ನವದೆಹಲಿ : ಜಮ್ಮುವಿನ ತಾವಿಯಿಂದ ಶ್ರೀನಗರಕ್ಕೆ ವಿಸ್ತರಿಸಲಾದ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಗುರುವಾರ (ಏ.30) ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಿದ್ದಾರೆ. ಆದರೆ, ಈ ಉದ್ಘಾಟನಾ ಸಮಾರಂಭದ ವೇಳೆ ಜಮ್ಮು ರೈಲು ನಿಲ್ದಾಣದಲ್ಲಿ ಕಂಡುಬಂದ ದೃಶ್ಯವೊಂದು ಇದೀಗ ಎಲ್ಲರ ಗಮನ ಸೆಳೆದಿದೆ.
ಕಪ್ಪು ಸಮವಸ್ತ್ರ, ಟ್ಯಾಕ್ಟಿಕಲ್ ವೆಸ್ಟ್ ಮತ್ತು ಹೆಲ್ಮೆಟ್ ಧರಿಸಿದ್ದ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜಾಗಿದ್ದ ಕಮಾಂಡೋಗಳು ರೈಲಿಗೆ ಬಿಗಿ ಭದ್ರತೆ ಒದಗಿಸಿದ್ದರು. ಇವರು ಸಿಆರ್ಪಿಎಫ್, ಸಿಐಎಸ್ಎಫ್ ಅಥವಾ ಎನ್ಎಸ್ಜಿಯಂತಹ ಚಿರಪರಿಚಿತ ಪಡೆಗಳ ಸಿಬ್ಬಂದಿಯಲ್ಲ. ಬದಲಾಗಿ, ರೈಲ್ವೆ ಭದ್ರತೆಗಾಗಿಯೇ ಮೀಸಲಾದ ‘ಕೋರಸ್’ (CORAS – Commandos for Railway Security) ಪಡೆಯ ವಿಶೇಷ ಕಮಾಂಡೋಗಳಾಗಿದ್ದಾರೆ.
ಏನಿದು ಕೋರಸ್ ಪಡೆ?
ರೈಲ್ವೆ ಆಸ್ತಿ ಮತ್ತು ಪ್ರಯಾಣಿಕರ ರಕ್ಷಣೆಗಾಗಿ 2019ರ ಆಗಸ್ಟ್ನಲ್ಲಿ ‘ಕೋರಸ್’ ಪಡೆಯನ್ನು ಸ್ಥಾಪಿಸಲಾಯಿತು. ಇದು ರೈಲ್ವೆ ಸಂರಕ್ಷಣಾ ಪಡೆಯ (RPF) ಮತ್ತು ರೈಲ್ವೆ ವಿಶೇಷ ಸಂರಕ್ಷಣಾ ಪಡೆಯ (RPSF) ಒಂದು ಎಲೈಟ್ ವಿಭಾಗವಾಗಿದೆ. ವಿಶೇಷವಾಗಿ ನಕ್ಸಲ್ ಪೀಡಿತ ಮತ್ತು ಉಗ್ರರ ಹಾವಳಿ ಇರುವ ಪ್ರದೇಶಗಳಲ್ಲಿ ರೈಲುಗಳು ಹಾಗೂ ರೈಲ್ವೆ ಮೂಲಸೌಕರ್ಯಗಳನ್ನು ರಕ್ಷಿಸಲು ಈ ಪಡೆಯನ್ನು ರಚಿಸಲಾಗಿದೆ. ಪ್ರಸ್ತುತ, 327 ಕಿ.ಮೀ ಉದ್ದದ ಜಮ್ಮು-ಕಟ್ರಾ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗದಲ್ಲಿ ಬಹು-ಹಂತದ ಭದ್ರತೆಯ ಭಾಗವಾಗಿ 21 ಭದ್ರತಾ ಸಿಬ್ಬಂದಿಯೊಂದಿಗೆ ಈ ಕೋರಸ್ ಕಮಾಂಡೋಗಳನ್ನು ವಂದೇ ಭಾರತ್ ಎಕ್ಸ್ಪ್ರೆಸ್ನ ಕಾವಲಿಗೆ ನಿಯೋಜಿಸಲಾಗಿದೆ.
