ಕೋಲ್ಕತ್ತಾ ; ಬಂಗಾಳದ ರಾಜಕೀಯ ಅಖಾಡದಲ್ಲಿ ಮಮತಾ ವಿರುದ್ಧ ತೊಡೆತಟ್ಟಿ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಖ್ಯಾತಿ ಪಡೆಯಲು ಸುವೇಂದು ಅಧಿಕಾರಿ ಅವರು ಸಜ್ಜಾಗುತ್ತಿದ್ದಂತೆಯೇ ಅವರಿಗೆ ಅವರ ಆಪ್ತ ಚಂದ್ರನಾಥ್ ಅವರ ಹತ್ಯೆ ಭಾರೀ ಆಘಾತವನ್ನು ತಂದೊಡ್ಡಿದೆ. ಜೊತೆಗೆ ಈ ಕೃತ್ಯವು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಅಂದ ಹಾಗೆ ಈ ಚಂದ್ರನಾಥ್ ಯಾರು ಎಂಬ ಮಾಹಿತಿ ಇಲ್ಲಿದೆ.
ಚಂದ್ರನಾಥ್ ರಥ್ ಅವರ ವಯಸ್ಸು ಕೇವಲ 41 ವರ್ಷ. ದೇಶದ ಗಡಿ ಕಾಯುವ ವಾಯುಪಡೆಯಿಂದ ಹಿಡಿದು, ಬಂಗಾಳದ ರಾಜಕೀಯದ ಅತ್ಯಂತ ಸಂಕೀರ್ಣ ಕಾರ್ಯತಂತ್ರಗಳನ್ನು ರೂಪಿಸುವ ಹಂತದವರೆಗೆ ಅವರು ನಡೆದುಬಂದ ಹಾದಿ ಕುತೂಹಲಕಾರಿಯಾಗಿದೆ.
ವಾಯುಸೇನೆಯ ನಿವೃತ್ತಿ ಮತ್ತು ಆಧ್ಯಾತ್ಮದ ಸೆಳೆತ
ಮೂಲತಃ ಪೂರ್ವ ಮಿಡ್ನಾಪುರದ ಚಂಡೀಪುರದವರಾದ ಚಂದ್ರನಾಥ್, ರಹರಾ ರಾಮಕೃಷ್ಣ ಮಿಷನ್ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ರಾಮಕೃಷ್ಣ ಮಿಷನ್ನ ತತ್ವಗಳಿಂದ ಪ್ರಭಾವಿತರಾಗಿದ್ದ ಅವರು, ಒಂದು ಹಂತದಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಪದಾರ್ಪಣೆ ಮಾಡುವ ಆಲೋಚನೆಯನ್ನೂ ಮಾಡಿದ್ದರು. ಆದರೆ, ದೇಶಸೇವೆಯ ಹಂಬಲದಿಂದ ಭಾರತೀಯ ವಾಯುಸೇನೆಯನ್ನು (IAF) ಸೇರಿದ ಅವರು ಸುಮಾರು ಎರಡು ದಶಕಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದರು. ವಾಯುಸೇನೆಯಿಂದ ಸ್ವಯಂ ನಿವೃತ್ತಿ ಪಡೆದ ನಂತರ, ಸ್ವಲ್ಪ ಕಾಲ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿ, ಬಳಿಕ ಸುವೇಂದು ಅಧಿಕಾರಿ ಅವರ ಆಪ್ತ ವಲಯಕ್ಕೆ ಸೇರ್ಪಡೆಯಾದರು.ʼ
ಸುವೇಂದು ಅಧಿಕಾರಿ ಅವರ ವಿಶ್ವಾಸಾರ್ಹ ಶಕ್ತಿ
ಚಂದ್ರನಾಥ್ ಅವರ ಕುಟುಂಬ ಮತ್ತು ಸುವೇಂದು ಅವರ ಕುಟುಂಬದ ನಡುವೆ ಎರಡು ದಶಕಗಳಿಗೂ ಹೆಚ್ಚಿನ ಅವಧಿಯ ಒಡನಾಟವಿದೆ. ಚಂದ್ರನಾಥ್ ಅವರ ತಾಯಿ ಹಸಿ ರಥ್ ಅವರು ಈ ಹಿಂದೆ ತೃಣಮೂಲ ಕಾಂಗ್ರೆಸ್ನಲ್ಲಿದ್ದಾಗ ಪಂಚಾಯತ್ ಸದಸ್ಯರಾಗಿಯೂ ಕೆಲಸ ಮಾಡಿದ್ದರು. 2020ರಲ್ಲಿ ಸುವೇಂದು ಅಧಿಕಾರಿ ಬಿಜೆಪಿಗೆ ಸೇರಿದಾಗ ಇಡೀ ರಥ್ ಕುಟುಂಬ ಕೂಡ ಕೇಸರಿ ಪಾಳಯಕ್ಕೆ ಸೇರಿತು. ಸುವೇಂದು ಅವರು ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿದ್ದ ಕಾಲದಿಂದಲೂ ಚಂದ್ರನಾಥ್ ಅವರ ಅಧಿಕೃತ ತಂಡದ ಭಾಗವಾಗಿದ್ದರು. ಸೌಮ್ಯ ಸ್ವಭಾವದ, ಸದಾ ತೆರೆಯ ಮರೆಯಲ್ಲೇ ಕೆಲಸ ಮಾಡುತ್ತಿದ್ದ ಇವರು, ಸುವೇಂದು ಅವರ ರಾಜಕೀಯ ಸಂಘಟನೆ, ಚುನಾವಣೆ ನಿರ್ವಹಣೆ ಮತ್ತು ಪಕ್ಷದ ಕಾರ್ಯಕರ್ತರ ನಡುವಿನ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು.
