಿ ಹಾಗೂ ಅವರ ಆಪ್ತರನ್ನು ಮುಗಿಸುವುದಾಗಿ ನೇರ ಎಚ್ಚರಿಕೆ ನೀಡಲಾಗಿತ್ತು. ಬೆದರಿಕೆಯ ಭಾಷೆ ತೀರಾ ಆಕ್ರಮಣಕಾರಿಯಾಗಿ ಬೆಳೆದ ಹಿನ್ನೆಲೆಯಲ್ಲಿ ಗಂಗೂಲಿ ಅವರ ಮ್ಯಾನೇಜರ್ ದಕ್ಷಿಣ ಕೋಲ್ಕತ್ತಾದ ಠಾಕೂರ್ಪುಕುರ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.
ನಿಗೂಢ ಫೋನ್ ನಂಬರ್
ದೂರು ದಾಖಲಿಸಿಕೊಂಡಿರುವ ಕೋಲ್ಕತ್ತಾ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಬೆದರಿಕೆ ಪತ್ರಗಳು ಕೊರಿಯರ್ ಮೂಲಕ ರವಾನೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಕೊರಿಯರ್ ಪ್ಯಾಕೆಟ್ ಮೇಲೆ ಉತ್ತರ 24 ಪರಗಣ ಜಿಲ್ಲೆಯ ಬೆಲ್ಘರಿಯಾ ನಿವಾಸಿ ಅರುಣ್ ಕುಮಾರ್ ಎಂಬ ಹೆಸರನ್ನು ನಮೂದಿಸಲಾಗಿತ್ತು. ಪತ್ರದಲ್ಲಿ ಉಲ್ಲೇಖಿಸಲಾಗಿದ್ದ ಮೊಬೈಲ್ ಸಂಖ್ಯೆಯನ್ನು ಟ್ರೂಕಾಲರ್ ಹಾಗೂ ಇತರ ತಾಂತ್ರಿಕ ವಿಧಾನಗಳಿಂದ ಪರಿಶೀಲಿಸಿದಾಗಲೂ ಇದೇ ಹೆಸರು ಪತ್ತೆಯಾಗಿದೆ. ಆದರೆ, ನಿಜವಾಗಿಯೂ ಅರುಣ್ ಕುಮಾರ್ ಎಂಬ ವ್ಯಕ್ತಿಯೇ ಈ ಪತ್ರಗಳನ್ನು ಕಳುಹಿಸಿದ್ದಾನೆಯೇ ಅಥವಾ ಗಂಗೂಲಿ ದಂಪತಿಯನ್ನು ಬೆದರಿಸಲು ಬೇರೆ ಯಾರಾದರೂ ಈತನ ಗುರುತನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಿಗಿ ತನಿಖೆ , ಭದ್ರತೆ
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕೋಲ್ಕತ್ತಾ ಪೊಲೀಸರು, ಕೊರಿಯರ್ ಸಂಸ್ಥೆಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಸಿಮ್ ಕಾರ್ಡ್ ಚಲನವಲನದ ಜಾಡು ಹಿಡಿದು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಎಲ್ಲಾ ಪತ್ರಗಳನ್ನು ಒಬ್ಬನೇ ವ್ಯಕ್ತಿ ಕಳುಹಿಸಿದ್ದಾನೆಯೇ ಅಥವಾ ಇದರ ಹಿಂದೆ ಸಂಘಟಿತ ಪಿತೂರಿ ಇದೆಯೇ ಎಂಬ ಕುರಿತೂ ಕೂಲಂಕಷ ಪರಿಶೀಲನೆ ನಡೆಯುತ್ತಿದೆ. ಈ ಮಧ್ಯೆ, ಸೌರವ್ ಗಂಗೂಲಿ ಮತ್ತು ಅವರ ಕುಟುಂಬದ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಭದ್ರತೆಯನ್ನು ಒದಗಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇದನ್ನೂ ಓದಿ : 300 ವಿಕೆಟ್ಗಳ ಕ್ಲಬ್ ಸೇರಿದ ಹೇಜಲ್ವುಡ್: ಬಾಂಗ್ಲಾದೇಶದ ವಿರುದ್ಧ 6 ವಿಕೆಟ್ಗಳ ಸಾಧನೆ ಮೆರೆದ ಆಸಿಸ್ ವೇಗಿ



