ಎನ್ಎಸ್ಜಿ, ಗ್ರೇಹೌಂಡ್ಸ್ನಿಂದ ಕಠಿಣ ತರಬೇತಿ
ಕೋರಸ್ ಕಮಾಂಡೋಗಳು ಸಾಮಾನ್ಯ ಭದ್ರತಾ ಸಿಬ್ಬಂದಿಯಲ್ಲ. ಇವರು ಆರ್ಪಿಎಫ್ನಿಂದ ಸ್ವಯಂಪ್ರೇರಿತವಾಗಿ ಬಂದವರಾಗಿದ್ದು, ಹರ್ಯಾಣದ ಮಾನೇಸರ್ನಲ್ಲಿರುವ ಎನ್ಎಸ್ಜಿ (NSG) ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿ ಪಡೆದಿದ್ದಾರೆ. ಇದರ ಜೊತೆಗೆ, ಆಂಧ್ರಪ್ರದೇಶ ಮತ್ತು ತೆಲಂಗಾಣದ ನಕ್ಸಲ್ ನಿಗ್ರಹ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿರುವ ವಿಶೇಷ ಪೊಲೀಸ್ ಪಡೆಯಾದ ‘ಗ್ರೇಹೌಂಡ್ಸ್’ ಜೊತೆಯೂ ಇವರು ತರಬೇತಿ ಪಡೆದುಕೊಂಡಿದ್ದಾರೆ. ನೆಲಬಾಂಬ್ಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು (IED) ನಿಷ್ಕ್ರಿಯಗೊಳಿಸುವುದು, ಒತ್ತೆಯಾಳುಗಳ ರಕ್ಷಣೆ, ಸ್ನೈಪಿಂಗ್ ಮುಂತಾದ ಅತ್ಯಾಧುನಿಕ ಕಾರ್ಯಾಚರಣೆಗಳಲ್ಲಿ ಇವರು ವಿಶೇಷ ಪರಿಣತಿ ಸಾಧಿಸಿದ್ದಾರೆ. ಈ ಹಿಂದೆ ನಕ್ಸಲ್ ಪೀಡಿತ ಛತ್ತೀಸ್ಗಢದಲ್ಲಿ ಮೊದಲ ಬಾರಿಗೆ ಇವರನ್ನು ನಿಯೋಜಿಸಲಾಗಿತ್ತು. ಜೊತೆಗೆ ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ಮಣಿಪುರದಲ್ಲಿಯೂ ಇವರ ಸೇವೆ ಲಭ್ಯವಿದೆ.
ಪಡೆಯ ಸಂರಚನೆ ಮತ್ತು ನಿಯೋಜನೆ
ಈ ವಿಶೇಷ ಪಡೆಯು ಈ ಹಿಂದೆ ಆರ್ಪಿಎಸ್ಎಫ್ನ 9ನೇ ಬೆಟಾಲಿಯನ್ ಆಗಿತ್ತು. ಇದು ಐದು ಕಂಪನಿಗಳು ಮತ್ತು ಒಂದು ಪ್ರಧಾನ ಕಚೇರಿ (HQ) ಕಂಪನಿಯನ್ನು ಒಳಗೊಂಡಿದೆ. ಎಡಪಂಥೀಯ ಉಗ್ರವಾದ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಪ್ರಮುಖ ರೈಲ್ವೆ ಯೋಜನೆಗಳ ರಕ್ಷಣೆಯ ಉದ್ದೇಶದಿಂದಲೇ ಈ ಬೆಟಾಲಿಯನ್ ಅನ್ನು ಸಜ್ಜುಗೊಳಿಸಲಾಗಿದೆ. ಈ ಪಡೆಯಲ್ಲಿ ಐಜಿ, ಡಿಐಜಿ ಮಟ್ಟದಿಂದ ಹಿಡಿದು ಕಾನ್ಸ್ಟೇಬಲ್ಗಳವರೆಗೆ ಒಟ್ಟು 716 ಸಿಬ್ಬಂದಿಯಿದ್ದು, ಪ್ರಸ್ತುತ 659 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಕ್ಷಿಣ ಪೂರ್ವ ರೈಲ್ವೆಯ ಚಕ್ರಧರಪುರ (ಕೋರಸ್-1), ಈಸ್ಟ್ ಕೋಸ್ಟ್ ರೈಲ್ವೆಯ ವಾಲ್ಟೇರ್ ವಿಭಾಗದ ಬಚೇಲಿ ಮತ್ತು ಭಾನ್ಸಿ (ಕೋರಸ್-2, ಕೋರಸ್-3) ಹಾಗೂ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ (ಕೋರಸ್-4) ಇವರನ್ನು ನಿಯೋಜಿಸಲಾಗಿದೆ. ಕೋರಸ್-5 ತುಕಡಿಯು ಪ್ರಸ್ತುತ ಜಗಧ್ರಿಯಲ್ಲಿರುವ ಪ್ರಧಾನ ಕಚೇರಿಯಲ್ಲಿ ತರಬೇತಿ ಪಡೆಯುತ್ತಿದೆ. ಇದೀಗ ಜಮ್ಮು-ಕಾಶ್ಮೀರದ ವಂದೇ ಭಾರತ್ ರೈಲಿನ ಭದ್ರತೆಯ ಹೊಣೆಯನ್ನೂ ಈ ಎಲೈಟ್ ಪಡೆಗೆ ವಹಿಸುವ ಮೂಲಕ, ಭದ್ರತಾ ಸವಾಲುಗಳಿರುವ ಕಣಿವೆ ರಾಜ್ಯದಲ್ಲಿ ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಇಲಾಖೆ ಆದ್ಯತೆ ನೀಡಿದೆ.
ಇದನ್ನೂ ಓದಿ : ಹೊಸ LPG ನಿಯಮ ಜಾರಿ : ಉಭಯ ಸಂಪರ್ಕ ರದ್ದು, ಒಟಿಪಿ ಕಡ್ಡಾಯ!



