ಕೊನೆಗೊಂಡ ಆಡಳಿತಾತ್ಮಕ ಭವಿಷ್ಯದ ಕನಸು
ಬಿಜೆಪಿಯ ಒಳಗಿನ ಮೂಲಗಳ ಪ್ರಕಾರ, ಚಂದ್ರನಾಥ್ ರಥ್ ಅವರು ಕೇವಲ ಒಬ್ಬ ಸಹಾಯಕರಾಗಿರದೆ, ಸುವೇಂದು ಅವರ ಪ್ರತಿಯೊಂದು ಮಹತ್ವದ ನಿರ್ಧಾರಗಳಲ್ಲೂ ಪಾಲುದಾರರಾಗಿದ್ದರು. ಭವಾನಿಪುರ ಉಪಚುನಾವಣೆ ಸೇರಿದಂತೆ ಹಲವು ಪ್ರಮುಖ ರಾಜಕೀಯ ಯುದ್ಧಗಳಲ್ಲಿ ಅವರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದರು.
ಒಂದು ವೇಳೆ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಥವಾ ಸುವೇಂದು ಅವರಿಗೆ ದೊಡ್ಡ ಜವಾಬ್ದಾರಿ ಸಿಕ್ಕರೆ, ಚಂದ್ರನಾಥ್ ಅವರಿಗೆ ಪ್ರಮುಖ ಆಡಳಿತಾತ್ಮಕ ಹೊಣೆಗಾರಿಕೆ ಸಿಗಲಿದೆ ಎಂಬ ಚರ್ಚೆಗಳು ಪಕ್ಷದ ವಲಯದಲ್ಲಿ ದಟ್ಟವಾಗಿದ್ದವು. ಆದರೆ ಬುಧವಾರ ರಾತ್ರಿ ನಡೆದ ಭೀಕರ ದಾಳಿಯು ಈ ಎಲ್ಲ ನಿರೀಕ್ಷೆಗಳನ್ನು ಮತ್ತು ಚಂದ್ರನಾಥ್ ಅವರ ಜೀವನವನ್ನು ಅಂತ್ಯಗೊಳಿಸಿದೆ. ಚಂದ್ರನಾಥ್ ಅವರ ಹತ್ಯೆಯು ಕೇವಲ ಒಬ್ಬ ವ್ಯಕ್ತಿಯ ಕೊಲೆಯಲ್ಲ, ಬದಲಾಗಿ ಈ ಹತ್ಯೆಯ ಮೂಲಕ ಸುವೇಂದು ಅಧಿಕಾರಿ ಅವರ ರಾಜಕೀಯ ಶಕ್ತಿಯ ಒಂದು ಪ್ರಮುಖ ಸ್ತಂಭವನ್ನೇ ಹಂತಕರು ಉರುಳಿಸಿದ್ದಾರೆ.
ಇದನ್ನೂ ಓದಿ : ಮದುಮಗಳಿಗೆ ಹಾಕಬೇಕಿದ್ದ ತಾಳಿಯನ್ನೇ ಕದ್ದು ಪರಾರಿಯಾದ ಖದೀಮ!



















