ಕೋಲ್ಕತ್ತಾ : ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಬಂಧಿಸಿರುವ ನುಸುಳುಕೋರನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಪಶ್ಚಿಮ ಬಂಗಾಳದ ಜಲ್ಪಾಯ್ಗುರಿ ಜಿಲ್ಲೆಯ 35 ವರ್ಷದ ಚಹಾ ತೋಟದ ರೈತನನ್ನು ಬಾಂಗ್ಲಾದೇಶದ ಪ್ರಜೆಗಳು ಅಪಹರಿಸಿ ಗಡಿ ದಾಟಿಸಿಕೊಂಡು ಹೋಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಜಲ್ಪಾಯ್ಗುರಿಯ ಚೌಲ್ಹಟಿ ಗಡಿ ಚೌಕಿಯ ಮುಳ್ಳುತಂತಿಯ ಬೇಲಿಯಿಂದ ಕೇವಲ 150 ಗಜಗಳಷ್ಟು ದೂರದಲ್ಲಿರುವ ತಸರ್ ಪಾರಾ ಗ್ರಾಮದಲ್ಲಿ ದೀಪಂಕರ್ ಗೋಪ್ ಎಂಬ ರೈತ ತಮ್ಮ ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸುಮಾರು 20 ಜನರಿದ್ದ ಬಾಂಗ್ಲಾದೇಶಿ ಪ್ರಜೆಗಳ ಗುಂಪು ಏಕಾಏಕಿ ದಾಳಿ ನಡೆಸಿ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ. ಬಳಿಕ ಅವರನ್ನು ಅಂತಾರಾಷ್ಟ್ರೀಯ ಗಡಿ ದಾಟಿಸಿ ಬಾಂಗ್ಲಾದೇಶದ ಪಂಚಗಢ ಜಿಲ್ಲೆಗೆ ಕರೆದೊಯ್ದು, ಗಡಿ ರಕ್ಷಣಾ ಪಡೆ (ಬಿಜಿಬಿ) ವಶಕ್ಕೆ ಒಪ್ಪಿಸಲಾಗಿದೆ ಎಂದು ದೀಪಂಕರ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರತೀಕಾರದ ಹಿಂದಿನ ಕಾರಣವೇನು?
ಕಳೆದ ಗುರುವಾರ ಚೌಲ್ಹಟಿ ಗಡಿಯ ಬಳಿ ಮುಳ್ಳುತಂತಿಯನ್ನು ಕತ್ತರಿಸಿ ಭಾರತದೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಬಾಂಗ್ಲಾದೇಶದ ತಮೀಜ್ ಉದ್ದೀನ್ ಎಂಬಾತನನ್ನು ಬಿಎಸ್ಎಫ್ ಸಿಬ್ಬಂದಿ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಈತ ಗಡಿ ಸಾಗಾಣಿಕೆ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಬಂಧನಕ್ಕೆ ಪ್ರತೀಕಾರವಾಗಿಯೇ ದೀಪಂಕರ್ ಗೋಪ್ ಅವರನ್ನು ಅಪಹರಿಸಲಾಗಿದೆ. ಈ ಮಧ್ಯೆ, ಜಾಲತಾಣಗಳಲ್ಲಿ ವಿಡಿಯೋ ಒಂದೂ ಹರಿದಾಡುತ್ತಿದ್ದು, ಅದರಲ್ಲಿ ದೀಪಂಕರ್ ಗೋಪ್ ಅವರು ಸಂಕಷ್ಟದಲ್ಲಿ ಮಾತನಾಡುವುದು ಕಂಡುಬಂದಿದೆ. ಬಿಎಸ್ಎಫ್ ಬಂಧಿಸಿರುವ ತಮೀಜ್ ಉದ್ದೀನ್ನನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದರೆ ಮಾತ್ರ ತಮ್ಮನ್ನು ಬಿಡುವುದಾಗಿ ಅಪಹರಣಕಾರರು ಹೇಳುತ್ತಿದ್ದಾರೆ ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ವೇಳೆ ಸ್ಥಳೀಯ ಗ್ರಾಮಸ್ಥರೊಂದಿಗೆ ಬಾಂಗ್ಲಾದೇಶ ಗಡಿ ರಕ್ಷಣಾ ಪಡೆಯ (ಬಿಜಿಬಿ) ಸಿಬ್ಬಂದಿಯೂ ನಿಂತಿರುವುದು ಕಂಡುಬಂದಿದೆ.
ಗಡಿಯಲ್ಲಿ ಆತಂಕ, ಭದ್ರತಾ ಪಡೆಗಳಿಂದ ಫ್ಲ್ಯಾಗ್ ಮೀಟಿಂಗ್
ದೀಪಂಕರ್ ಗೋಪ್ ಪ್ರಸ್ತುತ ಬಾಂಗ್ಲಾದೇಶ ಗಡಿ ರಕ್ಷಣಾ ಪಡೆಯ ವಶದಲ್ಲಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸಕ್ರಿಯವಾಗಿರುವ ಬಿಎಸ್ಎಫ್, ರೈತನ ಸುರಕ್ಷಿತ ಬಿಡುಗಡೆಗಾಗಿ ಶನಿವಾರ ಸಂಜೆ ಬಾಂಗ್ಲಾ ಪಡೆಗಳೊಂದಿಗೆ ‘ಫ್ಲ್ಯಾಗ್ ಮೀಟಿಂಗ್’ (ಧ್ವಜ ಸಭೆ) ನಡೆಸಿದೆ. ಬಿಎಸ್ಎಫ್ ಅಧಿಕಾರಿಗಳು ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದೀಪಂಕರ್ ಅವರನ್ನು ತಕ್ಷಣವೇ ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸುತ್ತಿದ್ದಾರೆ.
ಈ ಘಟನೆಯಿಂದಾಗಿ ಗಡಿಭಾಗದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗಡಿ ಬೇಲಿಯ ಸಮೀಪದಲ್ಲೇ ಕೆಲಸ ಮಾಡುವ ಭಾರತೀಯ ನಾಗರಿಕರನ್ನೇ ಈ ರೀತಿ ಅಪಹರಿಸಿದರೆ ಭದ್ರತೆಯ ಗತಿಯೇನು ಎಂದು ಸ್ಥಳೀಯ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಘಟನೆಯ ಬೆನ್ನಲ್ಲೇ ಬಿಎಸ್ಎಫ್ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.
ಇದನ್ನೂ ಓದಿ : ಸಚಿವ ಬಾಲಕೃಷ್ಣ ಪತ್ನಿ ಹೆಸರಿಗೆ 100 ಕೋಟಿ ಮೌಲ್ಯದ ಸರ್ಕಾರಿ ಜಮೀನು? ; ‘ಲೋಕಾ’ಗೆ N.R. ರಮೇಶ್ ದೂರು!


















