ಕೋಲ್ಕತ್ತಾ : ರಾಜಕೀಯ ಅಭಿಮಾನ ಮತ್ತು ವಿಚಿತ್ರ ವಿಚಿತ್ರ ಶಪಥಗಳು ಕೆಲವೊಮ್ಮೆ ಎಲ್ಲರನ್ನೂ ಬೆರಗುಗೊಳಿಸುತ್ತವೆ. ಪಶ್ಚಿಮ ಬಂಗಾಳದ ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶವು ರಾಜಕೀಯ ಬದಲಾವಣೆಯನ್ನು ತರುವ ಜೊತೆಗೆ, ವ್ಯಕ್ತಿಯೊಬ್ಬನ 15 ವರ್ಷಗಳ ಸುದೀರ್ಘ ‘ಕೇಶಮುಂಡನ ಮಾಡದ’ ಶಪಥಕ್ಕೂ ಅಂತ್ಯ ಹಾಡಿದೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ, ಬಮಾನಪಾರ ಗ್ರಾಮದ ನಿವಾಸಿ ಬನೇಶ್ವರ್ ಬರ್ಮನ್ ತಮ್ಮ ತಲೆ ಕೂದಲನ್ನು ಕ್ಷೌರ ಮಾಡಿಸಿಕೊಳ್ಳುವ ಮೂಲಕ ಹರಕೆ ತೀರಿಸಿದ್ದಾರೆ.
2011ರಲ್ಲಿ ಮಾಡಿದ್ದ ಶಪಥವೇನು?
ಪಶ್ಚಿಮ ಬಂಗಾಳದಲ್ಲಿ 2011ರಲ್ಲಿ ಸಿಪಿಎಂ ಸುದೀರ್ಘ ಆಡಳಿತವನ್ನು ಅಂತ್ಯಗೊಳಿಸಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದಾಗ, ಅವರ ಆಡಳಿತವನ್ನು ವಿರೋಧಿಸಿದ್ದ ಬಿಜೆಪಿ ಬೆಂಬಲಿಗ ಬನೇಶ್ವರ್ ಬರ್ಮನ್ ಒಂದು ಕಠಿಣ ನಿರ್ಧಾರ ಕೈಗೊಂಡಿದ್ದರು. “ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವವರೆಗೂ ನಾನು ನನ್ನ ಕೂದಲನ್ನು ಕತ್ತರಿಸುವುದಿಲ್ಲ” ಎಂದು ಅವರು ಶಪಥ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಬರೋಬ್ಬರಿ 15 ವರ್ಷಗಳ ಕಾಲ ಅವರು ತಮ್ಮ ಕೂದಲಿಗೆ ಕತ್ತರಿ ಹಚ್ಚಿರಲಿಲ್ಲ.
ಐತಿಹಾಸಿಕ ಫಲಿತಾಂಶದ ಬೆನ್ನಲ್ಲೇ ಶಪಥ ಪೂರೈಕೆ
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಐತಿಹಾಸಿಕ ವಿಜಯ ಸಾಧಿಸುತ್ತಿದ್ದಂತೆ ಬರ್ಮನ್ ಅವರ ಈ ಹಳೆಯ ಶಪಥ ಮುನ್ನೆಲೆಗೆ ಬಂದಿದೆ. ಟಿಎಂಸಿ ಪಕ್ಷವು ಕೇವಲ 80 ಸ್ಥಾನಗಳಿಗೆ ಕುಸಿದು, ಸ್ವತಃ ಮಮತಾ ಬ್ಯಾನರ್ಜಿ ಅವರೇ ಭವಾನಿಪುರ ಕ್ಷೇತ್ರದಲ್ಲಿ ಸೋಲು ಕಂಡಿರುವುದು ಬರ್ಮನ್ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಹೀಗಾಗಿ ಸ್ಥಳೀಯ ಕ್ಷೌರದ ಅಂಗಡಿಗೆ ತೆರಳಿದ ಅವರು, ಹದಿನೈದು ವರ್ಷಗಳಿಂದ ಬೆಳೆಸಿದ್ದ ತಮ್ಮ ಜಡೆಯನ್ನು ತೆಗೆಸಿ ಸಂಪೂರ್ಣ ಕ್ಷೌರ ಮಾಡಿಸಿಕೊಂಡಿದ್ದಾರೆ.
ಸಂಭ್ರಮಿಸಿದ ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರು
ಬರ್ಮನ್ ಕ್ಷೌರ ಮಾಡಿಸಿಕೊಳ್ಳುವ ದೃಶ್ಯವನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು. “ಇದು ಕೇವಲ ಕೇಶಮುಂಡನವಲ್ಲ, ಇದು ಬಂಗಾಳದ ರಾಜಕೀಯ ಬದಲಾವಣೆಯ ಸಂಕೇತ” ಎಂದು ಕಾರ್ಯಕರ್ತರು ಬಣ್ಣಿಸಿದ್ದಾರೆ. ಬನೇಶ್ವರ್ ಬರ್ಮನ್ ಅವರ ಈ ವಿಚಿತ್ರ ಶಪಥ ಮತ್ತು ಅದನ್ನು ಪೂರೈಸಿದ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ರಾಜಕೀಯ ಬದ್ಧತೆಗೆ ಇದು ಸಾಕ್ಷಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ದೆಹಲಿಯ ಐತಿಹಾಸಿಕ ದೇಗುಲದ ಮೇಲೆ ದಾಳಿಗೆ ಸಂಚು : ISI ಬೆಂಬಲಿತ ಉಗ್ರರ ಭೀಕರ ಪ್ಲಾನ್ ಬಯಲು!



















