ನವದೆಹಲಿ : ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ಸುಧಾರಕ ಹಾಗೂ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ.
ಜಂತರ್ ಮಂತರ್ನಲ್ಲಿ ಕಳೆದ 18 ದಿನಗಳಿಂದ ನಿರಂತರ ಉಪವಾಸ ನಡೆಸುತ್ತಿರುವ ಅವರ ಜೀವ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ಗೆ ತುರ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಬಲವಂತವಾಗಿ ಆಹಾರ ನೀಡುವಂತೆ (Force-Feeding) ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಲಾಗಿದೆ.
ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ರಾಕೇಶ್ ಕುಮಾರ್ ಸೈನಿ ಅವರು ಸಲ್ಲಿಸಿರುವ ಅರ್ಜಿಯ ಪ್ರಕಾರ, ವಾಂಗ್ಚುಕ್ ಅವರು ಉಪವಾಸ ಮುಂದುವರಿಸಿದರೆ ಮುಂದಿನ ಎರಡು ದಿನಗಳಲ್ಲಿ ಅವರ ಜೀವಕ್ಕೆ ತೀವ್ರ ಅಪಾಯ ಎದುರಾಗಲಿದೆ. ಇತ್ತೀಚಿನ ವೈದ್ಯಕೀಯ ವರದಿಗಳ ಪ್ರಕಾರ, ‘3 ಈಡಿಯಟ್ಸ್’ ಚಿತ್ರದ ಫುನ್ಸುಖ್ ವಾಂಗ್ಡು ಪಾತ್ರಕ್ಕೆ ಸ್ಫೂರ್ತಿಯಾಗಿದ್ದ ಲಡಾಖ್ ಮೂಲದ ಈ ಇಂಜಿನಿಯರ್ ಈಗಾಗಲೇ 8.5 ಕೆಜಿ ತೂಕ ಕಳೆದುಕೊಂಡಿದ್ದು, ಅವರ ರಕ್ತದೊತ್ತಡವು (BP) 109/70ಕ್ಕೆ ಕುಸಿದಿದೆ. ದೇಶ ಮತ್ತು ಜಗತ್ತಿಗೆ ಮಾದರಿಯಾಗಿರುವ ಇಂತಹ ವ್ಯಕ್ತಿಯ ಜೀವಕ್ಕೆ ಹಾನಿಯಾದರೆ ಅದು ಇಡೀ ದೇಶಕ್ಕೇ ದೊಡ್ಡ ಅವಮಾನ ತರಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ದ್ರವರೂಪದ ಪೋಷಕಾಂಶ ಹಾಗೂ ಜೀವಸತ್ವಗಳನ್ನು ನೀಡುವ ಮೂಲಕ ಅವರ ಪ್ರಾಣ ಉಳಿಸಬೇಕೆಂದು ವಿನಂತಿಸಲಾಗಿದೆ.
ಪ್ರತಿಭಟನೆಯ ಹಿನ್ನೆಲೆಯೇನು?
ಕಳೆದ ಜೂನ್ 28ರಿಂದ ಅಮರಣಾಂತ ಉಪವಾಸ ಕೈಗೊಂಡಿರುವ ಸೋನಮ್ ವಾಂಗ್ಚುಕ್ ಅವರಿಗೆ ಶಿಕ್ಷಣ ತಜ್ಞರು, ವಿರೋಧ ಪಕ್ಷದ ನಾಯಕರು ಹಾಗೂ ಚಲನಚಿತ್ರ ರಂಗದಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಘಟಿಸಿರುವ ಈ ಪ್ರತಿಭಟನೆಯ ಪ್ರಮುಖ ಬೇಡಿಕೆ ಎಂದರೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸಮಗ್ರ ಶಿಕ್ಷಣ ಸುಧಾರಣೆ ತರುವುದು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ಕೂಡ ಸಿಜೆಪಿ ಬೇಡಿಕೆಗಳ ಪಟ್ಟಿಯಲ್ಲಿ ಸೇರಿವೆ.
ಸರ್ಕಾರದ ದಿವ್ಯ ಮೌನ
ಉಪವಾಸ ಸತ್ಯಾಗ್ರಹ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದೆ. ಕನಿಷ್ಠಪಕ್ಷ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್ಚುಕ್ ಹಾಗೂ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಅಳಲನ್ನು ಕೇಳುವ ಸೌಜನ್ಯವನ್ನೂ ತೋರಿಸಿಲ್ಲ. ತೀವ್ರ ನಿಶ್ಯಕ್ತಿಯಿಂದಾಗಿ ವಾಂಗ್ಚುಕ್ ಅವರಿಗೆ ಕನಿಷ್ಠ ನಿಲ್ಲಲು ಅಥವಾ ಶೌಚಾಲಯಕ್ಕೆ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆಪ್ತರು ತಿಳಿಸಿದ್ದಾರೆ. ವಿಡಿಯೋ ಸಂದೇಶವೊಂದರಲ್ಲಿ ಮಾತನಾಡಿರುವ ವಾಂಗ್ಚುಕ್, ನಾನು ಗಾಂಧಿಯಾಗಲೀ ಅಥವಾ ಹೀರೋ ಆಗಲೀ ಅಲ್ಲ, ಸಾಮಾನ್ಯ ಪ್ರಜೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಿಮಗೆ ನೀವೇ ಹೀರೋಗಳು ಎಂದು ಹೇಳಿದ್ದಾರೆ. ಹೈಕೋರ್ಟ್ ಈ ಅರ್ಜಿಯನ್ನು ಯಾವಾಗ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂಬ ಕುತೂಹಲದ ನಡುವೆಯೇ, ಜುಲೈ 20 ರಂದು ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಸಂಸತ್ ಭವನಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಸಿಜೆಪಿ ನಿರ್ಧರಿಸಿದೆ.
ಇದನ್ನೂ ಓದಿ : ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಬಿರುಗಾಳಿ : ಸಿಎಂ ಫಡ್ನವೀಸ್ ಜೊತೆ NCP ಬಣಗಳ ನಾಯಕರ ತಡರಾತ್ರಿ ರಹಸ್ಯ ಸಭೆ!


















