ನವದೆಹಲಿ: ಉಗ್ರ ಪೋಷಿತ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್ ಸಿಂಧೂರಕ್ಕೆ ತಾತ್ಕಾಲಿಕವಾಗಿ ವಿರಾಮ ನೀಡಲಾಗಿದೆ. ಭಾರತದ ಪೆಟ್ಟಿಗೆ ನಿರುತ್ತರವಾದ ಪಾಕಿಸ್ತಾನವು ಅಮೆರಿಕದ ಬಳಿ ಅಂಗಲಾಚಿದ ಕಾರಣ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನವಿರಾಮ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ, ಭಾರತವು ಏಪ್ರಿಲ್ 7ರಂದು ರಾತ್ರಿ ಹೇಗೆ 23 ನಿಮಿಷಗಳಲ್ಲೇ ಪಾಕಿಸ್ತಾನದ ಮೇಲೆ ದಾಳಿ ಮಾಡಿತು ಎಂಬ ಸಂಗತಿ ಬಯಲಾಗಿದೆ.
ಹೌದು, ಆಪರೇಷನ್ ಸಿಂಧೂರದ ಕುರಿತು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಏಪ್ರಿಲ್ 7ರಂದು ಭಾರತವು ಕೇವಲ 23 ನಿಮಿಷಗಳಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ವಾಯುದಾಳಿ ಮಾಡಿತು. ಇದಕ್ಕಾಗಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಸ್ಥಗಿತಗೊಳಿಸಿತ್ತು. ಇದಾದ ನಂತರವೇ ಭಾರತವು ಎಲ್ಒಸಿ ದಾಟಿ ದಾಳಿ ಮಾಡಿತು ಎಂದು ಸರ್ಕಾರವೇ ಮಾಹಿತಿ ನೀಡಿದೆ.
ಪಾಕಿಸ್ತಾನಕ್ಕೆ ಚೀನಾ ನೀಡಿದ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಭಾರತವು ಜಾಮ್ ಮಾಡಿತ್ತು ಎಂಬುದೇ ಈಗ ಗಮನಾರ್ಹ ಸಂಗತಿಯಾಗಿದೆ. ಕೇವಲ 23 ನಿಮಿಷಗಳಲ್ಲೇ ಭಾರತದ ಆಕಾಶ್ ಕ್ಷಿಪಣಿಗಳು ಹಾಗೂ ಆತ್ಮಾಹುತಿ ಡ್ರೋನ್ ಗಳು ಪಾಕಿಸ್ತಾನಕ್ಕೆ ನುಗ್ಗಿ, ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದವು ಎಂದು ಸರ್ಕಾರ ತಿಳಿಸಿದೆ.
ಏಪ್ರಿಲ್ 22ರಂದು ಪಾಕಿಸ್ತಾನದ ಉಗ್ರರು ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ್ದರು. ಇದರಿಂದಾಗಿ ಇಬ್ಬರು ವಿದೇಶಿಯರು ಸೇರಿ ಒಟ್ಟು 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಮೇಲೆ ವಾಯು ದಾಳಿ ನಡೆಸಿದೆ. ಅಲ್ಲದೆ, ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿಗಳನ್ನು ವಿಫಲಗೊಳಿಸುವಲ್ಲಿ ಭಾರತದ ಎಸ್-400 ಏರ್ ಡಿಫೆನ್ಸ್ ವ್ಯವಸ್ಥೆಯೂ ಸಫಲವಾಗಿದೆ. ಇದರಿಂದಾಗಿ ತತ್ತರಿಸಿದ ಪಾಕಿಸ್ತಾನವು ಮಧ್ಯಸ್ಥಿಕೆಗಾಗಿ ಅಮೆರಿಕವನ್ನು ಅಂಗಲಾಚಿತ್ತು.



















