ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯದ ವೇಳೆ ನಡೆದ ವಿವಾದಾತ್ಮಕ ರನೌಟ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕೆಕೆಆರ್ ಬ್ಯಾಟರ್ ಅಂಕ್ರಿಶ್ ರಘುವಂಶಿ ಅವರ ‘ಫೀಲ್ಡ್ ಅಡ್ಡಿಪಡಿಸಿದ’ (obstructing the field) ವಿವಾದಾತ್ಮಕ ಔಟ್ಗೆ ಕಾರಣವಾದ ವೇಗಿ ಮೊಹಮ್ಮದ್ ಶಮಿ ಅವರಿಗೆ ಲಕ್ನೋ ಫ್ರಾಂಚೈಸಿಯು ‘ಐಕ್ಯೂ ಪ್ರಶಸ್ತಿ’ (IQ Award) ನೀಡಿ ಗೌರವಿಸಿದ್ದು, ಇದು ಕೆಕೆಆರ್ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.
ಭಾನುವಾರ (ಏಪ್ರಿಲ್ 26) ನಡೆದ ರೋಚಕ ಪಂದ್ಯದಲ್ಲಿ ಕೆಕೆಆರ್ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ಈ ಘಟನೆ ನಡೆದಿತ್ತು. ಕ್ರೀಸ್ಗೆ ಮರಳಲು ಯತ್ನಿಸುತ್ತಿದ್ದ ಯುವ ಬ್ಯಾಟರ್ ಅಂಕ್ರಿಶ್ ರಘುವಂಶಿ ಅವರ ಪ್ಯಾಡ್ಗೆ ಶಮಿ ಎಸೆದ ಚೆಂಡು ಬಡಿದಿತ್ತು. ರಘುವಂಶಿ ಬ್ಯಾಟ್ ಕ್ರೀಸ್ ಒಳಗಿದ್ದರೂ, ಲಕ್ನೋ ತಂಡ ಫೀಲ್ಡ್ಗೆ ಅಡ್ಡಿಪಡಿಸಿದ ಮನವಿ (ಅಪೀಲ್) ಮಾಡಿತು. ಟಿವಿ ಅಂಪೈರ್ ಪರಿಶೀಲಿಸಿ, ರಘುವಂಶಿ ‘ಒಬ್ಸ್ಟ್ರಕ್ಟಿಂಗ್ ದಿ ಫೀಲ್ಡ್’ ನಿಯಮದಡಿ ಔಟ್ ಎಂದು ತೀರ್ಪು ನೀಡಿದ್ದರು. ಈ ‘ಅತ್ಯುತ್ತಮ ತಂತ್ರಗಾರಿಕೆ’ ಹಾಗೂ ಪಂದ್ಯವನ್ನು ಸೂಪರ್ ಓವರ್ಗೆ ಕೊಂಡೊಯ್ಯಲು ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಶಮಿ ಅವರ ಸಮಯಪ್ರಜ್ಞೆಯನ್ನು ಮೆಚ್ಚಿ ಲಕ್ನೋ ತಂಡ ಅವರಿಗೆ ‘ಚಾಟ್ ಜಿಟಿಪಿ ಮ್ಯಾಚ್ ಐಕ್ಯೂ’ ಪ್ರಶಸ್ತಿ ನೀಡಿದೆ.
ಲ್ಯಾನ್ಸ್ ಕ್ಲೂಸ್ನರ್ ಪ್ರಶಂಸೆ
ಲಕ್ನೋ ತಂಡದ ಸಹಾಯಕ ತರಬೇತುದಾರ ಲ್ಯಾನ್ಸ್ ಕ್ಲೂಸ್ನರ್ ಈ ಪ್ರಶಸ್ತಿಯನ್ನು ಶಮಿಗೆ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, “ಕ್ರೀಸ್ಗೆ ಮರಳಲು ಓಡುತ್ತಿದ್ದ ಆಟಗಾರನತ್ತ ಚೆಂಡನ್ನು ಎಸೆದು ವಿಕೆಟ್ ಪಡೆದ ಹಾಗೂ ತೀವ್ರ ಒತ್ತಡದ ನಡುವೆಯೂ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಸೂಪರ್ ಓವರ್ಗೆ ಕೊಂಡೊಯ್ದ ಶಮಿ ಅವರ ಕೌಶಲ ಅದ್ಭುತವಾದದ್ದು” ಎಂದು ಪ್ರಶಂಸಿಸಿದರು. ಲಕ್ನೋ ತಂಡ ಈ ವಿಡಿಯೋವನ್ನು ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ.
ಕೆಕೆಆರ್ ಅಭಿಮಾನಿಗಳ ತೀವ್ರ ಅಸಮಾಧಾನ
ಲಕ್ನೋ ತಂಡದ ಈ ನಡೆ ಕೆಕೆಆರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ನೋ ತಂಡದ ವಿರುದ್ಧ ಕಿಡಿಕಾರಿರುವ ಅಭಿಮಾನಿಗಳು, ಇದೊಂದು ನಾಚಿಕೆಗೇಡಿನ ವರ್ತನೆ ಎಂದು ಟೀಕಿಸಿದ್ದಾರೆ. ಅಂಪೈರ್ ತೀರ್ಪಿನ ಬಳಿಕ ಅಪೀಲ್ ಹಿಂಪಡೆಯದ ಲಕ್ನೋ ನಾಯಕ ರಿಷಭ್ ಪಂತ್ ವಿರುದ್ಧವೂ ಅಭಿಮಾನಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ರಘುವಂಶಿಗೆ ದಂಡದ ಬರೆ
ವಿವಾದಾತ್ಮಕ ರೀತಿಯಲ್ಲಿ ಔಟ್ ಆದ ಬಳಿಕ ಮೈದಾನದಲ್ಲಿ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದ ಯುವ ಆಟಗಾರ ಅಂಕ್ರಿಶ್ ರಘುವಂಶಿಗೆ ಐಪಿಎಲ್ ಆಡಳಿತ ಮಂಡಳಿ ದಂಡ ವಿಧಿಸಿದೆ. ಐಪಿಎಲ್ ನೀತಿಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ಅವರ ಪಂದ್ಯದ ಸಂಭಾವನೆಯ ಶೇಕಡಾ 20ರಷ್ಟನ್ನು ದಂಡವಾಗಿ ಕಡಿತಗೊಳಿಸಲಾಗಿದ್ದು, ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಕೂಡ ನೀಡಲಾಗಿದೆ. ತೀವ್ರ ಹೈಡ್ರಾಮಾಗೆ ಸಾಕ್ಷಿಯಾದ ಈ ಪಂದ್ಯ ಅಂತಿಮವಾಗಿ ಸೂಪರ್ ಓವರ್ಗೆ ತೆರಳಿ, ಅದರಲ್ಲಿ ಕೆಕೆಆರ್ ತಂಡ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು.
ಇದನ್ನೂ ಓದಿ : ಹೆಲ್ಮೆಟ್ ಹಾಕದೆ ‘ರೈಡಿಂಗ್’ನ್ನೇ ಬಾರ್ ಮಾಡ್ಕೊಂಡ ಪುಂಡರು.. ವಿಡಿಯೋ ವೈರಲ್!



















